"ಹಿರೇಮಠ್, ರವಿಕೃಷ್ಣ ರೆಡ್ಡಿ ಯಾರು ಸಾಕಿದ ನಾಯಿ': ಎ.ಮಂಜುನಾಥ್
ರಾಮನಗರ, ಜನವರಿ 22: ನಮ್ಮ ಕಾರ್ಯಕರ್ತರನ್ನು ಸಾಕು ನಾಯಿಗಳು ಎನ್ನುವ ಸಾಮಾಜಿಕ ಹೋರಾಟಗಾರ ಎನಿಸಿಕೊಂಡಿರುವ ಎಸ್.ಆರ್.ಹಿರೇಮಠ್ ಮತ್ತು ರವಿಕೃಷ್ಣಾ ರೆಡ್ಡಿ ಇವರುಗಳು ಯಾರು ಸಾಕಿರುವ ನಾಯಿ ಎಂದು ಮಾಗಡಿ ಶಾಸಕ ಎ.ಮಂಜುನಾಥ್ ಪ್ರಶ್ನಿಸಿದರು.
ರಾಮನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಗಡಿ ಶಾಸಕ ಎ.ಮಂಜುನಾಥ್, ಸ್ಥಳ ವೀಕ್ಷಣೆ ನೆಪದಲ್ಲಿ ಗ್ರಾಮದಲ್ಲಿ ಗುಂಪು ಘರ್ಷಣೆಗೆ ಕಾರಣರಾದ ಎಸ್.ಆರ್.ಹಿರೇಮಠ ಹಾಗೂ ಜೊತೆಗೆ ಬಂದಿದ್ದವರ ವಿರುದ್ದ ದೂರು ದಾಖಲಿಸುವುದಾಗಿ ತಿಳಿಸಿದರು.
ಕೇತಗಾನಹಳ್ಳಿಯಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಠಿಸುವ ದುರುದ್ದೇಶದಿಂದ ಗ್ರಾಮಕ್ಕೆ ಭೇಟಿ ಕೊಟ್ಟಿರುವ ಎಸ್.ಆರ್.ಹೀರೆಮಠ ಅವರು ಮೊದಲೇ ಪೊಲೀಸರಿಗೆ ಏಕೆ ತಿಳಿಸಲಿಲ್ಲ. ಯಾರ ಆಮಿಷ ಮತ್ತು ಚಿತಾವಣೆಯಿಂದ ಇಲ್ಲಿಗೆ ಬಂದಿದ್ದೀರಿ ಎಂದು ಕೇಳಿದರು.

ಕಂದಾಯ ಇಲಾಖೆಯಲ್ಲಿ ಮಾಹಿತಿ ಪಡೆದು, ಕಾನೂನಿನ ಮೂಲಕ ಹೋರಾಟ ಮಾಡಿ ಸರ್ಕಾರದ ಆಸ್ತಿ ಒತ್ತುವರಿಯಾಗಿದ್ದರೆ ಬಿಡಿಸಬಹುದಿತ್ತು. ಆದರೆ ನೀವು ಗ್ರಾಮಕ್ಕೆ ಖುದ್ದು ಬಂದು ಶಾಂತಿ ಕದಡುವ ಮೂಲಕ ಪ್ರಚೋದನೆ ಮಾಡಿ ಗ್ರಾಮದಲ್ಲಿ ಗುಂಪು ಘರ್ಷಣೆಗೆ ದಾರಿ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಕೇತಗಾನಹಳ್ಳಿಯಲ್ಲಿ ಕುಮಾರಸ್ವಾಮಿ ಅವರ 46 ಎಕರೆ 27 ಗುಂಟೆ ಜಮೀನಿದೆ ಸರಿಯಾಗಿ ಅಳತೆ ಮಾಡಿದರೆ ಇನ್ನೂ ಎರಡು ಎಕರೆ ಶಾರ್ಟೇಜ್ ಇದೆ. ಆದರೆ ಅವರ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ, ನಿಮಗೆ ಕಾನೂನು, ಕೋರ್ಟ್, ಇಲಾಖೆ ಇದೆ ಅಲ್ಲಿ ಹೋರಾಡಿ ಅದನ್ನ ಬಿಟ್ಟು ನಮ್ಮವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದರೆ ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಇನ್ನು ಡಿ.ಸಿ.ತಮ್ಮಣ್ಣ ವಿರುದ್ಧ ಮಾದೇಗೌಡರ ಹೋರಾಟದ ಬಳಿಕ ನಾಲ್ಕುವರೆ ಎಕರೆ ಸರ್ಕಾರಿ ಭೂಮಿಯನ್ನು ಬಿಟ್ಟಾಗಿದೆ. ಅದು ಈಗಾಗಲೇ ಸ್ಮಶಾನ ಜಾಗ ಆಗಿದೆ ಎಂದರು. ಕಂದಾಯ ಇಲಾಖೆ ಸರ್ಕಾರಿ ಜಾಗ ವಾಪಸ್ ತೆಗೆದುಕೊಳ್ಳುವುದಕ್ಕೆ ಯಾರ ಅಭ್ಯಂತರವೂ ಇಲ್ಲ, ನಾವು ಅದಕ್ಕೆ ಸಪೋರ್ಟ್ ಕೊಡ್ತೀವಿ. ಅದನ್ನ ಬಿಟ್ಟು ಸ್ವತಃ ಕೇತಗಾನಹಳ್ಳಿಗೆ ಭೇಟಿ ನೀಡಿ ಸ್ಥಳೀಯರಿಂದ ಬಲವಂತ ಹೇಳಿಕೆ ನೀಡುವಂತೆ ಪ್ರಚೋದನೆ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ಈಗಾಗಲೇ ನಮ್ಮ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿಯವರು ಹೇಳಿದ್ದಾರೆ, "ತಮ್ಮ ಜಮೀನಿನ ಸಂಪೂರ್ಣ ಮಾಹಿತಿ ನೀಡಲು ನಾನು ಸಿದ್ದ ಬಂದು ಪಡೆದುಕೊಳ್ಳಲಿ, ಯಾವ ದಾಖಲೆ ಬೇಕು ಕೇಳಿದರೆ ಕೊಡೋಕೆ ನಾನು ಸಿದ್ಧನಾಗಿದ್ದೇನೆ' ಎಂದಿದ್ದಾರೆ. ಆದರೆ ಯಾರದೋ ಕುಮ್ಮಕ್ಕಿನಿಂದ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿರೋದು ಚೆನ್ನಾಗಿರಲ್ಲ ಎಂದು ಎ.ಮಂಜುನಾಥ್ ಹರಿಹಾಯ್ದರು.












Click it and Unblock the Notifications