ಬೊಂಬೆನಾಡಿನ ಹೃದಯ ಭಾಗದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ
ರಾಮನಗರ, ಜುಲೈ 14; ಕಾಡಿನಲ್ಲಿರಬೇಕಾದ ಚಿರತೆ ಪಟ್ಟಣದ ಪ್ರತಿಷ್ಠಿತ ಜನ ವಸತಿ ಪ್ರದೇಶದಲ್ಲಿ ದರ್ಶನ ನೀಡಿದೆ. ದಿನನಿತ್ಯ ಸಾವಿರಾರು ರೂಪಾಯಿ ವಹಿವಾಟು ನಡೆಯುವ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ರಾಮನಗರ ಜಿಲ್ಲೆಯ ಬೊಂಬೆನಾಡು ಎಂಬ ಖ್ಯಾತಿಯ ಚನ್ನಪಟ್ಟಣದ ಎಂ. ಜಿ. ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡಿದೆ. ಸೋಮವಾರ ಮುಂಜಾನೆ 4.40ರ ಸುಮಾರಿನಲ್ಲಿ ಈಶ್ವರ ದೇವಾಲಯ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡು ಅಲ್ಲಿನ ನಿವಾಸಿಗಳನ್ನು ಭೀತಿಗೊಳಿಸಿದೆ.
ಹಳ್ಳಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡು ಪ್ರಾಣಿಗಳು ಇದೀಗ ನಗರದ ಹೃದಯ ಭಾಗಕ್ಕೆ ಕಾಲಿಡುತ್ತಿವೆ. ಸೋಮವಾರ ಮುಂಜಾನೆ ಶೋಭಿತಾ ಗಿರೀಶ್ ಎಂಬುವವರ ಮನೆಯ ಮುಂದೆ ಯಾರೋ ಜೋರಾಗಿ ಮಾತನಾಡುತ್ತಿದ್ದರು.

ಆಗ ಅವರು ಮನೆಯಿಂದ ಹೊರ ಬರುತ್ತಿದಂತೆಯೇ ಮನೆಯ ಮುಂದಿನ ರಸ್ತೆಯಲ್ಲಿಯೇ ಚಿರತೆ ಹೋಗಿದೆ. ಮನೆಯ ಮುಂದೆ ಚಿರತೆ ಕಂಡ ಶೋಭಿತ ಗಾಬರಿಯಾಗಿದ್ದರು. ಸಿಸಿಟಿವಿಯಲ್ಲಿಯೂ ಚಿರತೆ ಓಡಾಟದ ದೃಶ್ಯ ಸೆರೆಯಾಗಿದೆ.
ಎಂ. ಜಿ. ರಸ್ತೆಯಲ್ಲಿ ಕಳೆದ 7-8 ತಿಂಗಳ ಹಿಂದೆ ಕರಡಿ ಕಾಣಿಸಿಕೊಂಡಿತ್ತು. ಓರ್ವ ಮಹಿಳೆ ಮೇಲೆ ದಾಳಿ ಮಾಡಿ ಮಾರಣಾಂತಿಕವಾಗಿ ಗಾಯಗೊಳಿಸಿತ್ತು. ಅಲ್ಲದೇ ವಾಯು ವಿಹಾರಕ್ಕೆ ಬಂದ ಮಹಿಳೆ ಮೇಲೂ ದಾಳಿ ಮಾಡಿತ್ತು. ಇದೀಗ ಅದೇ ಬಡವಣೆಯಲ್ಲಿ ಚಿರತೆ ಕಾಣಿಸಿಕೊಂಡಿದೆ.
"ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಬೆಳಗ್ಗೆ 6 ಗಂಟೆ ತನಕ ಯಾರು ಮನೆಯಿಂದ ಹೊರ ಬರಬೇಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ" ಎನ್ನುತ್ತಾರೆ ಸ್ಥಳೀಯರಾದ ಶ್ರೀನಿವಾಸ್.
ಒಟ್ಟಾರೆ ಹಳ್ಳಿಗಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡು ಪ್ರಾಣಿಗಳು ಇದೀಗ ಪಟ್ಟಣ ಪ್ರದೇಶಕ್ಕೂ ಕಾಲಿಟ್ಟಿವೆ. ಎಂ. ಜಿ. ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡು ಇದೀಗ ನಗರದ ಜನತೆಯಲ್ಲಿ ಆತಂಕ ಮೂಡಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾಡು ಪ್ರಾಣಿಗಳು ನಾಡಿನತ್ತ ಬರದಂತ್ತೆ ಎಚ್ಚರ ವಹಿಸಬೇಕೆಂದು ಜನರು ಮನವಿ ಮಾಡಿದ್ದಾರೆ.












Click it and Unblock the Notifications