ರಾಜಕೀಯ ಕೇಂದ್ರ ಬಿಂದುವಾದ ರಾಮನಗರ ಕ್ಷೇತ್ರ: ಜೆಡಿಎಸ್, ಕಾಂಗ್ರೆಸ್ ಕಟ್ಟಿಹಾಕಲು ಬಿಜೆಪಿ ತಂತ್ರ
ramanagara,nikhil kumaraswamy,hd kumaraswamy,bjp,jds,congress,politics,karnataka assembly elections 2023,ರಾಮನಗರ,ಎಚ್ ಡಿ ಕುಮಾರಸ್ವಾಮಿ,ಬಿಜೆಪಿ,ಕಾಂಗ್ರೆಸ್,ಜೆಡಿಎಸ್,ರಾಜಕೀಯ,ಕರ್ನಾಟಕ ವಿಧಾನಸಭಾ ಚುನಾವಣೆ 2023,
ರಾಮನಗರ, ಫೆಬ್ರವರಿ 7: ರಾಜ್ಯ ರಾಜಕೀಯ ಸಮರಕ್ಕೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷ ಜೆಡಿಎಸ್ ಸಿದ್ಧವಾಗಿದೆ. ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ಕಾಂಗ್ರೆಸ್, ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ಹೋರಾಡುತ್ತಿವೆ.
ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರವನ್ನು ಬಿಜೆಪಿ ಟಾರ್ಗೆಟ್ ಮಾಡುತ್ತಿದೆ. ಈ ನಾಲ್ಕು ಜಿಲ್ಲೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪ್ರಬಲ ಪೈಪೋಟಿಯಿದ್ದು, ಎರಡು ಮದಗಜಗಳ ನಡುವೆ ಬಿಜೆಪಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಹೆಚ್ಚಾಗಿದೆ. ಇಲ್ಲಿ ಬಿಜೆಪಿಯತ್ತ ಜನ ತಿರುಗಿ ನೋಡಬೇಕಾದರೆ ಮೋದಿಯೇ ಬರಬೇಕಾಗಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯ ರಾಜ್ಯ ನಾಯಕರು ತಮ್ಮ ಸಾಧನೆಯನ್ನು ಹೇಳಿಕೊಂಡು ಮತ ಕೇಳುವ ಬದಲು ಪ್ರಧಾನಿ ಮೋದಿಯನ್ನು ತೋರಿಸುತ್ತಿದ್ದಾರೆ. ಈ ಹಿಂದಿನ ಚುನಾವಣೆಯಲ್ಲೂ ಕೂಡ ಇದನ್ನೇ ಮಾಡಿಕೊಂಡು ಬಂದಿದ್ದು ಅದನ್ನು ಮುಂದುವರೆಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆಗೈಯ್ಯುತ್ತಿದ್ದರೆ ಬಿಜೆಪಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಕಾಲದ ಭ್ರಷ್ಟಚಾರದ ಬಗ್ಗೆ ಮಾತನಾಡುತ್ತಿದೆ. ಆದರೆ ಯಾರಿಗೂ ಜನರ ಬಗ್ಗೆ ಕಾಳಜಿಯಿಲ್ಲ ಅಧಿಕಾರವಷ್ಟೇ ಮುಖ್ಯವಾಗಿದೆ ಎನ್ನುವುದು ಇಲ್ಲಿ ಸಾಬೀತಾಗುತ್ತಿದೆ.

ಜನರ ಆಯ್ಕೆಗೆ ಸಾಕ್ಷಿಯಾದ ಇತ್ತೀಚಿನ ಚುನಾವಣೆಗಳು
ಚುನಾವಣೆ ಬಂದಾಗ ರಾಜಕೀಯ ಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಪಗಳನ್ನು ಮಾಡುವುದು ಮಾಮೂಲಿಯಾಗಿದೆ. ಹಾಗೆಂದು ಭ್ರಷ್ಟಾಚಾರದ ಬಗ್ಗೆ ಜನರಿಗೆ ಗೊತ್ತಿಲ್ಲವೆಂದಲ್ಲ. ಚುನಾವಣೆ ವೇಳೆ ಯಾರು ಏನೆಂದರೂ ತಾವೇನು ಮಾಡಬೇಕೋ ಅದನ್ನೇ ಮಾಡುತ್ತಾರೆ ಎಂಬುದಕ್ಕೆ ಇತ್ತೀಚಿನ ಚುನಾವಣೆಗಳ ಫಲಿತಾಂಶಗಳು ಸಾಕ್ಷಿಯಾಗಿವೆ.
ಬಿಜೆಪಿ ಹಿಂದುತ್ವದ ಮೇಲೆ ಅಸ್ತಿತ್ವ ಕಂಡುಕೊಂಡ ಪಕ್ಷವಾಗಿದ್ದು, ಅದರಿಂದಲೇ ಅದು ನೆಲೆಯೂರಿದೆ. ಹಾಗೆಂದು ಹಿಂದೂಗಳೆಲ್ಲರೂ ಬಿಜೆಪಿಯನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುವುದಿಲ್ಲ. ಹೀಗಾಗಿ ಬಿಜೆಪಿ ಪಕ್ಷವನ್ನು ತೆಗಳುವ ಭರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ನ ಕೆಲವು ನಾಯಕರು ನೇರವಾಗಿ ಹಿಂದೂ ವಿರೋಧಿ ಹೇಳಿಕೆ ನೀಡುತ್ತಿರುವುದು ಗೋಚರಿಸುತ್ತದೆ.

ಕಾಂಗ್ರೆಸ್ ಸಹಾಯದಿಂದ ಗೆಲುವು ಕಂಡಿದ್ದ ಜೆಡಿಎಸ್
ಚುನಾವಣೆ ಸಂದರ್ಭದ ಕೆಲವೊಂದು ಹೇಳಿಕೆಗಳು ಪಕ್ಷಕ್ಕೆ ಭಾರೀ ಹೊಡೆತ ನೀಡುವ ಸಾಧ್ಯತೆ ಹೆಚ್ಚಿದೆ. ಆರೋಪ ಪ್ರತ್ಯಾರೋಪಗಳು ದಿನಕಳೆದಂತೆ ಹೆಚ್ಚಾಗಲಿದ್ದು, ಚುನಾವಣೆ ಘೋಷಣೆ ಬಳಿಕ ತಾರಕಕ್ಕೇರಿದರೂ ಅಚ್ಚರಿಯಿಲ್ಲ. ಇದೆಲ್ಲದರ ನಡುವೆ ಮೂರು ರಾಜಕೀಯ ಪಕ್ಷಗಳು ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನಗೆಲ್ಲಲು ತಂತ್ರಗಳನ್ನು ರೂಪಿಸಿವೆ.
ಅದರಲ್ಲೂ ರಾಮನಗರ ಜಿಲ್ಲೆಯತ್ತ ಮೂರು ಪಕ್ಷಗಳು ದೃಷ್ಟಿ ನೆಟ್ಟಿವೆ. ರಾಮನಗರದ ಕೆಲವು ಭಾಗಗಳಲ್ಲಿ ಕಾಂಗ್ರೆಸ್ ಹಿಡಿತ ಸಾಧಿಸಿದರೆ, ಉಳಿದಂತೆ ಜೆಡಿಎಸ್ ಪ್ರಾಬಲ್ಯ ಹೊಂದಿದೆ. ಕಳೆದ ಬಾರಿ ಕುಮಾರಸ್ವಾಮಿ ಅವರು ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಗೆಲುವು ಸಾಧಿಸಿದ್ದರು. ಬಳಿಕ ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಉಪಚುನಾವಣೆ ವೇಳೆ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿದ್ದರು. ಆದರೆ ಅವತ್ತು ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿದ್ದುದರಿಂದ ಮತ್ತು ಕಾಂಗ್ರೆಸ್ ಬೆಂಬಲ ನೀಡಿದ್ದರಿಂದ ಅನಿತಾ ಕುಮಾರಸ್ವಾಮಿ ಅವರ ಗೆಲುವು ಸುಲಭವಾಗಿತ್ತು.

ನಿಖಿಲ್ ರಾಜಕೀಯ ಪ್ರವೇಶಕ್ಕೆ ನಾಂದಿ ಹಾಡುತ್ತಾ ರಾಮನಗರ
ಜೆಡಿಎಸ್ನಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ ಎಂಬ ಆರೋಪಗಳ ನಡುವೆಯೂ ಈ ಬಾರಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟು ಅನಿತಾ ಕುಮಾರಸ್ವಾಮಿ ಅವರು ರಾಜಕೀಯದಿಂದ ದೂರ ಉಳಿದಿದ್ದಾರೆ. ಆದರೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಪೈಪೋಟಿ ನೀಡಲು ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ. ಜೊತೆಗೆ ಬಿಜೆಪಿ ಕೂಡ ಕ್ಷೇತ್ರಕ್ಕೆ ಪ್ರವೇಶ ಮಾಡಿದೆ.
ಈಗಿನ ರಾಜಕೀಯ ಬೆಳವಣಿಗೆಯನ್ನು ಗಮನಿಸಿದರೆ ರಾಮನಗರ ಕ್ಷೇತ್ರ ರಾಜಕೀಯದ ಕೇಂದ್ರ ಬಿಂದುವಾಗಲಿದೆ. ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸಿ ಸೋಲು ಕಂಡ ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಮನಗರ ಕ್ಷೇತ್ರ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಸಹಕಾರಿಯಾಗುತ್ತಾ ಎಂಬ ಕುತೂಹಲ ಎಲ್ಲರನ್ನು ಕಾಡಲಾರಂಭಿಸಿದೆ. ಇಲ್ಲಿ ಕಾಂಗ್ರೆಸ್- ಜೆಡಿಎಸ್ ನಡುವೆ ಭಾರೀ ಪೈಪೋಟಿ ಏರ್ಪಡುವ ಸಾಧ್ಯತೆ ಹೆಚ್ಚಿದೆ.

ಜೆಡಿಎಸ್,ಕಾಂಗ್ರೆಸ್ ಕಟ್ಟಿಹಾಕಲು ಬಿಜೆಪಿ ತಂತ್ರ
ಕಾಂಗ್ರೆಸ್ ಹಾಗೂ ಜೆಡಿಎಸ್ ಸ್ಥಿತಿ ಮನಗಂಡ ಬಿಜೆಪಿ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಲು ಆರಂಭಿಸಿದ್ದಾರೆ. ಈ ನಡುವೆ ಬಿಡದಿಯಲ್ಲಿ ವಿಜಯ ಸಂಕಲ್ಪ ಅಭಿಯಾನ-ಶಕ್ತಿ ಕೇಂದ್ರ ಪ್ರಮುಖರ ಸಭೆ ನಡೆಸಲಾಗಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ಅನ್ನು ಕಟ್ಟಿ ಹಾಕಲು ಬೇಕಾದ ತಂತ್ರಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಚುನಾವಣೆಗೆ ಅಭ್ಯರ್ಥಿ ಇಲ್ಲದಿದ್ದರೂ ಪಕ್ಷಕ್ಕೆ ಹದಿನಾರು ಸಾವಿರ ಮತಬಂದಿತ್ತು. ಹೀಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಎರಡು ಪಕ್ಷಗಳಿಗೂ ಪ್ರಬಲ ಪೈಪೋಟಿ ನೀಡಬಹುದು ಎನ್ನುವುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ.
ಬಿಜೆಪಿ ಗೆಲ್ಲುವುದಿಲ್ಲ ಎನ್ನುವ ಕಡೆಗಳಲ್ಲಿ ಪಕ್ಷವನ್ನು ಗೆಲ್ಲಿಸಿದ್ದಾರೆ. ಹೀಗಿರುವಾಗ ಬಿಜೆಪಿಯನ್ನು ರಾಮನಗರದಲ್ಲಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರದ್ದಾಗಿದೆ. ಯಾರೇ ಎಷ್ಟೇ ವಿಶ್ವಾಸದ ಮಾತುಗಳನ್ನಾಡಿದರೂ ಬಿಜೆಪಿಗೂ ಕೂಡ ಭಯವಂತು ಇದ್ದೇ ಇದೆ. ಕ್ಷೇತ್ರದ ಮತದಾರರು ಯಾರನ್ನು ಆಯ್ಕೆ ಮಾಡುತ್ತಾರೆ ಎನ್ನುವುದು ಮಾತ್ರ ಕುತೂಹಲಕಾರಿಯಾಗಿದೆ.












Click it and Unblock the Notifications