ಜೆಡಿಎಸ್ಗೆ ಹಿನ್ನಡೆ; ಬಿಜೆಪಿ ಸೇರಲಿದ್ದಾರೆ ಎಂಎಲ್ಸಿ ಪುಟ್ಟಣ್ಣ
ರಾಮನಗರ, ಅಕ್ಟೋಬರ್ 30 : "ನಾನು ಜೆಡಿಎಸ್ ಬಿಡಲು ತೀರ್ಮಾನಿಸಿದ್ದೇನೆ. ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಈ ಕುರಿತು ಪ್ರಕಟಣೆ ಮಾಡುತ್ತೇನೆ" ಎಂದು ಜೆಡಿಎಸ್ ನಾಯಕ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹೇಳಿದರು.
ಬುಧವಾರ ರಾಮನಗರದಲ್ಲಿ ಮಾತನಾಡಿದ ಪುಟ್ಟಣ್ಣ, "ಜೆಡಿಎಸ್ನ ಬಹುತೇಕ ವಿಧಾನ ಪರಿಷತ್ ಸದಸ್ಯರು ಇದೇ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ, ಈಗಲೇ ನಾನು ಎಲ್ಲವನ್ನು ಹೇಳಲು ಆಗದು. ಮುಂದಿನ ದಿನಗಳಲ್ಲಿ ಎಲ್ಲವನ್ನು ಸ್ಪಷ್ಟಪಡಿಸುತ್ತೇನೆ" ಎಂದರು.
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ಪುಟ್ಟಣ್ಣ, "ಕೆಲವರಿಗೆ ಯಾರಿಗೆ ನೋವಾದರೂ, ಯಾರು ಸತ್ತರೂ ಏನು ಅನ್ನಿಸಲ್ಲ" ಎಂದು ಹೇಳಿದರು.
ಜೆಡಿಎಸ್ ಅಸಮಾಧಾನಿತ ನಾಯಕರ ಸಭೆ ರದ್ದು; ಹೊರಟ್ಟಿ ಹೇಳಿದ್ದೇನು?
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಮೂರು ಬಾರಿ ಪುಟ್ಟಣ್ಣ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಜೆಡಿಎಸ್ ಪಕ್ಷದ ಚಟುವಟಿಕೆಗಳಿಂದ ದೂರವಾಗಿರುವ ಅವರು ಈಗ ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ್ದಾರೆ.
ನಾಯಕತ್ವ ತ್ಯಜಿಸುವ ಮಾತನಾಡಿದ ಎಚ್. ಡಿ. ಕುಮಾರಸ್ವಾಮಿ
ಪರಿಷತ್ ಸದಸ್ಯರು ಬಿಜೆಪಿಗೆ ಸೇರ್ಪಡೆ
"ಜೆಡಿಎಸ್ನ ಬಹುತೇಕ ಪರಿಷತ್ ಸದಸ್ಯರು ಬಿಜೆಪಿ ಸೇರುವ ತೀರ್ಮಾನಕ್ಕೆ ಬಂದಿದ್ದೇವೆ. ಬಸವರಾಜ ಹೊರಟ್ಟಿ ಅವರೂ ಈ ಬಗ್ಗೆ ಮಾತನಾಡಿದ್ದು, ಚರ್ಚೆ ಮಾಡೋಣ ಎಂದಿದ್ದಾರೆ. ಆದರೆ, ಈಗಲೇ ನಾನು ಎಲ್ಲವನ್ನು ಹೇಳಲು ಆಗದು" ಎಂದು ಪುಟ್ಟಣ್ಣ ಹೇಳಿದರು.
2020ರ ತನಕ ಅವಧಿ ಇದೆ
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಪುಟ್ಟಣ್ಣ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. 2020ರ ತನಕ ಪರಿಷತ್ ಸದಸ್ಯತ್ವದ ಅವಧಿ ಇದೆ. ಶೀಘ್ರದಲ್ಲೇ ಅವರು ಬಿಜೆಪಿ ಸೇರುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.
2018ರ ವಿಧಾನಸಭೆ ಚುನಾವಣೆ
2018ರ ವಿಧಾನಸಭೆ ಚುನಾವಣೆಯಲ್ಲಿ ಪುಟ್ಟಣ್ಣ ಯಶವಂತಪುರದಿಂದ ಕಣಕ್ಕಿಳಿಯುವ ಮಾತು ಬಲವಾಗಿ ಹಬ್ಬಿತ್ತು. ಅಂತಿಮವಾಗಿ ಜಗ್ಗೇಶ್ ಕಣಕ್ಕಿಳಿದು ಸೋಲು ಕಂಡಿದ್ದರು. ಈಗ ಪುಟ್ಟಣ್ಣ ಬಿಜೆಪಿ ಸೇರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಪರಿಷತ್ ಸದಸ್ಯರ ಅಸಮಾಧಾನ
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಎಚ್. ಡಿ. ಕುಮಾರಸ್ವಾಮಿ ವಿಧಾನ ಪರಿಷತ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ, ಯಾವುದೇ ಸ್ಥಾನಮಾನ ನೀಡಿಲ್ಲ ಎಂಬುದು ಹಲವು ನಾಯಕರ ಆರೋಪ. ಹಿರಿಯ ನಾಯಕ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಅಸಮಾಧಾನಗೊಂಡ ನಾಯಕರು ಸಭೆ ನಡೆಸಿದ್ದರು.