ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ ಎಂದ ಜೆಡಿಎಸ್ ನ ಮಾಜಿ ಉಪ ಸಭಾಪತಿ ಪುಟ್ಟಣ್ಣ
ರಾಮನಗರ, ಜನವರಿ 29: ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಾಣೆಗೆ ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಜೆಡಿಎಸ್ ಮಾಜಿ ವಿಧಾನ ಪರಿಷತ್ ಉಪ ಸಭಾಪತಿ ಪುಟ್ಟಣ್ಣ ಹೇಳಿದರು.
ಚನ್ನಪಟ್ಟಣದಲ್ಲಿ ಮಾತನಾಡಿದ ಪುಟ್ಟಣ್ಣ ಅವರು, ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಾಣೆಗೆ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ. ಶೇ. 100 ರಷ್ಟು ಗೆಲ್ಲುವ ವಿಶ್ವಾಸವಿದೆ, ಜೆಡಿಎಸ್ ನಲ್ಲಿದ್ದಾಗ ಚುನಾವಣೆ ಗೆಲ್ಲುವ ಭಯವಿತ್ತು, ಆದರೆ ಈಗ ನನಗೆ ಯಾವುದೇ ಭಯವಿಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೆಸರೇಳದೇ ಟಾಂಗ್ ಕೊಟ್ಟರು.
ಜೆಡಿಎಸ್ ತೊರೆದು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆಮಾಡುವುದರ ಕುರಿತು ಇಂದು ಚನ್ನಪಟ್ಟಣದಲ್ಲಿ ಶಿಕ್ಷಕರ ಸಭೆ ನಡೆಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಧ್ಯಮಗಳೂಂದಿಗೆ ಮಾತನಾಡಿದ ಅವರು ತಮ್ಮ ಮಾತಿನ ಉದ್ದಕ್ಕೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.

ನನ್ನ ಕ್ಷೇತ್ರದ 36 ವಿಧಾನ ಸಭಾ ಕ್ಷೇತ್ರಗಳಲ್ಲಿ 4-5 ಜೆಡಿಎಸ್ ಶಾಸಕರು, 8-10 ಕಾಂಗ್ರೆಸ್ ಶಾಸಕರು ಹಾಗೂ 25 ಬಿಜೆಪಿ ಶಾಸಕರು ಪ್ರತಿನಿಧಿಸುತ್ತಾರೆ. ಹಾಗಾಗಿ ಈ ಬಾರಿ ಗೆಲುವು ಸಲೀಸು. ನಾನು ಸುಳ್ಳು ಮತ್ತು ಮೋಸ ಮಾಡುವವನಲ್ಲ, ಸುಳ್ಳು ಹೇಳಿ ಮೋಸ ಮಾಡುವ ಸಂದರ್ಭ ಬಂದರೆ ರಾಜಕೀಯ ಬಿಡುತ್ತೇನೆ. ಶೈಕ್ಷಣಿಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಜೆಡಿಎಸ್ ಪಕ್ಷದಲ್ಲಿ ತನಗಾಗಿರುವ ತೊಂದರೆ ಬಗ್ಗೆ ಮಾತನಾಡಿದ ಪುಟ್ಟಣ್ಣ, "ಅತ್ತೆ ಕೊಟ್ಟ ಕಾಟ ಸೊಸೆಗೆ ಗೊತ್ತು, ಸೊಸೆ ಕೊಟ್ಟ ಕಾಟ ಅತ್ತೆಗೆ ಗೊತ್ತು' ಅದೇ ರೀತಿ ನಮಗಾಗಿರುವ ಸಮಸ್ಯೆಗಳು ನಮಗೆ ಗೊತ್ತಿದೆ. ಸಮಯ ಸಂದರ್ಭ ಬರಲಿ ಮಾತಾಡ್ತೇನೆ ಎಂದರು.

ಪ್ರಸ್ತುತ ಈ ವ್ಯವಸ್ಥೆಯಲ್ಲಿ ಯಾರ್ಯಾರು ಏನೇನು ಆಗಿದ್ದಾರೆಂದು ನೋಡಿದ್ದೇವೆ. ಈಗ ಗುಡ್ಡನೇ ಕುಸಿಯುತ್ತಿದೆ, ಅದನ್ನು ಕಾಪಾಡಿಕೊಳ್ಳಲಿ ಅಷ್ಟೇ. ಪಕ್ಷಕ್ಕೆ ಪ್ರತಿಯೊಬ್ಬ ಕಾರ್ಯಕರ್ತನು ಕೂಡ ಮುಖ್ಯ, ಜೆಡಿಎಸ್ ಪಕ್ಷದಲ್ಲಿ ಒಂದೊಂದೇ ಇಟ್ಟಿಗೆಗಳು ಕಳಚಿಕೊಳ್ಳುತ್ತಿವೆ. ಅವರಿಗೆ ಒಳ್ಳೆಯದಾಗಲಿ ಎಂದು ಮಾಜಿ ಸಿಎಂ ಹೆಚ್ಡಿಕೆ ಹೆಸರೇಳದೆ ಚಾಟಿ ಬೀಸಿದರು.












Click it and Unblock the Notifications