ಕಾಡಾನೆ ಹಿಂಡಿಗೆ ಆಗುವ ಡಿಕ್ಕಿ ತಪ್ಪಿಸುವ ಯತ್ನದಲ್ಲಿ ಹಳ್ಳಕ್ಕೆ ಉರುಳಿದ ಬಸ್
ಕನಕಪುರ (ರಾಮನಗರ ಜಿಲ್ಲೆ), ಸೆಪ್ಟೆಂಬರ್ 8: ಆನೆಗಳಿಗೆ ಡಿಕ್ಕಿ ಆಗುವುದನ್ನು ತಪ್ಪಿಸುವ ಯತ್ನದಲ್ಲಿ ಸರ್ಕಾರಿ ಬಸ್ ಹಳ್ಳಕ್ಕೆ ಉರುಳಿದೆ. ಕಾಡಾನೆಗಳಿಗೆ ಡಿಕ್ಕಿ ತಪ್ಪಿಸಲು ಹೋಗಿ ಸರ್ಕಾರಿ ಬಸ್ ಹಳ್ಳಕ್ಕೆ ಉರುಳಿದ ಘಟನೆ ಕನಕಪುರ ತಾಲೂಕಿನ ಶಿವಗಿರಿ ಕ್ಷೇತ್ರದ ಹನುಮಂತನಕಲ್ಲು ಗ್ರಾಮದ ಬಳಿ ನಡೆದಿದೆ.
ಸಂಗಮ- ಕನಕಪುರ ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ಬಸ್ ತೆರಳುತ್ತಿದ್ದ ಸಮಯದಲ್ಲಿ ಬಸ್ ಗೆ ಅಡ್ಡಲಾಗಿ ಕಾಡಾನೆಗಳು ಬಂದ ಕಾರಣ ಡಿಕ್ಕಿ ತಪ್ಪಿಸಲು ಯತ್ನಿಸಿದಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್ ಹಳ್ಳಕ್ಕೆ ಉರುಳಿದೆ.
ಸರ್ಕಾರಿ ಬಸ್ ಶಿವಗಿರಿ ಕ್ಷೇತ್ರದಿಂದ ಬೆಂಗಳೂರಿಗೆ ಹೊರಟಿತ್ತು. ಬಸ್ ನಲ್ಲಿ ಸುಮಾರು 14 ಮಂದಿ ಪ್ರಯಾಣಿಕರಿದ್ದರು. ಕೆಲವರಿಗೆ ಸಣ್ಣ- ಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ. ಎಲ್ಲರೂ ಅಪಾಯದಿಂದ ಪಾರಾಗಿದ್ದು, ಪ್ರಯಾಣಿಕರು ಬೇರೆ ವಾಹನದಲ್ಲಿ ಪ್ರಯಾಣ ಮುಂದುವರಿಸಿದರು.

ಕಾವೇರಿ ವನ್ಯಜೀವಿ ವಲಯದ ಪಕ್ಕದಲ್ಲೇ ಶಿವಗಿರಿ ಕ್ಷೇತ್ರವಿದ್ದು, ಇಲ್ಲಿ ಕಾಡಾನೆಗಳ ಸಂಚಾರ ಮಾಮೂಲಾಗಿದೆ. ಭಾನುವಾರ ಆನೆಗಳ ಹಿಂಡು ರಸ್ತೆ ದಾಟುವಾಗ ಘಟನೆ ನಡೆದಿದೆ. ಈ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications