ಕುಡಿದ ಅಮಲಿನಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಭೂಪ
ರಾಮನಗರ, ಜನವರಿ 12 : ಕುಡಿದ ಅಮಲಿನಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ದೂರು ನೀಡಲು ಬಂದವ ಕುಡಿದ ಅಮಲಿನಲ್ಲಿ ತಾನೇ ಜೈಲು ಸೇರಿರುವುದು ವಿಪರ್ಯಾಸದ ಸಂಗತಿಯಾಗಿದೆ.
ರಾಮನಗರ ತಾಲ್ಲೂಕಿನ ವಿಭೂತಿಕೆರೆ ನಿವಾಸಿ ರಾಮು (35) ಎಂಬಾತನೇ ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಲು ಕಂಠಪೂರ್ತಿ ಮದ್ಯ ಸೇವಿಸಿ ಬಂದಿದ್ದು, ಈ ವೇಳೆ ಗ್ರಾಮಾಂತರ ಠಾಣೆಯ ಪೇದೆ ಪ್ರವೀಣ್ ಸ್ವಲ್ಪ ಹೊತ್ತು ಕಾಯಿರಿ ದೂರು ಪಡೆಯುತ್ತೆವೆ ಎಂದ ತಕ್ಷಣವೇ ಆಕ್ರೋಶಗೊಂಡ ರಾಮು ಕರ್ತವ್ಯನಿರತ ಪೋಲೀಸರಿಗೆ ಕಪಾಳಮೋಕ್ಷ ನಡೆಸಿ ಗಲಾಟೆ ಮಾಡಿದ್ದಾನೆ.
ಅಷ್ಟರಲ್ಲಿ ಠಾಣೆಯ ಮುಖ್ಯ ಪೇದೆ ಮುತ್ತುರಾಜು ಅವರು ರಾಮುವಿಗೆ ಹೊರಗಡೆ ಹೋಗಿ ಮಾತನಾಡಿ, ಇದು ಪೊಲೀಸ್ ಠಾಣೆ. ಇಲ್ಲಿ ನಿಶ್ಯಬ್ದ ಕಾಪಾಡಬೇಕು ಎಂದಿದ್ದಾರೆ. ಇದರಿಂದ ಇನ್ನಷ್ಟು ರೊಚಿಗೆದ್ದ ಆರೋಪಿ ರಾಮು ಪೇದೆಯ ಮುಖಕ್ಕೆ ಹೊಡೆದಿದ್ದಾನೆ. ಪೇದೆಯ ತುಟಿ ಸೇರಿದಂತೆ ಕೆನ್ನೆ ಗಾಯಗೊಂಡಿವೆ.

ಈ ಸಂಬಂಧ ನಗರ ಠಾಣೆಯಲ್ಲಿ ಮುಖ್ಯ ಪೇದೆ ಮುತ್ತುರಾಜು ಅವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಎಂದು ದೂರು ನೀಡಿದ್ದಾರೆ. ಸ್ವಯಂ ದೂರು ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.












Click it and Unblock the Notifications