ಡಿಕೆಶಿ ಸಿಎಂ ಆಗಲಿ ಎಂದು ಕೇಶ ಮುಂಡನ ಮಾಡಿಸಿಕೊಂಡ ಅಭಿಮಾನಿಗಳು
ರಾಮನಗರ, ಮೇ 06 : ಇಂಧನ ಸಚಿವ, ಪ್ರಭಾವಿ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಯಾಕೆ ನಾನು ಮುಖ್ಯಮಂತ್ರಿ ಅಗಬಾರದು ಎಂದು ಹೇಳಿಕೆ ನೀಡಿದ ಬೆನ್ನಲ್ಲೇ, ಡಿಕೆಶಿ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿ ಎಂದು ಇಬ್ಬರು ಅಭಿಮಾನಿಗಳು ಕೇಶಮುಂಡನೆ ಮಾಡಿಸಿಕೊಂಡು ಅಭಿಮಾನ ಮೆರೆದಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ.ರೇವಣ್ಣ ಪರ ಪ್ರಚಾರ ನಡೆಸಲು ತಾಲೂಕಿನ ಹರೂರು ಗ್ರಾಮಕ್ಕೆ ಡಿ.ಕೆ.ಶಿವಕುಮಾರ್ ಬಂದ ವೇಳೆ ಸತೀಶ್ ಹಾಗೂ ಚಿಕ್ಕಬೆಟ್ಟೇಗೌಡ ಎಂಬ ಇಬ್ಬರು ಅಭಿಮಾನಿಗಳು ನಮ್ಮ ನೆಚ್ಚಿನ ನಾಯಕ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಬೇಕೆಂಬ ಆಸೆಯಿಂದ ಗ್ರಾಮದ ಮಾರಮ್ಮ ದೇವಿಗೆ ಹರಕೆ ಹೊತ್ತು ತಲೆ ಮುಡಿ ಕೊಟ್ಟರು.

ನಂತರ ಮಾತನಾಡಿದ ಸತೀಶ್ ಮತ್ತು ಚಿಕ್ಕಬೆಟ್ಟೇಗೌಡ, ಶಿವಕುಮಾರ್ ಒಕ್ಕಲಿಗ ಸಮುದಾಯದ ಮುಖಂಡರು ಎನ್ನುವ ಅಭಿಮಾನ. ಅವರ ಅಭಿವೃದ್ಧಿ ಪರ ಕೆಲಸಗಳನ್ನು ನೋಡಿ ನಮಗೆ ಪ್ರೇರಣೆಯಾಗಿದೆ. ಈ ಬಾರಿ ಕಾಂಗ್ರೆಸ್ 150 ಸ್ಥಾನ ಗೆದ್ದು, ಅಧಿಕಾರ ಬರುತ್ತದೆ. ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿಕೆಶಿ ಅವರು ಇಬ್ಬರೂ ಅಭಿಮಾನಿಗಳ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ನಮಗಾಗಿ ತಲೆ ಬೋಳಿಸಿಕೊಂಡ ಅಭಿಮಾನಿಗಳ ಪ್ರೀತಿ ಅಭಿಮಾನಕ್ಕೆ ನಮಸ್ಕಾರ. ಸಂದರ್ಭ ಬರುತ್ತದೆ ದೇವರಿದ್ದಾನೆ ಎಂದು ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದರು.

ನಿನ್ನೆಯಷ್ಟೇ ಚಾಮುಂಡೇಶ್ವರಿಯಲ್ಲಿ ಸಿಎಂ ಸಿದ್ದರಾಮಯ್ಯ ಗೆಲುವಿಗಾಗಿ ಕಾರ್ಯಕರ್ತರು ಮುಡಿ ಕೊಟ್ಟ ಘಟನೆ ನಡೆದಿತ್ತು.












Click it and Unblock the Notifications