ಪಂಚರತ್ನ ರಥಯಾತ್ರೆ ಯಶಸ್ಸು ಕಂಡು ಸಿ.ಪಿ.ವೈ ಹತಾಶರಾಗಿದ್ದಾರೆ: ನಿಖಿಲ್ ಕುಮಾರಸ್ವಾಮಿ
ರಾಮನಗರ, ಡಿಸೆಂಬರ್, 25: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರನ್ನು 50 ಸಾವಿರಕ್ಕೂ ಹೆಚ್ಚಿನ ಅಂತರದ ಮತಗಳನ್ನು ನೀಡಿ ಆಶೀರ್ವಾದ ಮಾಡುತ್ತಾರೆ. ಕಳೆದ ವಾರ ಕ್ಷೇತ್ರದಲ್ಲಿ ನಡೆದ ಪಂಚರತ್ನ ರಥಯಾತ್ರೆಗೆ ಸೇರಿದ್ದ ಜನಸ್ತೋಮವೇ ಇದಕ್ಕೆ ಸಾಕ್ಷಿಯಾಗಿದೆ. ಇದನ್ನು ಗಮನಿಸಿದ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹತಾಶರಾಗಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಮನಗರದಲ್ಲಿ ವ್ಯಂಗ್ಯವಾಡಿದರು.
ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಘೋಷಣೆಯದ ನಂತರದಲ್ಲಿ ಕ್ಷೇತ್ರದ ಪ್ರವಾಸ ಕೈಗೊಂಡಿರುವ ನಿಖಿಲ್ ಕುಮಾರಸ್ವಾಮಿ, ಜಿಲ್ಲಾ ಕ್ರೀಡಾಂಗಣದಲ್ಲಿ ಕರಾಟೆ ವಿದ್ಯಾರ್ಥಿಗಳಿಗೆ ಮ್ಯಾಟ್ ವಿತರಣೆ ಮಾಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬೊಂಬೆನಗರಿ ಚನ್ನಪಟ್ಟಣದಲ್ಲಿ ಸಮಾವೇಶಕ್ಕಿಂತ ಹೆಚ್ಚಿನ ಸಂಖ್ಯೆ ಜನರು ಭಾಗವಹಿಸಿ ಪಂಚರತ್ನ ರಥಯಾತ್ರೆಗೆ ಬೆಂಬಲ ಸೂಚಿಸಿದ್ದನ್ನು ಗಮನಿಸಿರುವ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಹತಾಶತಾಗಿದ್ದಾರೆ. ಸಿ.ಪಿ. ಯೋಗೆಶ್ವರ್ ಅವರು ತುಂಬಾ ನೋವಿನಲ್ಲಿ ಇದ್ದಾರೆ. ಜೆಡಿಎಸ್ ಪಕ್ಷಕ್ಕೆ ಹಾಗೂ ಕುಮಾರಣ್ಣನವರಿಗೆ ಇರುವ ಜನ ಬೆಂಬಲ ನೋಡಿ ಅವರಿಗೆ ತಡೆದುಕೊಳ್ಳಲು ಅಗುತ್ತಿಲ್ಲ. ಅವರ ಮಾತುಗಳಲ್ಲಿ ಸ್ಪಷ್ಟವಾಗಿ ಅರ್ಥವಾಗುತ್ತಾ ಇದೆ. ಕುಮಾರಣ್ಣ ಕ್ಷೇತ್ರದ ಶಾಸಕರಾದ ನಂತರ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಸಿ.ಪಿ. ಯೋಗೇಶ್ವರ್18 ವರ್ಷ ಆಡಳಿತ ನಡೆಸಿದರೂ ಯಾವುದೇ ಅಭಿವೃದ್ಧಿಯಾಗಿಲ್ಲ. ಚನ್ನಪಟ್ಟಣದ 130ಕ್ಕೂ ಹೆಚ್ಚು ಕೆರೆಕಟ್ಟೆಗಳು ತುಂಬಿದ್ದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಕಾಲದಲ್ಲಿ. ಹಾಗಾಗಿ ಚನ್ನಪಟ್ಟಣದ ಜನ ಮತ್ತೊಮ್ಮೆ ಕುಮಾರಣ್ಣರನ್ನು ಕೈ ಹಿಡಿಯುತ್ತಾರೆ ಎನ್ನುವ ನಂಬಿಕೆ ಇದೆ ಎಂದು ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಸಿ.ಪಿ.ಯೋಗೇಶ್ವರ್ ವಿರುದ್ಧ ನಿಖಲ್ ವಾಗ್ದಾಳಿ
ಜೆಡಿಎಸ್ ಪಕ್ಷದಲ್ಲಿ ಕುಟುಂಬ ರಾಜಕರಣ ಮನೆ ಮಾಡಿದೆ ಎನ್ನುವ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ತಾವು ಪ್ರತಿನಿಧಿಸುತ್ತಿರುವ ಪಕ್ಷದಲ್ಲಿ ಯಾರದ್ದು ಕುಟುಂಬ ರಾಜಕಾರಣ ಇಲ್ಲವೇ?, ಬಿಜೆಪಿಯಲ್ಲಿ ಯಡಿಯೂರಪ್ಪ ಮತ್ತು ಅವರ ಮಕ್ಕಳು ಇದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಮತ್ತು ಅವರ ಮಗ ಇದ್ದಾರೆ. ಇನ್ನು ಡಿ.ಕೆ. ಶಿವಕುಮಾರ್ ಕುಟುಂದಿಂದ ನಾಲ್ಕು ಜನ ರಾಜಕೀಯದಲ್ಲಿ ಇದ್ದಾರೆ. ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ ಎಂದು ಹೇಳಿ? ಎಂದು ಸಿ.ಪಿ. ಯೋಗೆಶ್ವರ್ಗೆ ಪ್ರಶ್ನಿಸುವ ಮೂಲಕ ಸವಾಲ್ ಹಾಕಿದರು.

ಜನರ ಮುಂದೆ ಹೋಗಿ ಚುನಾವಣೆ ಮಾಡ್ತೇವೆ
ಚುನಾವಣೆ ಸಂದರ್ಭದಲ್ಲಿ ಅವರ ಮಕ್ಕಳು, ಪತ್ನಿ ಎಲ್ಲರೂ ಬಂದು ಸಿಪಿವೈ ಪರ ಚುನಾವಣೆ ಪ್ರಚಾರ ಮಾಡುತ್ತಾರೆ. ನಾನು ಯಾವತ್ತು ಕೂಡ ಅದರ ಬಗ್ಗೆ ಪ್ರಶ್ನೆ ಮಾಡುವುದಿಲ್ಲ. ಅವರ ರೀತಿ ಕೆಳಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ. ನಾವು ಜನರ ಮುಂದೆ ಹೋಗಿ ಚುನಾವಣೆ ಮಾಡುತ್ತೇವೆ. ಹಿಂಬಾಗಿಲಿನಿಂದ ಬಂದು ಚುನಾವಣೆಯನ್ನು ಮಾಡುತ್ತಿಲ್ಲ. ನನ್ನನ್ನು ಏನು ಎಂಎಲ್ಸಿ ಮಾಡಿ ಎಂದು ಕೇಳಿಲ್ಲ ಅಲ್ಲವಾ? ಎಂದು ಸಿ.ಪಿ.ವೈಗೆ ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದರು.

JDSನಲ್ಲಿ ನಿಷ್ಠಾವಂತ ಕಾರ್ಯಕರ್ತರಿದ್ದಾರೆ
ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಚುನಾವಣೆಗೆ ನಿಲ್ಲಿಸಿದ ಹೆಗ್ಗಳಿಕೆ ಜೆಡಿಎಸ್ ಪಕ್ಷಕ್ಕೆ ಇದೆ. ಅದಕ್ಕೆ ಸಾಕ್ಷಿಯಾಗಿ ಚನ್ನಪಟ್ಟಣದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ದಿ.ಸಿ.ಲಿಂ.ನಾಗರಾಜು ಅವರನ್ನು ಅಭ್ಯರ್ಥಿ ಮಾಡಿತ್ತು. ರಾಮನಗರ ಕ್ಷೇತ್ರದಲ್ಲೂ ಸಾಮಾನ್ಯ ಕಾರ್ಯಕರ್ತರಾದ ಕೆ.ರಾಜು ಅವರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಂಡಿದ್ದೇವೆ. ಪಕ್ಷ ಹಾಗೂ ಕಾರ್ಯಕರ್ತರ ಶ್ರಮದಿಂದ ಗೆದ್ದ ಕೆ.ರಾಜು ಇದೀಗ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ವಿರುದ್ಧ ನಿಖಿಲ್ ಆಕ್ರೋಶ
ರಾಮನಗರದ ಜನರನ್ನು ಕುಮಾರಸ್ವಾಮಿ ಗುಲಾಮರ ರೀತಿ ನೋಡುತ್ತಾ ಇದ್ದಾರೆ ಎಂಬ ಸಿ.ಪಿ.ವೈ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಗುಲಾಮಗಿರಿ ಮಾಡುವುದು ಬಿಜೆಪಿ ಪಕ್ಷದ ಸಂಸ್ಕೃತಿ, ನಮ್ಮ ಪಕ್ಷದ ಕಾರ್ಯಕರ್ತರು ನಿಷ್ಠಾವಂತರಿದ್ದಾರೆ. ಕುಮಾರಣ್ಣನ ಮೇಲೆ ಪ್ರೀತಿಯಿಂದ ಜನ ಬಂದು ಸೇರುತ್ತಾರೆ. ಜನ ಅವಕಾಶ ಮಾಡಿ ಕೊಟ್ಟರೆ ಅವರ ಸೇವೆ ಮಾಡಲು ಸಿದ್ಧವಾಗಿದ್ದೇವೆ. ಪ್ರಾಮಾಣಿಕವಾಗಿ ಜನರ ಸೇವೆ ಮಾಡಲು ಪ್ರಯತ್ನ ಮಾಡುತ್ತೇನೆ ಎಂದರು.












Click it and Unblock the Notifications