ಚನ್ನಪಟ್ಟಣದಲ್ಲಿ ರಂಗೇರಿದ ರಾಜಕೀಯ: ನಿಖಿಲ್-ಯೋಗೇಶ್ವರ್ ಜಟಾಪಟಿ
ರಾಮನಗರ ನವೆಂಬರ್ 12: ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಶಿಷ್ಟಾಚಾರ ಉಲ್ಲಂಘನೆ ಚಟಾಪಟಿ ನಡೆದ ಬೆನ್ನಲ್ಲೇ ಇದೀಗ ನಿಖಿಲ್ ಕುಮಾರಸ್ವಾಮಿ ಕ್ಷೇತ್ರ ಪ್ರವಾಸ ಆರಂಭಿಸಿದ್ದಾರೆ.
ತಂದೆಯ ಪರವಾಗಿ ನಿಖಿಲ್ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಿರುವುದು ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಹೇಳಿಕೆ ಹಾಗೂ ಪ್ರತಿ ಹೇಳಿಕೆಗೆ ಕಾರಣವಾಗಿದೆ. ನಿಖಿಲ್ ಕುಮಾರಸ್ವಾಮಿ ಹಾಗೂ ಸಿ.ಪಿ ಯೋಗೇಶ್ವರ್ ನಡುವೆ ಮಾತಿನ ಜಟಾಪಟಿ ಆರಂಭವಾಗಿದೆ.
ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕ್ಷೇತ್ರ ಪ್ರವಾಸ ಪ್ರಾರಂಭಿಸಿದ್ದಾರೆ. ಗ್ರಾಮಗಳಲ್ಲಿ ಜೆಡಿಎಸ್ ಮುಖಂಡರ ಸಭೆ ನಡೆಸಿದ ನಿಖಿಲ್ ಕುಮಾರಸ್ವಾಮಿ, ಕೆಲ ದಿನಗಳ ಹಿಂದೆ ಮರಣ ಹೊಂದಿದ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಕಾರ್ಯಕರ್ತರು ಮುಖಂಡರು ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ. ನಿಮ್ಮ ಸಮಸ್ಯೆಗಳಿಗೆ ಕುಮಾರಸ್ವಾಮಿ ಪರವಾಗಿ ನಿಮ್ಮ ಜೊತೆ ನಾನು ನಿಲ್ಲುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಮರಿಯಾನೆ ಎಂದು ಸಿ.ಪಿ ಯೋಗೇಶ್ವರ್ ಟೀಕೆ
ಕ್ಷೇತ್ರದ ಶಾಸಕರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅನುಪಸ್ಥಿತಿಯಲ್ಲಿ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿರುವ ನಿಖಿಲ್ ಕುಮಾರಸ್ವಾಮಿ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವ್ಯಂಗ್ಯವಾಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರು ಹಾಗೂ ಮುಖಂಡರಿಗೆ ನೀಡುತ್ತಿರುವ ಭರವಸೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಹಾಲಿ ವಿಧಾನಸಭಾ ಸದಸ್ಯ ಸಿ.ಪಿ.ಯೋಗೇಶ್ವರ್, ಅಂಬಾರಿಯನ್ನು ಆನೆ ಹೊರಬೇಕು ಅದನ್ನು ಬಿಟ್ಟು ಮರಿಯಾನೆ ಅಂಬಾರಿಯನ್ನು ಹೊರಲು ಸಾಧ್ಯವೇ ಎಂದು ವ್ಯಂಗ್ಯವಾಡಿದ್ದರು. ಕ್ಷೇತ್ರದ ಸಮಸ್ಯೆಗಳನ್ನು ಪರಿಶೀಲನೆ ಮಾಡಿ ಶಾಸಕರು ಬಗೆಹರಿಸಬೇಕು ಅದರ ಬದಲು ಅವರ ಮಗ ಶಾಸಕರ ಅಧಿಕಾರ ಬಳಸಲು ಸಾಧ್ಯವೇ ಎಂದು ಟೀಕಿಸಿದ್ದಾರೆ.

ನಮ್ಮ ಜನರ ಸಂಕಷ್ಟ ಕೇಳಲು ಬರಲು ಯಾರ ಅಪ್ಪಣೆ ಬೇಕಿಲ್ಲ
ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ತಿರುಗೇಟು ನೀಡಿರುವ ನಿಖಿಲ್ ಕುಮಾರಸ್ವಾಮಿ, ಅಂಬಾರಿ ಆನೆಗೆ ಇರಲಿ. ಮೊದಲು ಮರಿಯಾನೆಯನ್ನು ಇವರು ಜೀರ್ಣಿಸಿಕೊಳ್ಳಲಿ. ನಮ್ಮ ಜನರ ಸಂಕಷ್ಟ ಕೇಳಲು ಬರಲು ಯಾರ ಅಪ್ಪಣೆ ಬೇಕಿಲ್ಲ. ದೇವೇಗೌಡರ ಕುಟುಂಬದ ಜೊತೆ ಜಿಲ್ಲೆಗೆ ಅವಿನಾಭಾವ ಸಂಬಂಧವಿದೆ. ಹೀಗಾಗಿ ಇಲ್ಲಿನ ಜನರ ಕಷ್ಟ ಸುಖದಲ್ಲಿ ನಾನು ಭಾಗಿಯಾಗುವೆ. ಮಾಜಿ ಶಾಸಕ ಸಿ.ಪಿ ಯೋಗೇಶ್ವರ್ ಅವರ ಕುಟುಂಬದವರು ಏಕೆ ಚುನಾವಣೆ ವೇಳೆ ಬಂದು ಪ್ರಚಾರ ಮಾಡುತ್ತಾರೆ. ನಾವೆಂದು ಅವರನ್ನು ಪ್ರಶ್ನೆ ಮಾಡುವ ಸಣ್ಣತನದ ರಾಜಕಾರಣ ಮಾಡುವುದಿಲ್ಲ. ಜೆಡಿಎಸ್ ಯುವ ಘಟಕದ ಜವಾಬ್ದಾರಿ ನನ್ನ ಮೇಲಿದೆ ಹಾಗಾಗಿ ಪಕ್ಷ ಸಂಘಟನೆಯ ಮಾಡುವ ಜವಾಬ್ದಾರಿ ಮಾಡುತ್ತಿದ್ದೇನೆ ಎಂದರು.

ಯೋಗೇಶ್ವರ್ ಮಾಜಿ ಶಾಸಕರಾಗಿಯೇ ಉಳಿಯಲಿದ್ದಾರೆ
ಕ್ಷೇತ್ರದಲ್ಲಿ ಕಳೆದ 20 ವರ್ಷಗಳಲ್ಲಿ ಆಗದ ಅಭಿವೃದ್ಧಿ ನಾಲ್ಕು ವರ್ಷದಲ್ಲಿ ಆಗಿದೆ. ಸುಮಾರು 1,500 ಕೋಟಿಗೂ ಹೆಚ್ಚು ಅನುದಾನ ಕುಮಾರಸ್ವಾಮಿ ಅವರ ಅಧಿಕಾರದ ಅವಧಿಯಲ್ಲಿ ಚನ್ನಪಟ್ಟಣಕ್ಕೆ ಲಭಿಸಿದೆ. ರಸ್ತೆ, ಸೇತುವೆ, ನೀರಾವರಿ ಯೋಜನೆ ಸೇರಿದಂತೆ ಅನೇಕ ಅಭಿವೃದ್ಧಿ ಕಂಡಿದೆ. ಮುಂದಿನ ದಿನಗಳಲ್ಲಿ ಚನ್ನಪಟ್ಟಣ ಕ್ಷೇತ್ರ ಮಾದರಿ ತಾಲೂಕು ಆಗಲಿದೆ . ಇನ್ನೂ ಆರು ತಿಂಗಳು ಸಿ.ಪಿ.ಯೋಗೇಶ್ವರ್ ಕಾದು ನೋಡಲಿ. ಅವರಿಗೆ ಮುಂದಿನ ಚುನಾವಣೆಯಲ್ಲಿ ಜನ ಉತ್ತರ ನೀಡುತ್ತಾರೆ. ಮಾಜಿ ಶಾಸಕ ಯೋಗೇಶ್ವರ್ ಮಾಜಿ ಶಾಸಕರಾಗಿಯೇ ಉಳಿಯಲಿದ್ದಾರೆ ಲೇವಡಿ ಮಾಡಿದ್ದಾರೆ.

ನಿಖಿಲ್ ಕಳೆದ ನಾಲ್ಕುವರೆ ವರ್ಷದಿಂದ ಎಲ್ಲಿದ್ದರು..?
ಮುಂದಿನ ಚುನಾವಣೆಯ ನಂತರ ಮಾಜಿ ಶಾಸಕರು ಮಾಜಿ ಶಾಸಕರಾಗಿಯೇ ಉಳಿಯುತ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ನುಡಿದಿರುವ ಭವಿಷ್ಯಕ್ಕೆ ಸಿ.ಪಿ ಯೋಗೇಶ್ವರ್ ಟಾಂಗ್ ನೀಡಿದ್ದಾರೆ. ನಾನು ಹಾಲಿಯಾಗಬೇಕೋ, ಮಾಜಿಯಾಗಿ ಉಳಿಯಬೇಕೋ ಎನ್ನುವುದನ್ನು ತಾಲೂಕಿನ ಜನತೆ ಮುಂದಿನ ಚುನಾವಣೆಯಲ್ಲಿ ತೀರ್ಮಾನಿಸುತ್ತಾರೆ . ವಿಧಾನಸಭಾ ಚುನಾವಣೆ ಆರು ತಿಂಗಳು ಇರುವಾಗ ಕ್ಷೇತ್ರಕ್ಕೆ ಬರುತ್ತಿರುವ ನಿಖಿಲ್, ಕಳೆದ ನಾಲ್ಕುವರೆ ವರ್ಷದಿಂದ ಎಲ್ಲಿದ್ದರು..? ಈ ಮೊದಲು ಕುಮಾರಸ್ವಾಮಿ ಅವರ ಅನುಪಸ್ಥಿತಿಯಲ್ಲಿ ನಿಖಿಲ್ ತಾಲೂಕಿಗೆ ಏಕೆ ಬರಲಿಲ್ಲ ಎಂದು ಸಿಪಿವೈ ಪ್ರಶ್ನಿಸಿದ್ದಾರೆ.












Click it and Unblock the Notifications