ರಾಮನಗರ : 11 ಜನರಿಗೆ 4 ವರ್ಷದ ಜೀತದಿಂದ ಮುಕ್ತಿ ನೀಡಿದ ಜಿಲ್ಲಾಡಳಿತ
ರಾಮನಗರ, ಜೂನ್ 27 : ಆ ಜನರು ಜೀವನಾಧಾರಕ್ಕೆಂದು ಕೂಲಿಗಾಗಿ ಹೊರ ಜಿಲ್ಲೆಯಿಂದ ಬಂದಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಆ ಜಮೀನಿನ ಮಾಲೀಕ ಅವರನ್ನ ಜೀತಕ್ಕೆ ಇಟ್ಟುಕೊಂಡಿದ್ದ. ಕಳೆದ ನಾಲ್ಕು ವರ್ಷಗಳಿಂದ ಸರಿಯಾಗಿ ಹಣ ಕೊಡದೇ ಜೀತ ಮಾಡಿಸಿಕೊಳ್ಳುತ್ತಿದ್ದ.
ನಾಲ್ಕು ವರ್ಷಗಳಿಂದ ಜೀತ ಮಾಡುತ್ತಿದ್ದ ಕುಟುಂಬವನ್ನು ರಾಮನಗರ ಜಿಲ್ಲಾಡಳಿತ ಮುಕ್ತಿಗೊಳಿಸಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿಯೇ ಇಂತಹ ಪದ್ಧತಿ ಜೀವಂತವಾಗಿತ್ತು ಎಂಬುದು ವಿಷಾದಕರ ಸಂಗತಿಯಾಗಿದೆ.
ಬಾಲ್ಯ ಕಳೆದುಕೊಂಡ ಬಾಲಕಾರ್ಮಿಕ ಪದ್ಧತಿ ದೇಶದ ಘನತೆಗೆ ಅಂಟಿದ ಕಪ್ಪುಚುಕ್ಕಿ!
ಕಳೆದ 4 ವರ್ಷಗಳಿಂದ ತಮಿಳುನಾಡು ಮೂಲದ ಕುಟುಂಬವೊಂದನ್ನು ಜೀತಕ್ಕೆ ಇಟ್ಟುಕೊಂಡು ಹಣವನ್ನು ನೀಡಿದೆ ದುಡಿಸಿಕೊಳ್ಳುತ್ತಿದ್ದ ಘಟನೆ ಕನಕಪುರ ತಾಲ್ಲೂಕಿನ ಉಯ್ಯಲಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೋಟಿಯೂರ್ ಕೊಲೈ ಗ್ರಾಮದ ಮಾದಪ್ಪ ಹಾಗೂ ಕೆಂಚಮ್ಮ ದಂಪತಿಗಳ ಜೊತೆ ಅವರ ಮಕ್ಕಳನ್ನು ಸಹ ಜೀತಕ್ಕೆ ಇಟ್ಟುಕೊಳ್ಳಲಾಗಿತ್ತು.
ಇಂಟರ್ ನ್ಯಾಷನಲ್ ಜಸ್ಟಿಸ್ ಮಿಷನ್ ಎನ್ಜಿಓ ನೀಡಿದ ಮಾಹಿತಿ ಮೇರೆ ರಾಮನಗರ ಜಿಲ್ಲಾಡಳಿತ ಹಾಗೂ ಜೀತಕಾರ್ಮಿಕ ನಿರ್ಮೂಲನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ 11 ಜನರ ಕುಟುಂಬಕ್ಕೆ ಜೀತಪದ್ದತಿಯಿಂದ ಮುಕ್ತಿ ನೀಡಿ ರಕ್ಷಣೆ ಮಾಡಿದ್ದಾರೆ.
ಕಾರ್ ಬಾನಟ್ ಮೇಲೆ ಕಾರ್ಮಿಕನನ್ನು 4ಕಿಮೀ ಹೊತ್ತೊಯ್ದ ಅಧಿಕಾರಿ!
ಮಾದಪ್ಪ-ಕೆಂಚಮ್ಮ ದಂಪತಿಗಳನ್ನು ಕಳೆದ ನಾಲ್ಕು ವರ್ಷಗಳ ಹಿಂದೆ ಕುಂಬಾರದೊಡ್ಡಿ ಗ್ರಾಮದ ಶಿವಲಿಂಗಯ್ಯ ಎಂಬಾತ ಕೂಲಿಗಾಗಿ ಕರೆತಂದು ಮರಳವಾಡಿಯ ಪ್ಯಾರಾಸಾಬ್ ಎಂಬುವವರ ಬಳಿ ವರ್ಷಕ್ಕೆ 65 ಸಾವಿರ ರೂ.ಗಳಿಗೆ ಜೀತಕ್ಕೆ ಇರಿಸಿದ್ದ.
ಮೊದಲ ತಿಂಗಳಿನಲ್ಲಿ ಕೇವಲ 20 ಸಾವಿರ ರೂಪಾಯಿ ನೀಡಿದ್ದ ಪ್ಯಾರಾಸಾಬ್ ನಂತರ 10 ಸಾವಿರ ನೀಡಿದ್ದಾನೆ. ಬಳಿಕ ಆಗಾಗ 500 ಮತ್ತು 1000 ರೂಪಾಯಿಗಳನ್ನು ನೀಡ್ತಿದ್ದ. ಇನ್ನೂ ದಂಪತಿಗಳ 9 ಜನ ಮಕ್ಕಳಲ್ಲಿ ಹಿರಿಯ ಮಕ್ಕಳಾದ ಮದ್ದೂರಿ, ರುದ್ರ, ಲಕ್ಷ್ಮೀ ಮಾದೇವಿಯನ್ನು ಕುರಿ-ಮೇಕೆ ಮೇಯಿಸಲು ಕಳುಹಿಸಲಾಗುತ್ತಿತ್ತು.
ಪತಿ-ಪತ್ನಿಗೆ ತೋಟದಲ್ಲಿ ಕೆಲಸ ಮಾಡಲು ಹೇಳಲಾಗಿತ್ತು. ಇನ್ನೂ 2 ಬಾರಿ ಆಸ್ಪತ್ರೆಗೂ ಸಹ ಪತ್ನಿಯನ್ನು ಕರೆದೊಯ್ಯಲಾಗದೇ ಮಾದಪ್ಪ ತಾನೇ ಮುಂದೆ ನಿಂತು ಹೆರಿಗೆ ಮಾಡಿಸಿದ್ದಾನೆ. ಇದೀಗ ಎನ್ಜಿಓ ಹಾಗೂ ಜಿಲ್ಲಾಡಳಿತದಿಂದ ಜೀತದಿಂದ ಮುಕ್ತಿ ಪಡೆದ ಕುಟುಂಬ ಇದೀಗ ತಮ್ಮ ಊರಿಗೆ ತೆರಳಿ ಮಕ್ಕಳನ್ನು ಶಾಲೆಗೆ ಕಳುಹಿಸುವುದಾಗಿ ತಿಳಿಸಿದ್ದಾರೆ.
ಒಟ್ಟಾರೆ ಸಿಎಂ ತವರು ಜಿಲ್ಲೆಯಲ್ಲಿಯೇ ಇನ್ನೂ ಜೀತಪದ್ಧತಿ ಜೀವಂತವಾಗಿದೆ. ಅಲ್ಲದೇ ಜೀತಪದ್ದತಿಯಲ್ಲಿ ಸಿಲುಕಿರುವ ಎಷ್ಟೋ ಕುಟುಂಬಗಳು ಸಾಕಷ್ಟು ಕಷ್ಟಗಳಿಗೆ ಒಳಗಾಗಿವೆ.
ಜಿಲ್ಲಾಡಳಿತ ಜೀತದಲ್ಲಿರುವವರ ರಕ್ಷಣೆ ನಡೆಸಿ ಜೀತಪದ್ದತಿ ನಿರ್ಮೂಲನೆ ಮಾಡಬೇಕಿದ್ದು ಈ ಸಂಬಂಧ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಖಡಕ್ ಆದೇಶ ನೀಡಬೇಕಿದೆ.