ಐದು ವರ್ಷವಾದರೂ ನಿಲ್ಲಲಿಲ್ಲ ಕಿರುಕುಳ, ಮೂರು ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ
ರಾಯಚೂರು, ಆಗಸ್ಟ್ 21: ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬರು ತನ್ನ ಮೂರು ಮಕ್ಕಳೊಂದಿಗೆ ನಾರಾಯಣಪುರ ಬಲದಂಡೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ.
ನಸೀಮಾ ಮಹಿಬೂಬ್ (28), ಮಹ್ಮದ್ ಹನೀಫ್ ( 5) ಐಯಾನ್ (3) ರಿಗಾನ್ (1) ಮೃತಪಟ್ಟವರು. ಸಿರವಾರ ತಾಲೂಕಿನ ನಸೀಮಾಗೆ ಐದು ವರ್ಷದ ಹಿಂದೆ ದೇವದುರ್ಗದ ದೇವತಗಲ್ ಗ್ರಾಮದ ಮಹಿಬೂಬ್ ಎಂಬಾತನೊಂದಿಗೆ ಮದುವೆಯಾಗಿತ್ತು. ಮದುವೆಯಾದಾಗಿನಿಂದಲೂ ಗಂಡ, ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ದಿನನಿತ್ಯ ಕಿರುಕುಳ ಅನುಭವಿಸಿದ್ದ ನಸೀಮಾ, ಆಸ್ಪತ್ರೆಗೆ ಹೋಗಿ ಬರುವೆ ಎಂದು ಹೇಳಿ ಮಕ್ಕಳೊಂದಿಗೆ ನಾರಾಯಣಪುರ ಬಲದಂಡೆ ನಾಲೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ದೇವದುರ್ಗ ತಾಲೂಕಿನ ಕೊತ್ತದೊಡ್ಡಿ ಗ್ರಾಮದ ಬಳಿ ಕಾಲುವೆಯಲ್ಲಿ ನಾಲ್ಕು ಜನರ ಶವ ಪತ್ತೆಯಾಗಿದೆ.

ಈ ಕುರಿತು ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಗಂಡ, ಅತ್ತೆ, ಮೈದುನ, ಆತನ ಹೆಂಡತಿ ಮುಮ್ತಾಜ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.












Click it and Unblock the Notifications