ಆರ್ಟಿಪಿಎಸ್ ನಿರ್ಲಕ್ಷ್ಯ: ಧೂಳುಮಯವಾದ ರಾಯಚೂರಿನ ರಸ್ತೆಗಳು, ನಿತ್ಯ ಕಿರಿಕಿರಿ
ರಾಯಚೂರು, ನವೆಂಬರ್, 28: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿನ ಬೂದಿ ಧೂಳಿನಿಂದ ಪಾದಚಾರಿಗಳು, ವಾಹನ ಸವಾರರು ಬೇಸತ್ತು ಹೋಗಿದ್ದಾರೆ. ರಸ್ತೆಯಲ್ಲಿ ಬೂದಿ ತುಂಬಿರುವ ಕಾರಣ ವಾಹನ ಸವಾರರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ. ಲಾರಿ, ಟಿಪ್ಪರ್ ಮತ್ತು ಟ್ಯಾಂಕರ್ಗಳಿಂದ ಆರ್ಟಿಪಿಎಸ್ನ ಬೂದಿಯನ್ನು ತೆಗೆದುಕೊಂಡು ಹೋಗಲಾಗುತ್ತದೆ. ಈ ವೇಳೆ ಬೂದಿ ರಸ್ತೆಗಳಲ್ಲಿ ಬೀಳುತ್ತಿದ್ದು, ವಾಹನ ಸವಾರರು ನಿತ್ಯ ಕಣ್ಣುಜ್ಜಿಕೊಂಡು ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಧೂಳಿನಿಂದ ಬೇಸತ್ತ ಪಾದಚಾರಿಗಳು
ಶಕ್ತಿನಗರದ ಒಂದನೇ ಮತ್ತು ಎರಡನೇ ಕ್ರಾಸ್ ರಸ್ತೆಗಳಲ್ಲಿ ಶೇಖರಣೆ ಆಗಿರುವುದು ಸಾಮಾನ್ಯ ಧೂಳಲ್ಲ. ಬೂದಿ ಮೆತ್ತಿಕೊಂಡು ರಸ್ತೆಗಳೆಲ್ಲ ಕೆಸರಾಗಿ ಸಣ್ಣ ಕಸಕಡ್ಡಿಗಳು ಸಹ ಅದರಲ್ಲಿ ಕೊಳೆತು ಹೋಗಿವೆ. ಇದೀಗ ಅದೇ ಕಸ ಒಣಗಿದ್ದು ಮೇಣದಂತಾಗಿದೆ. ಅಲ್ಲದೇ ಬೂದಿಯಂತಹ ಕಸ ಛಿದ್ರಗೊಂಡು ಹೊರ ಹೊಮ್ಮುತ್ತಿದ್ದು, ಇದು ಅಪಾಯಕಾರಿ ಧೂಳು ಆಗಿದೆ. ದಿನವಿಡೀ ಓಡಾಡುವ ಬೂದಿ ವಾಹನಗಳಿಂದ, ರಸ್ತೆಯ ಮೇಲೆ ಬೂದಿ ಬೀಳುತ್ತಲೇ ಇದೆ. ಇದನ್ನು ಸ್ವಚ್ಛತೆ ಮಾಡದೆ ಹಾಗೇ ಬಿಡುವುದರಿಂದ ಶಕ್ತಿನಗರದಲ್ಲಿ ಧೂಳು ಹೆಚ್ಚಾಗಿ ಶೇಖರಣೆ ಆಗುತ್ತಿದೆ. ಭಾರಿ ವಾಹನ ಹೋದಾಗ ದಟ್ಟ ಅಲೆಯಾಗಿ ಚದುರುವ ಧೂಳಿನ ಅರ್ಧದಷ್ಟು ಮತ್ತೆ ಅದೇ ಪ್ರದೇಶದಲ್ಲಿ ಸಂಗ್ರಹವಾಗುತ್ತದೆ. ಬೂದಿ ಧೂಳುಮಯವಾಗಿ ರಸ್ತೆಯೂ ಹಾಳಾಗುತ್ತಾ ಹೋಗುತ್ತದೆ. ಹೀಗಾಗಿ ಪಾದಚಾರಿಗಳು, ವಾಹನ ಸವಾರರು ತೊಂದರೆಗೆ ಒಳಗಾಗಿದ್ದಾರೆ.

ವಾಹನ ಸವಾರರಿಗೆ ನಿತ್ಯ ಕಿರಿಕಿರಿ
ಕಣ್ಣು, ಮೂಗು, ಕಿವಿಯೊಳಗೆ ಸೇರುವ ಧೂಳು ಹಲವು ಮಾರಕ ರೋಗಕ್ಕೆ ಕಾರಣವಾಗುತ್ತಿದೆ. ಇದು ಗಂಟಲಿಗೆ ಇಳಿದರೆ ಶ್ವಾಸಕೋಶದಲ್ಲಿ ಸೇರಿಕೊಂಡು ಅಸ್ತಮಾ, ನ್ಯುಮೋನಿಯಾದಂತಹ ಕಾಯಿಲೆಗೆ ತುತ್ತಾಗಬಹುದು ಎನ್ನುವ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದೆ. ಹಾಗೂ ಗಂಟಲು ಕೆರೆತದಂತಹ ಸಮಸ್ಯೆ ಹಲವರಲ್ಲಿ ಕಾಣಿಸಿಕೊಳ್ಳುತ್ತಲೇ ಇದೆ. ನವೆಂಬರ್ 23ರಿಂದ ಡಿಸೆಂಬರ್ 2ರವರೆಗೆ ಸೂಗೂರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ನಡೆಯುತ್ತಿದೆ.ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಮತ್ತು ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಧೂಳಿನಿಂದ ತೊಂದರೆ ಆಗದಂತೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಎನ್ನುವುದು ಅಲ್ಲಿನ ಸ್ಥಳೀಯರ ಆಗ್ರಹವಾಗಿದೆ. ಧೂಳಿನಿಂದಾಗಿ ಎದುರಿಗೆ ಬರುವ ವಾಹನಗಳು ಕಾಣುತ್ತಿಲ್ಲ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ರಸ್ತೆಯಲ್ಲಿ ಬಿದ್ದಿರುವ ಬೂದಿ ಧೂಳನ್ನು ಸ್ವಚ್ಛತೆ ಮಾಡುವಂತೆ ಆರ್ಟಿಪಿಎಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕೂಡ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯ ಮೇಲೆ ಬಿದ್ದಿರುವ ಬೂದಿಯ ಧೂಳನ್ನು ಸ್ವಚ್ಚತೆಗೊಳಿಸಿ ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಯ ಕರ್ನಾಟಕ ಸಂಘಟನೆಯ ದೇವಸೂಗೂರು ಗ್ರಾಮ ಘಟಕದ ಉಪಾಧ್ಯಕ್ಷ ಶೇಖರ್ ಒತ್ತಾಯಿಸಿದ್ದಾರೆ.












Click it and Unblock the Notifications