ಸರ್ಕಾರಿ ಶಿಕ್ಷಕಿ ಕೆಲಸ ಪಡೆದ ರಾಯಚೂರಿನ ಪೂಜಾ ಮಂಗಳಮುಖಿಯರಿಗೆ ಮಾದರಿ
ರಾಯಚೂರು, ನವೆಂಬರ್ 24: ಸಮಾಜದಲ್ಲಿ ತೃತೀಯ ಲಿಂಗಿಗಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಸರ್ಕಾರವು ಹೆಚ್ಚಿನ ಸೌಲಭ್ಯ ಕಲ್ಪಿಸುವ ಮೂಲಕ ತೃತೀಯ ಲಿಂಗಿಗಳನ್ನು ಮುಖ್ಯವಾಹಿನಿಗೆ ತರಬೇಕು. ಸರ್ಕಾರಿ ಶಿಕ್ಷಕ ಹುದ್ದೆಗೆ ಆಯ್ಕೆಯಾದ ತಾಲ್ಲೂಕಿನ ನೀರಮಾನ್ವಿ ಗ್ರಾಮದ ತೃತೀಯ ಲಿಂಗಿ ಆಶ್ವತ್ಥಾಮ (ಪೂಜಾ) ಅವರ ಅಭಿಪ್ರಾಯವಿದು.
ರಾಜ್ಯ ಸರ್ಕಾರ ಈಚೆಗೆ ಪ್ರಕಟಿಸಿದ ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿಯ ಆಯ್ಕೆ ಪಟ್ಟಿಯಲ್ಲಿ ತೃತೀಯ ಲಿಂಗಿಗಳಿಗೆ ಶೇ 1ರಷ್ಟು ಮೀಸಲಾತಿ ಕಲ್ಪಿಸಿದ್ದು, ನೀರಮಾನ್ವಿ ಗ್ರಾಮದ ಆಶ್ವತ್ಥಾಮ (ಪೂಜಾ) ಸಮಾಜ ವಿಜ್ಞಾನ ಶಿಕ್ಷಕ ಹುದ್ದೆಗೆ ಆಯ್ಕೆಯಾಗಿದ್ದಾರೆ.
ನೀರಮಾನ್ವಿ ಗ್ರಾಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ, ಮಾನ್ವಿ ಪಟ್ಟಣದ ಸರ್ಕಾರಿ ಪಿಯು ಕಾಲೇಜು ಹಾಗೂ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪದವಿ, ಪದವಿಪೂರ್ವ ಶಿಕ್ಷಣ ಪಡೆದಿದ್ದಾರೆ. ರಾಯಚೂರಿನ ನವೋದಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ, ಸಿಂಧನೂರಿನ ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಎ ಇತಿಹಾಸ ವ್ಯಾಸಂಗ ಪೂರ್ಣಗೊಳಿಸಿದ್ದಾರೆ.

ದೈಹಿಕವಾಗಿ ಗಂಡಾಗಿದ್ದರೂ ವರ್ತನೆಗಳು ಹೆಣ್ಣುಮಕ್ಕಳಂತೆ ಇದ್ದ ಕಾರಣ ಬಾಲ್ಯದಿಂದಲೇ ಸಹಪಾಠಿಗಳು ಹಾಗೂ ಸುತ್ತಮುತ್ತಲಿನ ಜನರ ಚುಚ್ಚು ಮಾತುಗಳಿಂದ ತೀವ್ರ ನೋವು ಅನುಭವಿಸಿದ್ದರಂತೆ. ಕೊನೆಗೆ ಬೆಂಗಳೂರಿಗೆ ತೆರಳಿ ಲಿಂಗ ಪರಿವರ್ತನೆ ಮಾಡಿಸಿಕೊಂಡ ನಂತರ ಸುಮಾರು ಆರು ವರ್ಷಗಳ ಕಾಲ ಇತರ ಮಂಗಳಮುಖಿಯರ ಜತೆ ಭಿಕ್ಷಾಟನೆ ಮಾಡಿ ಜೀವನ ಸಾಗಿಸಿದ್ದಾಗಿ ಪೂಜಾ ನೆನಪಿಸಿಕೊಂಡರು.
ಮಾರ್ಗದರ್ಶನ ನೀಡುವೆ
'ತೃತೀಯ ಲಿಂಗಿಗಳಿಗೆ ಉದ್ಯೋಗದಲ್ಲಿ ಶೇ1ರಷ್ಟು ಮೀಸಲಾತಿ ನೀಡುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರ ಸರ್ಕಾರಿ ಉದ್ಯೋಗ ಪಡೆಯಬೇಕೆನ್ನುವ ಛಲ ಮೂಡಿತು. ಕಾರಣ ಕಳೆದ ಮೇ ತಿಂಗಳಲ್ಲಿ ಶಿಕ್ಷಕರ ಹುದ್ದೆಗೆ ಪರೀಕ್ಷೆ ಬರೆದು ಆಯ್ಕೆಯಾಗಿದ್ದೇನೆ. ನನ್ನಂತೆ ಉತ್ತಮ ಶಿಕ್ಷಣ ಪಡೆದಿರುವ ಇತರ ಮಂಗಳಮುಖಿಯರಿಗೆ ಸರ್ಕಾರಿ ಹುದ್ದೆಗಳನ್ನು ಪಡೆಯಲು ಮಾರ್ಗದರ್ಶನ ನೀಡುವೆ' ಎಂದು ಅಶ್ವತ್ಥಾಮ ಹೇಳಿದರು.
ಸರ್ಕಾರಿ ಶಾಲಾ ಶಿಕ್ಷಕನಾಗಬೇಕೆನ್ನುವ ಅಶ್ವತ್ಥಾಮನ ಗುರಿ ಈಡೇರಿರುವುದು ಖುಷಿ ತಂದಿದೆ. ಈ ಸಾಧನೆಗೆ ಅವನ ಕಠಿಣ ಪರಿಶ್ರಮವೇ ಕಾರಣ ಎಂದು ಪೂಜಾಳಾಗಿ ಬದಲಾಗಿರುವ ಅಶ್ವತ್ಥಾಮನ ಯಲ್ಲಮ್ಮ ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications