ಗಡಿ ಭಾಗದ ಕನ್ನಡ ವಿದ್ಯಾರ್ಥಿಗಳ ಶೈಕ್ಷಣಿಕ ಸೌಕರ್ಯಕ್ಕೆ ತಕ್ಷಣವೇ ಕ್ರಮ
ರಾಯಚೂರು, ನವೆಂಬರ್ 1: ಕರ್ನಾಟಕದ ಗಡಿ ಭಾಗದ ತೆಲಂಗಾಣ, ಆಂಧ್ರ ಪ್ರದೇಶದ ವಿದ್ಯಾರ್ಥಿಗಳು ಕನ್ನಡದಲ್ಲಿ ವಿದ್ಯಾರ್ಜನೆ ಮುಂದುವರೆಸಲು ಅವಕಾಶ ಕಲ್ಪಿಸುವುದಕ್ಕೆ ಸಂಬಧಿಸಿ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತದೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ ಹೇಳಿದರು.
67ನೇ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಆಂಧ್ರ ಮತ್ತು ತೆಲಂಗಾಣ ಭಾಗದಲ್ಲಿರುವ ಕನ್ನಡ ಶಾಲಾ ಮಕ್ಕಳಿಗೆ ರಾಜ್ಯದಲ್ಲಿ ಹೆಚ್ಚುವರಿ ಶಿಕ್ಷಣ ಮುಂದುವರೆಸಲು ತಾಂತ್ರಿಕ ಸಮಸ್ಯೆಗಳ ಬಗ್ಗೆ ಅವರ ಗಮನ ಸೆಳೆದ ವಿಷಯಕ್ಕೆ ಪ್ರತಿಕ್ರಿಯಿಸಿ, ಕನ್ನಡದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶಿಕ್ಷಣಕ್ಕಾಗಿ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ರಾಯಚೂರು: ಶತಮಾನ ಪೂರೈಸಿದ ಆಂಧ್ರ ಗಡಿಭಾಗದ ಕನ್ನಡ ಮಾಧ್ಯಮ ಶಾಲೆ
ಮಹಾರಾಷ್ಟ್ರ ಏಕೀಕರಣ ಸಮಿತಿ ನಡೆಸುವ ಪುಂಡಾಟಿಕೆಯನ್ನು ನಿಯಂತ್ರಿಸುವುದರೊಂದಿಗೆ ಕರ್ನಾಟಕದ ಒಂದಿಂಚು ಜಾಗ ಸಹ ಬಿಡದೆ, ಸಂರಕ್ಷಿಸುವ ಜವಾಬ್ದಾರಿಗೆ ಸರಕಾರ ಬದ್ಧವಾಗಿದೆ. ಬೆಳಗಾವಿ ನಮ್ಮದು. ಅದರ ಒಂದಿಂಚೂ ಜಾಗ ಕೂಡ ಬಿಟ್ಟು ಕೊಡುವುದಿಲ್ಲ. ಕನ್ನಡ ಭಾಷೆ, ನೆಲ ಜಲ ಹಿತಾಸಕ್ತಿಗೆ ಧಕ್ಕೆ ಬರದಂತೆ ರಾಜ್ಯ ಸರಕಾರ ನೋಡಿಕೊಳ್ಳುತ್ತದೆ. ಕನ್ನಡ ವಿರೋಧಿಗಳಿಗೆ ಈಗಾಗಲೇ ಬೆಳಗಾವಿ ಜನ ಬುದ್ದಿಕಲಿಸಿದ್ದಾರೆ. ಬೆಳಗಾವಿ ಸ್ಥಳೀಯ ಆಡಳಿತದಲ್ಲಿ ಕನ್ನಡದ ಪಾರಮ್ಯವೇ ಇದೆ. ಕನ್ನಡ ವಿರೋಧಿಗಳನ್ನು ಬೆಳಗಾವಿ ಜನ ದೂರವಿಟ್ಟಿದ್ದಾರೆ ಎಂದು ತಿಳಿಸಿದರು.
ಕಬ್ಬಿನ ಬೆಳೆಯ ಕನಿಷ್ಠ ಬೆಂಬಲ ಬೆಲೆ ವಿಚಾರದಲ್ಲಿ ರೈತರೊಂದಿಗೆ ಮಾತುಕತೆ ನಡೆಸಲಾಗಿದೆ. ಇತರ ರಾಜ್ಯಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯ ಸರಕಾರ ರೈತರಿಗೆ ಬಾಕಿ ಹಣವನ್ನು ನೀಡಲಾಗಿದೆ. ಅವರ ಹಿತ ಕಾಯುವಲ್ಲಿ ಸರಕಾರ ಹಿಂದೆ ಬಿದ್ದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
67ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ; ನಾಡಿನ ಮತ್ತು ರಾಯಚೂರು ಜಿಲ್ಲೆಯ ಭೌತಿಕ, ನೈಸರ್ಗಿಕ ಮತ್ತು ಸಂಪನ್ಮೂಲಗಳ ಅಭಿವೃದ್ಧಿಯೂ ಸೇರಿದಂತೆ ಸರ್ವಾಂಗೀಣ ಪ್ರಗತಿ ಸಾಧಿಸಲು ನಾವೆಲ್ಲರೂ ಕಂಕಣಬದ್ಧರಾಗಿ ಶ್ರಮಿಸೋಣ. ಕಲೆ, ಸಾಹಿತ್ಯ, ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಸದೃಢ, ಸಮೃದ್ಧ, ಸ್ವಾವಲಂಬಿ ಮತ್ತು ನಮ್ಮ ಕರ್ನಾಟಕವನ್ನು ನಿರ್ಮಿಸಲು ಪಣ ತೊಡೋಣ ಎಂದು ಶಂಕರ ಪಾಟೀಲ್ ಕರೆ ನೀಡಿದರು.
ದೇಶಕ್ಕೆ ನಮ್ಮ ಕನ್ನಡ ಸಾಹಿತ್ಯದ ಕೊಡುಗೆ ಅಪಾರವಾಗಿದೆ . ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು ಹೆಮ್ಮೆಯ ವಿಷಯ . ಕನ್ನಡದ ಜಾನಪದ ಕಲೆಯೂ ಶ್ರೀಮಂತವಾಗಿದೆ . ಗ್ರಾಮೀಣ ಭಾಗದ ಮುಗ್ಧ ಜನಸಮುದಾಯದಿಂದಲೇ ಈ ಜನಪದ ಕಲೆ ಗಟ್ಟಿಯಾಗಿ ಬೇರೂರಿದೆ ಎಂಬುದು ವಿಶೇಷ ಸಂಗತಿಯಾಗಿದೆ ಎಂದರು.