ರಾಯಚೂರಿನಲ್ಲಿ ಸೂರ್ಯೋದಯಕ್ಕೂ ಮುನ್ನ ಮಳೆ: ತಂಪಾದ ಬಿಸಿಲು ನಾಡು...
ರಾಯಚೂರು ಮೆ 13: ಬಿಸಿಲಿನಿಂದ ಕೆಂಗೆಟ್ಟಿದ್ದ ರಾಯಚೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸೋಮವಾರ ಭಾರಿ ಮಳೆಯಾಗಿದೆ. ಇದರಿಂದಾಗಿ ಬಿಸಿಲು ನಾಡಿನ ಜನ ಸಂತಸ ವ್ಯಕ್ತಪಡಿಸಿದ್ದಾರೆ.
ಗುಡುಗು ಮಿಂಚು ಸಹಿತ ಬೆಳಗಿನ ಜಾವ ಆರಂಭವಾದ ಮಳೆ ಬೆಳಿಗ್ಗೆ 6 ಗಂಟೆಯವರೆಗೂ ಸುರಿದಿದೆ. ಗಟಾರುಗಳು ತುಂಬಿ ರಸ್ತೆ ಮೇಲೆ ನೀರು ಹರಿದಿದೆ. ತೆಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ.

ತಗಡಿನ ಮನೆಗಳಲ್ಲಿ ನೀರು ಸೋರಿಕೆಯಾಗಿ ಮನೆಗಳಲ್ಲಿ ಸಾಮಗ್ರಿಗಳು ತೊಯ್ದಿವೆ. ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನುಗ್ಗಿದ ನೀರನ್ನು ಹೊರಗೆ ತೆಗೆಯಲು ಜನರು ಭಾರಿ ಪ್ರಯಾಸ ಪಡಬೇಕಾಯಿತು.
ರೈತರು ಬೆಳೆ ಭತ್ತವನ್ನು ಮಾರಾಟ ಮಾಡಲು ಮಾರುಕಟ್ಟೆಗೆ ತರಲಾಗಿತ್ತು. ಜೊತೆಗೆ ರಾಯಚೂರು ನಗರದ ಎಪಿಎಂಸಿಗೆ ನುಗ್ಗಿದ ಮಳೆ ನೀರು, ಭತ್ತದ ರಾಶಿಗೆ ನೀರು ನುಗ್ಗಿದೆ. ಭತ್ತದ ರಾಶಿಗಳ ಸುತ್ತ ನೀರು ತುಂಬಿಕೊಂಡು ಹಾಳಾಗಿದೆ.
ಇದೀಗ ನೀರುಪಾಲಾದ ಭತ್ತ ಯಾರು ಖರೀದಿಸುತ್ತಾರೆ ಎಂಬುದು ರೈತರು ಅಳಲಾಗಿದ್ದು , ಎಪಿಎಂಸಿ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ತೆಲಂಗಾಣ ರಾಜ್ಯದ ಮಕ್ತಲ್ ರೈತರು ಸೇರಿ ಜಿಲ್ಲೆಯ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ತಡರಾತ್ರಿವರೆಗೂ ಮಳೆ
ಮುಂದಿನ ಐದು ದಿನಗಳಲ್ಲಿ ರಾಜ್ಯದ ಬಹುತೇಕ ಕಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬಿರುಗಾಳಿ ಸಹಿತ ಮಳೆಯಾಗಲಿದೆ. ನಿನ್ನೆ ಸಂಜೆಯಿಂದ ರಾಜ್ಯದ ಹಲವು ಕಡೆ ಮಳೆ ಸುರಿಯುತ್ತಿದೆ. ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಮೋಡ ಮುಸುಕಿದ ವಾತಾವರಣ ಇದೆ. ಬೆಂಗಳೂರು ಎಚ್ ಎಎಲ್ ಬಳಿ 23.4 ಎಂಎಂ ಮಳೆ ಪ್ರಮಾಣ ದಾಖಲಾಗಿದೆ. ಬೆಂಗಳೂರು ನಗರ - 14.4mm, ಬಜ್ಪೆ - 2.0mm, ಚಿತ್ರದುರ್ಗ - 21.0mm, ಗದಗ - 1.0mm ಮಳೆ ದಾಖಲು ಆಗಿದೆ.
ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಪ್ರತಿದಿನ ಮಳೆಯಾಗುತ್ತಿದೆ. ಭಾನುವಾರ ತಡರಾತ್ರಿ ಸುರಿದ ಮಳೆ ನಗರದ ಹಲವೆಡೆ ಅವಾಂತರ ತಂದಿಟ್ಟಿದೆ. ಕೆಆರ್ ಮಾರುಕಟ್ಟೆ, ಜೆಸಿ ರಸ್ತೆ, ಮೆಜೆಸ್ಟಿಕ್, ಗಿರಿನಗರ, ಶ್ರೀನಿವಾಸನಗರ, ಹೊಸಕೆರೆಹಳ್ಳಿ, ರಾಜರಾಜೇಶ್ವರಿ ನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಗುಡುಗು, ಸಹಿತ ಮಳೆಯಿಂದಾಗಿ ಕೆಲ ಏರಿಯಾಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಗಿದೆ. ಭಾನುವಾರ ರಾತ್ರಿಯೂ ರಾಜರಾಜೇಶ್ವರಿ ನಗರ ಗೇಟ್ಬಳಿಯ ರಸ್ತೆ ಜಲಾವೃತವಾಗಿ ವಾಹನ ಸವಾರರು ಪರತಪಿಸುವಂತಾಯಿತು.
ಕರ್ನಾಟಕದಲ್ಲಿ ಮಳೆ ಸ್ಥಿತಿಗತಿ ಹೇಗಿದೆ?
ಚಿಕ್ಕಮಗಳೂರಿನಲ್ಲಿ ಕೂಡ ಕಳೆದೊಂದು ವಾರದಿಂದ ವರ್ಷಧಾರೆಯಾಗುತ್ತಿದೆ. ಕಟ್ಟಿನಮನೆ ಗ್ರಾಮದಲ್ಲಿ ಬೃಹತ್ ಮರಬಿದ್ದು ಮಹಿಳೆ ಸಾವನಪ್ಪಿದ್ದಾರೆ. ಬೆಳಗಾವಿಯಲ್ಲಿ ಮಳೆ ಅಬ್ಬರ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಮಜಗಾಂವ್ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿ ಒಳಗಿದ್ದ ವಸ್ತುಗಳು ನೀರಲ್ಲಿ ತೇಲಿ ಹೋಗಿವೆ. ಕೋಲಾರದ ಜಂಗಂಬಸಾಪುರದಲ್ಲೂ ಮಳೆ, ಬಿರುಗಾಳಿಗೆ ರೈತ ಬಸವರಾಜು ಅನ್ನೋರ ಕಟಾವಿಗೆ ಬಂದಿದ್ದ 3 ಎಕರೆ ಬಾಳೆ ನೆಲಕಚ್ಚಿದೆ.

ದಕ್ಷಿಣ ಕನ್ನಡದ ಪುತ್ತೂರಿನ ಉರ್ಲಾಂಡಿ ಎಂಬಲ್ಲಿ ಮರಬಿದ್ದು ಶೋಭಾ ಹೆಗ್ಡೆ ಅನ್ನೋರ ಮನೆ ಜಖಂಗೊಂಡಿದೆ. ಉತ್ತರ, ದಕ್ಷಿಣ, ಕರಾವಳಿ ಕರ್ನಾಟಕದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಮೇ 15ರ ವರೆಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.












Click it and Unblock the Notifications