ಕಟಾವಿಗೆ ಬಂದ ಭತ್ತ: ದೇವದುರ್ಗ ತಾಲೂಕಿನಲ್ಲಿ ಖರೀದಿ ಕೇಂದ್ರಕ್ಕಾಗಿ ರೈತರ ಒತ್ತಾಯ
ರಾಯಚೂರು ಡಿಸೆಂಬರ್, 4: ದೇವದುರ್ಗ ತಾಲೂಕು ವ್ಯಾಪ್ತಿಯ ನಾರಾಯಣಪುರ ಬಲದಂಡೆ ನಾಲೆ ಹಾಗೂ ಕೃಷ್ಣಾ ನದಿ ನೀರಿನಿಂದ ತಾಲೂಕಿನ ರೈತರು ಬೆಳೆದ ಭತ್ತ ಕಟಾವಿಗೆ ಬಂದಿದೆ. ಈ ಹಂತದಲ್ಲಿ ಭತ್ತ ಖರೀದಿ ಕೇಂದ್ರಕ್ಕಾಗಿ ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದು, ಈ ಬಗ್ಗೆ ಸರ್ಕಾರ ಮಾಹಿತಿ ನೀಡದಿರುವುದು ರೈತರಲ್ಲಿ ಗೊಂದಲ ಉಂಟಾಗಿದೆ.
ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಸದ್ಯ ಸೋನಾ ಮಸೂರಿ ಭತ್ತಕ್ಕೆ(75ಕೆಜಿ) 1550 ಹಾಗೂ ಆರ್ಎನ್ಆರ್ 1750 ರೂ. ಬೆಲೆಯಿದೆ. ಇದು ಯಾವುದಕ್ಕೂ ಸಾಲುವುದಿಲ್ಲ. ಎರಡನೇ ಬೆಳೆಗೆ ಜಮೀನನ್ನು ಸಿದ್ಧ ಮಾಡಬೇಕಾದ ಕಾರಣ ಈಗಿರುವ ಭತ್ತ ಕಟಾವು ಮಾಡಿ ಮಾರಾಟ ಮಾಡಲೇಬೇಕಿದೆ. ಈ ಹಂತದಲ್ಲಿ ಖರೀದಿ ಕೇಂದ್ರ ತೆರೆದರೆ ರೈತರಿಗೆ ಅನುಕೂಲವಾಗಲಿದ್ದು, ಸಂಗ್ರಹಿಸಿಡಲು ಎದುರಾಗುವ ಜಾಗದ ಸಮಸ್ಯೆಯೂ ನಿವಾರಣೆಯಾಗಲಿದೆ.
ಸರ್ಕಾರ ಬೆಂಬಲ ಬೆಲೆ ನೀಡಿ ಭತ್ತ ಖರೀದಿ ಕೇಂದ್ರ ತೆರೆಯುವುದರಿಂದ ಮುಕ್ತ ಮಾರುಕಟ್ಟೆಯಲ್ಲೂ ಬೆಲೆ ಏರಿಕೆ ಹೆಚ್ಚಾಗಲಿದೆ. ಜೊತೆಗೆ ರೈತರಿಗೆ ಬ್ರೋಕರ್ಗಳ ವಂಚನೆ ಕೂಡ ತಪ್ಪಲಿದೆ. ಕಳೆದ ವರ್ಷ ರೈತರು ಭತ್ತ ಮಾರಾಟ ಮಾಡಿದ ನಂತರ ಖರೀದಿ ಕೇಂದ್ರ ಆರಂಭಿಸಲಾಗಿತ್ತು. ಇದರಿಂದ ಸಣ್ಣ ರೈತರಿಗೆ ಲಾಭಸಿಗಲಿಲ್ಲ. ದೊಡ್ಡ ರೈತರು, ಬ್ರೋಕರ್ಗಳಿಗೆ ಮಾತ್ರ ಅನುಕೂಲವಾಗಿತ್ತು.

ಬ್ರೋಕರ್ ಹಾವಳಿ ತಡೆಯಲು ಭತ್ತ ಖರೀದಿ ಕೇಂದ್ರ ತೆರೆಯಲು ಒತ್ತಾಯ
ಖರೀದಿ ಕೇಂದ್ರ ಆರಂಭಿಸಿದರೆ 15-20 ದಿನಗಳಲ್ಲಿ ನೋಂದಣಿ ಮಾಡಿಕೊಂಡು ಖರೀದಿ ಮಾಡಲಾಗುತ್ತದೆ. ಸದ್ಯ ಭತ್ತ ಕಟಾವಿಗೆ ಬಂದಿದ್ದು, ಖರೀದಿ ಕೇಂದ್ರ ಆರಂಭಿಸಿದರೆ, ಸರಿಯಾದ ಸಮಯಕ್ಕೆ ಭತ್ತ ಮಾರಾಟ ಮಾಡಲು ಅನುಕೂಲವಾಗಲಿದೆ. ಇದರಿಂದ ರೈತರಿಗಾಗುವ ಬ್ರೋಕರ್ ಹಾವಳಿ ಹಾಗೂ ವಂಚನೆಯೂ ತಡೆಯಬಹುದು. ಹೋಬಳಿಗೆ ಒಂದರಂತೆ 4 ಕಡೆ ಭತ್ತ ಖರೀದಿ ಕೇಂದ್ರ ತೆರೆಯುವ ಬೇಡಿಕೆಯಿದೆ. ಭತ್ತ ಹೆಚ್ಚಾಗಿ ಬೆಳೆದ ಪ್ರದೇಶದಲ್ಲಿ ಕೇಂದ್ರ ತೆರೆಯಬೇಕು ಎನ್ನುವುದು ರೈತರ ಬೇಡಿಕೆ. ಆದರೆ, ಸರ್ಕಾರ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದಿರುವುದು ಕೃಷಿಕರ ಆತಂಕಕ್ಕೆ ಕಾರಣವಾಗಿದೆ.

ಆಂಧ್ರ ವ್ಯಾಪಾರಿಯಿಂದ ಕೃಷಿಕರಿಗೆ 5ಕೋಟಿ ರೂ ವಂಚನೆ
ಭತ್ತದ ಬೆಳೆಗೆ ಬ್ರೋಕರ್ಗಳ ಹಾವಳಿ ಹೆಚ್ಚಿದ್ದು, ಕಡಿಮೆ ಲೆಕ್ಕದಲ್ಲಿ ಖರೀದಿಸಿ ಹಣ ನೀಡದೆ ಕೃಷಿಕರಿಗೆ ವಂಚನೆ ಮಾಡಿದ ಘಟನೆಗಳು ನಡೆದಿವೆ. ಎರಡು ವರ್ಷಗಳ ಹಿಂದೆ ಜಾಲಹಳ್ಳಿಯಲ್ಲಿ ಸುಮಾರು 20ಕ್ಕೂ ಹೆಚ್ಚು ರೈತರಿಂದ ಭತ್ತ ಖರೀದಿಸಿದ ಆಂಧ್ರ ಮೂಲದ ವ್ಯಾಪಾರಿ 5ಕೋಟಿ ರೂಪಾಯಿ ನೀಡದೆ ವಂಚಿಸಿದ್ದಾರೆ. ಬಳಿಕ ಪೊಲೀಸರ ಮಧ್ಯಸ್ಥಿಕೆಯಲ್ಲಿ ರೈತರಿಗೆ ಹಣ ನೀಡಲಾಯಿತು. 3ವರ್ಷಗಳ ಹಿಂದೆ ಕಮಲದಿನ್ನಿ, ಕಕ್ಕಲದೊಡ್ಡಿ, ಮ್ಯಾಕಲದೊಡ್ಡಿ ರೈತರಿಂದ ಭತ್ತ ಖರೀದಿಸಿದ ವ್ಯಾಪಾರಿಗೆ 1.25ಕೋಟಿ ರೂ ನೀಡದೆ ವಂಚಿಸಿದ್ದರು. ಕೆಲ ವರ್ಷಗಳ ಹಿಂದೆ ಗಲಗ ರೈತರಿಗೆ ವ್ಯಾಪಾರಿಯೊಬ್ಬ ಸುಮಾರು 60ಲಕ್ಷ ರೂ. ವಂಚಿಸಿದ್ದರೆ, ಮುಷ್ಟೂರಿನಲ್ಲಿ ಹತ್ತಕ್ಕೂ ಹೆಚ್ಚು ರೈತರಿಗೆ 30ಲಕ್ಷ ರೂ. ವಂಚನೆ ಮಾಡಿದ್ದಾರೆ. ಇಂಥ ಘಟನೆಗಳು ತಾಲೂಕಿನಲ್ಲಿ ಪದೇಪದೆ ನಡೆಯುತ್ತಿದೆ.

ಬೆಲೆ ಹೆಚ್ಚಿಸಿದ ಕಟಾವು ಯಂತ್ರದ ಮಾಲೀಕರು
ಎರಡನೇ ಬೆಳೆಗೆ ಡಿ.12ರಿಂದ ನೀರು ಬಿಡುತ್ತಿರುವ ಕಾರಣ ರೈತರು ಅಷ್ಟರಲ್ಲೇ ಹೊಲ ಸಿದ್ಧತೆ ಮಾಡಿಕೊಳ್ಳಬೇಕು. ಆದರೆ, ತಾಲೂಕಿನಲ್ಲಿ ಭತ್ತ ಕೊಯ್ಯುವ ಯಂತ್ರಗಳ ಕೊರತೆಯಿಂದ ರಾಶಿಗೆ ಹಿನ್ನಡೆಯಾಗುತ್ತಿದೆ. ಸ್ಥಳೀಯವಾಗಿ ಬೆರೆಳಿಕೆಯಷ್ಟು ಯಂತ್ರಗಳು ಮಾತ್ರವಿದ್ದು, ಆಂಧ್ರ, ತೆಲಂಗಾಣದಿಂದ ಯಂತ್ರಗಳು ಕೂಡ ಬಂದಿವೆ. ಆದರೆ, ತಾಲೂಕಿನಲ್ಲಿ ಸುಮಾರು 30ಸಾವಿರ ಹೆಕ್ಟೇರ್ನಲ್ಲಿ ಭತ್ತ ಬೆಳೆದಿರುವ ಕಾರಣ ಯಂತ್ರಗಳು ಸಾಲುತ್ತಿಲ್ಲ. ಇದರ ನಡುವೆ ಇಂಧನಬೆಲೆ ಹೆಚ್ಚಳ ನೆಪ ಹಾಗೂ ಬೇಡಿಕೆ ಹೆಚ್ಚಾಗಿದ್ದರಿಂದ ಕೊಯ್ಯುವ ಯಂತ್ರಗಳ ಬೆಲೆ ಕೂಡ ಹೆಚ್ಚಾಗಿದೆ. ಪ್ರತಿ ಎಕರೆ ಭತ್ತ ಕೊಯ್ಯಲು 2,800ರಿಂದ 3,200ರೂ. ಬೆಲೆ ಏರಿಕೆ ಮಾಡಿದ್ದು, ಇದು ರೈತರಿಗೆ ಹೊರೆಯಾಗಿದೆ.

ಭತ್ತ ಖರೀದಿ ಕೇಂದ್ರಕ್ಕಾಗಿ ಜಿಲ್ಲಾಧಿಕಾರಿಗೆ ಪತ್ರದ ಬರೆದ ತಹಶೀಲ್ದಾರ್
"ಎರಡನೇ ಬೆಳೆಗೆ ಡಿಸೆಂಬರ್ 12ರಂದು ನಾಲೆಗೆ ನೀರು ಹರಿಸುತ್ತಿದ್ದು, ಆ ಸಮಯದಲ್ಲಿ ಭತ್ತ ನಾಟಿ ಮಾಡಿದರೆ ಮಾತ್ರ ಮಾರ್ಚ್ ಅಂತ್ಯಕ್ಕೆ ಬೆಳೆ ಕೈಗೆ ಬರುತ್ತವೆ. ಭತ್ತ ರಾಶಿ ಮಾಡಲು ಯಂತ್ರಗಳು ಸಿಗುತ್ತಿಲ್ಲ. ಎಕರೆ 2,800ರಿಂದ 3,200ರೂ.ವರೆಗೆ ಬಾಡಿಗೆಯಿದೆ. 1,500ರೂ. ಬೆಲೆ ಯಾವುದಕ್ಕೂ ಸಾಲುವುದಿಲ್ಲ. ಸರ್ಕಾರ ಖರೀದಿ ಕೇಂದ್ರ ಆರಂಭಿಸಿ 2,000ರೂ. ಬೆಂಬಲ ಬೆಲೆ ನೀಡಬೇಕು," ಎಂದು ರೈತ ಶಿವಕುಮಾರ ಪಾಟೀಲ್ ಕಕ್ಕಲದೊಡ್ಡಿ ಒತ್ತಾಯಿಸಿದ್ದಾರೆ.
"ಭತ್ತ ಖರೀದಿ ಕೇಂದ್ರ ತೆರೆಯಬೇಕು ಎನ್ನುವ ಬೇಡಿಕೆಯಿದೆ. ಈ ಬಗ್ಗೆ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ. ರೈತರ ಮನವಿಯಂತೆ ಖರೀದಿ ಕೇಂದ್ರ ತೆರೆಯಲು ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು. ಖರೀದಿ ಕೇಂದ್ರ ತೆರೆಯುವ ಯೋಚನೆಯಿದೆ. ಹೋಬಳಿಗೆ ಒಂದು ತೆರೆದರೆ ರೈತರಿಗೆ ಅನುಕೂಲವಾಗಲಿದೆ" ಎಂದು ದೇವದುರ್ಗ ತಹಶೀಲ್ದಾರ್ ಶ್ರೀನಿವಾಸ್ ಚಾಪಲ್ ಹೇಳಿದರು.












Click it and Unblock the Notifications