ಸಾವರ್ಕರ್ ಹೇಳಿಕೆ, ರಾಹುಲ್ ಗಾಂಧಿಗೆ ಪ್ರಹ್ಲಾದ ಜೋಶಿ ತಿರುಗೇಟು
ರಾಯಚೂರು, ಡಿಸೆಂಬರ್ 14; ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಭಾರತ ಬಚಾವೋ ಪ್ರತಿಭಟನಾ ರಾಲಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, 'ರೇಪ್ ಇನ್ ಇಂಡಿಯಾ' ಹೇಳಿಕೆಗೆ ಕ್ಷಮೆ ಕೇಳುವುದಿಲ್ಲ, ನಾನೇನು ಸಾವರ್ಕರ್ ಅಲ್ಲ' ಎಂದು ಹೇಳಿದ್ದಕ್ಕೆ ಕೇಂದ್ರ ಗಣಿ ಸಚಿವ ಪ್ರಹ್ಲಾದ ಜೋಶಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶನಿವಾರ ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ ಜೋಶಿ, ರಾಹುಲ್ ಗಾಂಧಿಗೆ ಬುದ್ಧಿ ಭ್ರಮಣೆ ಆಗಿದೆ. ಅವರೊಬ್ಬ ಪಾರ್ಟ ಟೈಮ್ ರಾಜಕಾರಣಿ. ಅವರ ಹೇಳಿಕೆಗಳಿಗೆ ಮಹತ್ವ ಕೊಡಬೇಕಾದ ಅಗತ್ಯ ಇಲ್ಲ. ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡಿರುವುದು ಅವರ ಬುದ್ಧಿಯ ಮಟ್ಟವನ್ನು ತೋರಿಸುತ್ತದೆ. ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಎಂಬ ಪ್ರಜ್ಞೆ ಅವರಿಗೆ ಇಲ್ಲ ಅನಿಸುತ್ತದೆ ಎಂದು ವಾಗ್ದಾಳಿ ನಡೆಸಿದರು. ರಾಯಚೂರಿನ ರಾಯರ ಮಠದಲ್ಲಿ ಆರಂಭವಾದ ಸುಧಾ ಮಂಗಳ ಮಹೋತ್ಸವವನ್ನು ಇದೇ ವೇಳೆ ಉದ್ಘಾಟಿಸಿದರು.

ಮೇಕ್ ಇನ್ ಇಂಡಿಯಾ ಬದಲು ರೇಪ್ ಇನ್ ಇಂಡಿಯಾ ಎಂದು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಹೇಳಿಕೆ ಕೊಟ್ಟಿದ್ದರು. ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. 'ಕ್ಷಮೆ ಕೇಳಲು ನಾನೇನು ಸಾವರ್ಕರ್ ಅಲ್ಲ. ನನ್ನ ಹೆಸರು ರಾಹುಲ್ ಗಾಂಧಿ, ರಾಹುಲ್ ಸಾವರ್ಕರ್ ಅಲ್ಲ' ಎಂದು ಹೇಳಿದ್ದಾರೆ. 'ಉನ್ನಾವೋ ಹಾಗೂ ತೆಲಂಗಾಣ ಪಶುವೈದ್ಯೆಯ ಹತ್ಯಾಚಾರದ ನಂತರ ಭಾರತದ ನಾರಿಯರು ಬೆಚ್ಚಿ ಬಿದ್ದಿದ್ದಾರೆ. ದಿನಕ್ಕೆ ಲೆಕ್ಕವಿಲ್ಲದಷ್ಟು ಮಹಿಳಾ ದೌರ್ಜನ್ಯಗಳು ಬಿಜೆಪಿ ಆಡಳಿತವಿರುವ ರಾಜ್ಯದಲ್ಲೇ ನಡೆಯುತ್ತಿವೆ. ಅದಕ್ಕೋಸ್ಕರವೇ ನಾನು ರೇಪ್ ಇನ್ ಇಂಡಿಯಾ ಹೇಳಿಕೆ ಕೊಟ್ಟಿರುವುದು. ಇದಕ್ಕಾಗಿ ಬಿಜೆಪಿ ಬಳಿ ತಲೆ ತಗ್ಗಿಸುವ ಪ್ರಶ್ನೆಯೇ ಇಲ್ಲ' ಎಂದು ಶನಿವಾರ ದೆಹಲಿಯಲ್ಲಿ ಹೇಳಿದ್ದರು.












Click it and Unblock the Notifications