Karnataka Election 2023: ನಾನು ಎಲ್ಲೇ ಸ್ಪರ್ಧಿಸಿದರೂ ಗೆಲ್ಲುತ್ತೇನೆ, ಬಿಜೆಪಿಗರಿಗೆ ನನ್ನ ಕಂಡರೇ ಭಯ: ಸಿದ್ದರಾಮಯ್ಯ
ರಾಯಚೂರು, ಫೆಬ್ರವರಿ, 12: ಬಿಜೆಪಿಯವರಿಗೆ ನನ್ನ ಕಂಡರೇ ಭಯ. ನಾನು ಎಲ್ಲಿ ನಿಂತರೂ ಸ್ಪರ್ಧೆ ಮಾಡಿ ಗೆಲ್ಲುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿಗೆ ರಾಯಚೂರಿನಲ್ಲಿ ಸವಾಲು ಹಾಕಿದರು.
ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಬಿಜೆಪಿವರಿಗೆ ನನ್ನ ಕಂಡರೇ ಭಯ, ಭಯ, ಭಯ ಎಂದು ಎಂದು ಮೂರು ಬಾರಿ ಉದ್ಗರಿಸಿದರು. ಅಷ್ಟೇ ಅಲ್ಲದೆ ನಾನು ಎಲ್ಲಿ ನಿಂತರೂ ಸ್ಪರ್ಧೆ ಮಾಡಿ ಗೆಲ್ಲುತ್ತೇನೆ. ಬಾದಾಮಿಯಲ್ಲಿ ನಿಂತರೂ ಗೆಲ್ಲುತ್ತೇನೆ, ಕೋಲಾರದಲ್ಲಿ ನಿಂತರೂ ಗೆಲುತ್ತೇನೆ, ವರುಣದಿಂದ ನಿಂತರೂ ಗೆಲುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಸತ್ಯ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಸತ್ಯ. ಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 130 ಸ್ಥಾನಗಳು, ಗರಿಷ್ಠ 150 ಸ್ಥಾನಗಳನ್ನು ಗೆಲ್ಲುತ್ತೇವೆ. 15 ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆ ಮಾಡುತ್ತೇವೆ. ಕಾಂಗ್ರೆಸ್ಗೆ ಮುಸ್ಲಿಮರು ಮತ ಹಾಕಬೇಡಿ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಎಚ್.ಡಿ. ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದವರೇ ಮಿಸ್ಟರ್ ಕುಮಾರಸ್ವಾಮಿಯಾಗಿದ್ದಾರೆ. ಯಡಿಯೂರಪ್ಪ ಜೊತೆಗೆ ಸೇರಿ ಸರ್ಕಾರ ರಚನೆ ಮಾಡಿದ್ದು ಯಾರು?, ಕಾಂಗ್ರೆಸ್ ಬಿಜೆಪಿ ಬಿ ಟೀಮ್ ಎಂದು ಪ್ರಚಾರ ಮಾಡುವುದು ಕುಮಾರಸ್ವಾಮಿಗೆ ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಒಂದು ಸ್ಥಾನವನ್ನೂ ಗೆಲ್ಲಲ್ಲ
ರಾಯಚೂರಿನಲ್ಲಿ ಬಿಜೆಪಿ ಒಂದು ಸ್ಥಾನವನ್ನೂ ಕೂಡ ಗೆಲ್ಲಲು ಆಗುವುದಿಲ್ಲ. ಅದಕ್ಕೆ ಬಿಜೆಪಿಯವರು ಸುಳ್ಳು ಹೇಳಿಕೊಂಡು ಪ್ರಚಾರ ಮಾಡಿಕೊಂಡು ಓಡಾಟ ಆರಂಭಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ 50ರಿಂದ 60ಸ್ಥಾನ ಗೆದ್ದರೆ ಹೆಚ್ಚು, ರಾಯಚೂರಿನಲ್ಲಿ ಒಂದು ಸ್ಥಾನವು ಗೆಲ್ಲಲ್ಲ ಎಂದ ಭವಿಷ್ಯ ನುಡಿದರು. ಕಾಂಗ್ರೆಸ್ನಲ್ಲಿ ಗೆಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತೇವೆ. 15 ದಿನಗಳಲ್ಲಿ ಎಲ್ಲಾ ಗೊಂದಲಕ್ಕೆ ತೆರೆ ಎಳೆಯುತ್ತೇವೆ. ಅರಸಿಕೇರೆ ಶಾಸಕ ಶಿವಲಿಂಗೇಗೌಡರು 100% ಕಾಂಗ್ರೆಸ್ಗೆ ಬರುತ್ತಾರೆ ಎಂದರು.
ಇನ್ನು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೊಸ ಪಕ್ಷ ಕೆಕೆಪಿಆರ್ ಸ್ಥಾಪನೆ ವಿಚಾರಕ್ಕೆ ಪ್ರಕ್ರಿಯೆ ನೀಡಿದ ಅವರು, ಕರ್ನಾಟಕದಲ್ಲಿ ಬಹಳ ಜನರು ಹೊಸ ಪಕ್ಷ ಕಟ್ಟಿದ್ದಾರೆ. ಅಭ್ಯರ್ಥಿಗಳನ್ನು ಹಾಕಿದ್ದಾರೆ, ಹೊಸ ಪಕ್ಷ ಕಟ್ಟಿದವರು ಯಾರು ಇಲ್ಲಿ ಉಳಿದಿಲ್ಲ. ಪಾಪ ಜನಾರ್ದನ ರೆಡ್ಡಿ ಅವರು ದುಡ್ಡು ಇದೆ ಅಂತಾ ಹೊಸ ಪಕ್ಷ ಕಟ್ಟಿದ್ದಾರೆ. ಅವರ ಪಕ್ಷಕ್ಕೆ ನನ್ನದೇನು ತಕರಾರು ಇಲ್ಲ ಎಂದರು.

ಹಾಗೆಯೇ ಈ ಹಿಂದೆ ಶ್ರೀರಾಮುಲು, ಬಂಗಾರಪ್ಪ, ಯಡಿಯೂರಪ್ಪ, ದೇವರಾಜ್ ಅರಸು, ವಿಜಯ್ ಮಲ್ಯ ಒಂದೊಂದು ಪಕ್ಷವನ್ನು ಕಟ್ಟಿದ್ದರು. ಅವರೆಲ್ಲ ಇದ್ದಾರಾ ಈಗ? ಪಾಪ ಜನಾರ್ದನ ರೆಡ್ಡಿ ಪಕ್ಷವೂ ಹಾಗೇ ಆಗಬಹುದು ಎಂದು ಪರೋಕ್ಷವಾಗಿ ಟೀಕೆ ಮಾಡಿದರು.











Click it and Unblock the Notifications