ಚುನಾವಣಾ ಪ್ರಣಾಳಿಕೆಯಲ್ಲಿ ಮದ್ಯ ನಿಷೇಧ ಘೋಷಣೆಯಾಗಲಿ-ಮೇಧಾ ಪಾಟ್ಕರ್
ರಾಯಚೂರು, ಅಕ್ಟೋಬರ್ 29: ದುಡಿಯುವ ವರ್ಗಗಳಿಗೆ ಮಾರಕವಾಗಿ ಕಾಡುತ್ತಿರುವ ಮತ್ತು ದುಡಿದ ಹಣವೆಲ್ಲಾ ಖರ್ಚು ಮಾಡಿಸಿ ಅನಾರೋಗ್ಯಕ್ಕೆ ತುತ್ತು ಮಾಡುವ ಮದ್ಯವನ್ನು ಕರ್ನಾಟಕ ರಾಜ್ಯದಲ್ಲಿ ಸಂಪೂರ್ಣ ನಿಷೇಧ ಮಾಡಬೇಕು ಎಂದು ಒತ್ತಾಯಿಸಿ ರಾಯಚೂರಿನಲ್ಲಿ ಸಹಸ್ರಾರು ಮಹಿಳೆಯರು ಸಮಾವೇಶ ನಡೆಸಿದರು. ಸಮಾವೇಶಕ್ಕೆ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರು ಚಾಲನೆ ನೀಡಿದರು.
ರಾಜ್ಯದಲ್ಲಿ ಮದ್ಯ ನಿಷೇಧಿಸಬೇಕು ಮತ್ತು ಮದ್ಯ ನಿಷೇಧಿಸಿದವರಿಗೆ ನಮ್ಮ ಮತ ಎನ್ನುವ ಘೋಷಣೆಯೊಂದಿಗೆ ರಾಯಚೂರಿನಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಂಘಟನೆ ವತಿಯಿಂದ ರಾಯಚೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ ಸಹಸ್ರಾರು ಮಹಿಳೆಯರು ಭಾಗವಹಿಸಿದ್ದರು.

ಸಮಾವೇಶವನ್ನು ಮದ್ಯದ ಬಾಟಲಿ ಒಡೆಯುವ ಮೂಲಕ ನರ್ಮದಾ ಬಚಾವೋ ಆಂದೋಲನದ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರು ಚಾಲನೆ ನೀಡಿದರು. ಇದಕ್ಕಿಂತ ಪೂರ್ವದಲ್ಲಿ ರಣವಾದ್ಯ ತಂಡದ ಪ್ರದರ್ಶನ ನಡೆಯಿತು. ಪ್ರತಿ ವರ್ಷ ಹತ್ತು ಲಕ್ಷ ಜನರು ಮದ್ಯ ಸೇವನೆಯಿಂದ ಅನಾರೋಗ್ಯ ತುತ್ತಾಗಿ ಮರಣ ಹೊಂದುತ್ತಿದ್ದಾರೆ. ನಿತ್ಯ ಮಹಿಳೆಯರು ಮದ್ಯಪಾನದಿಂದ ತೊಂದರೆ ಅನುಭವಿಸುತಿದ್ದಾರೆ. ಮತ ಬ್ಯಾಂಕ್ ಗಾಗಿ ರಾಜಕಾರಣಿಗಳು ಮದ್ಯ ಹಂಚುವ ಬದಲು ಚುನಾವಣಾ ಪ್ರಣಾಳಿಕೆಯಲ್ಲಿ ಮದ್ಯ ನಿಷೇಧ ಘೋಷಣೆಯಾಗಬೇಕು ಅಂತ ಮೇಧಾ ಪಾಟ್ಕರ್ ಒತ್ತಾಯಿಸಿದರು.
ತರಳಬಾಳು ಶ್ರೀಗಳ ಆಗ್ರಹ: ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯರು ಮದ್ಯ ನಿಷೇಧಕ್ಕೆ ಸರಕಾರವನ್ನು ಒತ್ತಾಯಿಸಿದರು. ಮೂವತ್ತು ವರ್ಷಗಳಿಂದ ತಮ್ಮ ಮಠ ಮದ್ಯ ನಿಷೇಧ ಮಾಡುವಂತೆ ಹೋರಾಡುತ್ತಾ ಬಂದಿದೆ. ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಜಾರಿಗೊಳಿಸಬೇಕು. ಮದ್ಯ ನಿಷೇಧದಿಂದ ರಾಜ್ಯ ಸರ್ಕಾರದ ಆದಾಯ ಕಡಿತದ ಮಾತು ಒಪ್ಪಲು ಸಾಧ್ಯವಿಲ್ಲ. ಜನರ ಆರೋಗ್ಯ ಮತ್ತು ನೈತಿಕತೆ ಕಾಪಾಡುವುದು ಸರ್ಕಾರದ ಅದ್ಯ ಕರ್ತವ್ಯವಾಗಬೇಕು.

ಟಿಪ್ಪು ಸುಲ್ತಾನನ ಆಡಳಿತದಲ್ಲೇ ಮದ್ಯ ನಿಷೇಧ ಮಾಡಲಾಗಿತ್ತು. ರಾಜ ಪ್ರಭುತ್ವದಲ್ಲೇ ಆದಾಯ ಮುಖ್ಯವಾಗಿರಲಿಲ್ಲ ಅಂದಾಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಹಿತ ಮುಖ್ಯವಾಗಿರುವುದರಿಂದ ಮದ್ಯ ನಿಷೇಧ ಜಾರಿಗೊಳಿಸಲೇಬೇಕು. ಮುಂಬರುವ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಮದ್ಯ ನಿಷೇಧ ಮಾಡುವ ಬಗ್ಗೆ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಬೇಕು ಅಂತ ಶ್ರೀಗಳು ಒತ್ತಾಯಿಸಿದರು.
ಮದ್ಯ ನಿಷೇಧ ಆಂದೋಲನ ಕರ್ನಾಟಕ ಸೇರಿದಂತೆ ರಾಯಚೂರಿನಲ್ಲಿ 16 ಸಂಘಟನೆಗಳು ಒಗ್ಗೂಡಿ ಬೃಹತ್ ಸಮಾವೇಶ ಮತ್ತು ರ್ಯಾಲಿ ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ಆಳಂದ ಶಾಸಕ ಬಿ.ಆರ್.ಪಾಟೀಲ್, ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಜನ ಸಂಗ್ರಾಮ ಪರಿಷತ್ ರಾಜ್ಯ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.












Click it and Unblock the Notifications