ದೇವಾಲಯ ನಿರ್ಮಾಣಕ್ಕಾಗಿ ಮುಸ್ಲೀಂ ಕುಟುಂಬದಿಂದ 2.5 ಕೋಟಿ ರೂ. ಮೌಲ್ಯದ ಭೂಮಿ ದಾನ
ಪಾಟ್ನಾ ಮಾರ್ಚ್ 22: ದೇಶದಲ್ಲಿ ಕೋಮು ಸೌಹಾರ್ದತೆಗೆ ಉದಾಹರಣೆಯಾಗಿ ಬಿಹಾರದ ಮುಸ್ಲಿಂ ಕುಟುಂಬವೊಂದು ರಾಜ್ಯದ ಪೂರ್ವ ಚಂಪಾರಣ್ ಜಿಲ್ಲೆಯ ಕೈತ್ವಾಲಿಯಾ ಪ್ರದೇಶದಲ್ಲಿ ವಿಶ್ವದ ಅತಿದೊಡ್ಡ ಹಿಂದು ದೇವಾಲಯ ನಿರ್ಮಾಣಕ್ಕಾಗಿ ಭೂಮಿ ದಾನ ಮಾಡಿದೆ. ಆಶ್ಚರ್ಯ ಎನಿಸಿದರು ಇದು ನಿಜವೇ. ಹಿಂದೂ ವಿರಾಟ್ ರಾಮಾಯಣ ಮಂದಿರ ನಿರ್ಮಾಣಕ್ಕಾಗಿ ಮುಸ್ಲಿಂ ಕುಟುಂಬವೊಂದು ರೂ.2.5 ಕೋಟಿ ಮೌಲ್ಯದ ಭೂಮಿಯನ್ನು ದಾನ ಮಾಡಿದೆ.
ಯೋಜನೆಯನ್ನು ಕೈಗೆತ್ತಿಕೊಂಡಿರುವ ಪಾಟ್ನಾ ಮೂಲದ ಮಹಾವೀರ ಮಂದಿರ ಟ್ರಸ್ಟ್ನ ಮುಖ್ಯಸ್ಥ ಆಚಾರ್ಯ ಕಿಶೋರ್ ಕುನಾಲ್ ಅವರು ಸೋಮವಾರ ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭೂಮಿಯನ್ನು ದಾನ ಮಾಡಿರುವ ಗುವಾಹಟಿ ಮೂಲದ ಪೂರ್ವ ಚಂಪಾರಣ್ನ ಉದ್ಯಮಿ ಇಶ್ತಿಯಾಕ್ ಅಹ್ಮದ್ ಖಾನ್ ಅವರಿಗೆ ಧನ್ಯವಾದ ತಿಳಿಸಿದರು.
"ಇಶ್ತಿಯಾಕ್ ಅಹ್ಮದ್ ಖಾನ್ ಅವರು ಇತ್ತೀಚೆಗೆ ಕೇಶರಿಯಾ ಉಪವಿಭಾಗದ (ಪೂರ್ವ ಚನ್ಂಪಾರಣ್) ರಿಜಿಸ್ಟ್ರಾರ್ ಕಚೇರಿಯಲ್ಲಿ ದೇವಾಲಯದ ನಿರ್ಮಾಣಕ್ಕಾಗಿ ತಮ್ಮ ಕುಟುಂಬಕ್ಕೆ ಸೇರಿದ ಭೂಮಿಯನ್ನು ದಾನ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಎಲ್ಲಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ್ದಾರೆ" ಎಂದು ಮಾಜಿ ಭಾರತೀಯ ಪೊಲೀಸ್ ಸೇವಾ ಅಧಿಕಾರಿ ಕುನಾಲ್ ಸುದ್ದಿಗಾರರಿಗೆ ತಿಳಿಸಿದರು.

ಖಾನ್ ಮತ್ತು ಅವರ ಕುಟುಂಬದವರ ಈ ದೇಣಿಗೆಯು ಎರಡು ಸಮುದಾಯಗಳ ನಡುವಿನ ಸಾಮಾಜಿಕ ಸಾಮರಸ್ಯ ಮತ್ತು ಸಹೋದರತ್ವಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಕುನಾಲ್ ಹೇಳಿದರು. ಮುಸ್ಲಿಮರ ಸಹಾಯವಿಲ್ಲದಿದ್ದರೆ ಈ ಕನಸಿನ ಯೋಜನೆ ಸಾಕಾರಗೊಳ್ಳುವುದು ಕಷ್ಟಸಾಧ್ಯವಾಗಿತ್ತು ಎಂದು ಹೇಳಿದುರು.
ಮಹಾವೀರ ಮಂದಿರ ಟ್ರಸ್ಟ್ ಈ ದೇವಸ್ಥಾನ ನಿರ್ಮಾಣಕ್ಕಾಗಿ ಇದುವರೆಗೆ 125 ಎಕರೆ ಭೂಮಿಯನ್ನು ಪಡೆದುಕೊಂಡಿದೆ. ಟ್ರಸ್ಟ್ ಶೀಘ್ರದಲ್ಲೇ ಈ ಪ್ರದೇಶದಲ್ಲಿ ಇನ್ನೂ 25 ಎಕರೆ ಭೂಮಿಯನ್ನು ಪಡೆಯಲಿದೆ. ವಿರಾಟ್ ರಾಮಾಯಣ ಮಂದಿರವು 215 ಅಡಿ ಎತ್ತರವಿರುವ ಕಾಂಬೋಡಿಯಾದ 12 ನೇ ಶತಮಾನದ ವಿಶ್ವಪ್ರಸಿದ್ಧ ಅಂಕೋರ್ ವಾಟ್ ಸಂಕೀರ್ಣಕ್ಕಿಂತ ಎತ್ತರವಾಗಿದೆ. ಪೂರ್ವ ಚಂಪಾರಣ್ನಲ್ಲಿರುವ ನಿರ್ಮಾಣಗೊಳ್ಳುತ್ತಿರುವ ದೇವಾಲಯ 18 ದೇವಾಲಯಗಳನ್ನು ಒಳಗೊಂಡಿರುತ್ತದೆ ಮತ್ತು ಅದರ ಶಿವ ದೇವಾಲಯವು ವಿಶ್ವದ ಅತಿದೊಡ್ಡ ಶಿವಲಿಂಗವನ್ನು ಹೊಂದಿರುತ್ತದೆ.

ಒಟ್ಟು ನಿರ್ಮಾಣ ವೆಚ್ಚ ಸುಮಾರು ₹ 500 ಕೋಟಿ ಎಂದು ಅಂದಾಜಿಸಲಾಗಿದೆ. ನವದೆಹಲಿಯಲ್ಲಿ ನೂತನ ಸಂಸತ್ ಭವನ ನಿರ್ಮಾಣದಲ್ಲಿ ತೊಡಗಿರುವ ತಜ್ಞರಿಂದ ಟ್ರಸ್ಟ್ ಶೀಘ್ರದಲ್ಲೇ ಸಲಹೆ ಪಡೆಯಲಿದೆ.












Click it and Unblock the Notifications