ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಆ ಯೋಧ ಮನೆಗೆ ಬಂದಿದ್ದು ಶವವಾಗಿ...
ಪಾಟ್ನಾ, ಫೆಬ್ರವರಿ 16: ನಾಲ್ಕು ವರ್ಷ ವಯಸ್ಸಿನ ಆ ಹುಡುಗನಿಗೆ ತಂದೆ ಇನ್ನಿಲ್ಲ ಎಂಬುದು ಬಹುಶಃ ಗೊತ್ತೇ ಇಲ್ಲ. ಮುಖದಲ್ಲಿ ದುಃಖವಿಲ್ಲ, ಕೈಯಲ್ಲೊಂದು ಆಟಿಕೆ ಹಿಡಿದು ಕುಳಿತ ಆ ಮಗುವನ್ನು ನೋಡಿದರೆ ಕರುಳು ಕಿವುಚುತ್ತದೆ.
ಇದು ಪುಲ್ವಾಮಾದ ಆ ಭೀಕರ ಘಟನೆಯಲ್ಲಿ ಹುತಾತ್ಮರಾದ ರತನ್ ಠಾಕೂರ್ ಎಂಬ ಯೋಧರೊಬ್ಬರ ಪುತ್ರನ ಕತೆ...
ಪುಲ್ವಾಮಾದಲ್ಲಿ ಹುತಾತ್ಮರಾದ 44 ಯೋಧರ ಹಿಂದೆಯೂ ಒಂದೊಂದು ಕತೆಯಿದೆ. ನೂರಾರು ಜನರ ನೋವಿದೆ, ಕತ್ತಲಾದ ಭವಿಷ್ಯವಿದೆ.
ಅಂತೆಯೇ ಬಿಹಾರದ ಪಾಟ್ನಾದ ರತನ್ ಕುಮಾರ್ ಠಾಕೂರ್ ಎಂಬುವವರು ತಮ್ಮ ಎರಡನೇ ಮಗುವಿಗೆ ನಿರೀಕ್ಷಿಸುತ್ತಿದ್ದ ಸಮಯದಲ್ಲೇ ರಣಹೇಡಿ ಉಗ್ರದಾಳಿಗೆ ಬಲಿಯಾಗಿದ್ದಾರೆ.
ಫೆಬ್ರವರಿ 14 ರಂದು ಸಿಆರ್ ಪಿಎಫ್ ಯೋಧರಿದ್ದ ಬಸ್ ಮೇಲೆ ನಡೆದ ಭಯೋತ್ಪಾದಕ ದಾಳಿಯಿಂದಾಗಿ 44 ಯೋಧರು ಹುತಾತ್ಮರಾದರು. ಈ ಭೀಕರ ಕೃತ್ಯಕ್ಕೆ ಇಡೀ ದೇಶವೂ ಒಂದೆಡೆ ಕಂಬನಿಗರೆದರೆ, ಮತ್ತೊಂದೆಡೆ ಭಯೋತ್ಪಾದನೆಯನ್ನು ಹತ್ತಿಕ್ಕಲೇ ಬೇಕು ಎಂಬ ಆಕ್ರೋಶವನ್ನೂ ವ್ಯಕ್ತಪಡಿಸಿತು.

ಆ ಕುಟುಂಬದ ನೋವು ಕೇಳುವವರ್ಯಾರು?
ರತನ್ ಠಾಕೂರ್ ಕುಟುಂಬ ಭವಿಷ್ಯದ ಕುರಿತು ಚಿಂತಿಸುವುದಕ್ಕೂ ಭಯವೆಂಬಂತೆ ತಲೆಮೇಲೆ ಕೈಹೊತ್ತು ಕೂತಿದೆ. ನಾಲ್ಕು ವರ್ಷದ ಪುಟ್ಟ ಮಗ ಮತ್ತು ಗರ್ಭದಲ್ಲಿರುವ ಕುಡಿಯ ಭವಿಷ್ಯವೇನು ಎಂಬ ಚಿಂತೆಯಲ್ಲಿ ಗರ್ಭಿಣಿ ಮಡದಿ ಚಿಂತಾಕ್ರಾಂತಳಾಗಿ ಕುಳಿತಿದ್ದಾರೆ. ಈ ದೃಶ್ಯ ನೋಡಿದರೆ ಭಯೋತ್ಪಾದನೆ ಎಂಬ ಹುಚ್ಚು, ವಿಕೃತಿ, ಹಿಸೆಯಿಂದ ಸಂಭವಿಸುವ ದುರಂತ ಕಣ್ಣಿಗೆ ಕಟ್ಟುತ್ತದೆ.

ತಂದೆಯ ಮನವಿ
"ನಮ್ಮ ಕುಟುಂಬ ಅವಲಂಬಿಸಿದ್ದೇ ರತನ್ ಸಂಬಳವನ್ನು. ಆದರೆ ಈಗ ಅವನಿಲ್ಲವೆಂದರೆ ನಮ್ಮ ಭವಿಷ್ಯವೇನು? ದಯವಿಟ್ಟು ನನ್ನ ಮತ್ತೊಬ್ಬ ಮಗನಿಗಾದರೂ ಕೆಲಸ ನೀಡಿ" ಎಂದು ಠಾಕೂರ್ ಕಣ್ಣೀರುಗರೆಯುತ್ತಾರೆ.

ಸರ್ಜಿಕಲ್ ಸ್ಟ್ರೈಕ್ ನಡೆಯಲಿದೆ
"ಈ ಘಟನೆ ನಮ್ಮನ್ನು ಅಧೀರರನ್ನಾಗಿ ಮಾಡಿದೆ. ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಯಲಿ. ನಾವು ಈ ಭಯೋತ್ಪಾದನೆಯನ್ನು ಎಷ್ಟು ದಿನವೆಮದು ಸಹಿಸಿಕೊಂಡಿರುವುದು?" ಎಂದು ಈ ಘಟನೆಯಲ್ಲಿ ಹುತಾತ್ಮರಾದ ಯೋಧ ಬಿಹಾರದ ಭಗಲ್ಪುರದ ಸಂಜಯ್ ಕುಮಾರ್ ಸಿನ್ಹಾ ಅವರ ಪತ್ನಿಯ ಮಾತು ಇದು.

ಮಗಳ ಮದುವೆ ಮಾಡುತ್ತೇನೆ ಎಂದಿದ್ದ!
"ನನ್ನ ಮಗ ಸಂಜಯ್ ಕುಮಾರ್ ಕೆಲವೇ ದಿನದಲ್ಲಿ ವಾಪಸ್ ಬಂದು ಮಗಳ ಮದುವೆ ಮಾಡುವುದಾಗಿ ಹೇಳಿದ್ದ. ಸರ್ಕಾರ ನನ್ನ ಕುಟುಂಬದ ಭವಿಷ್ಯಕ್ಕಾಗಿ ಕುಟುಂಬದ ಯಾರಾದರಿಗೂ ಕೆಲಸ ನೀಡಬೇಕು" ಎಂಡು ಬಿಕ್ಕುತ್ತಾರೆ ಸಿನ್ಹಾ ಅವರ ತಂದೆ ಮಹೇಂದ್ರ ಪ್ರಸಾದ್.












Click it and Unblock the Notifications