ಬಿಹಾರದಲ್ಲಿ ಮೋದಿ ಅಲೆ ಇಲ್ಲ, ಮಹಾಘಟಬಂಧನ್ ಇನ್ನಷ್ಟು ಸಶಕ್ತ:ದೀಪಾಂಕರ್
ಪಾಟ್ನಾ, ನವೆಂಬರ್ 11: ಬಿಹಾರದಲ್ಲಿ ಯಾವುದೇ ಮೋದಿ ಅಲೆ ಇಲ್ಲ, ನಾವು ಗೆಲ್ಲದಿದ್ದರೂ ನಿತೀಶ್ ಸರ್ಕಾರದ ವಿರೋಧದ ಆಕ್ರೋಶ ಕಾಣಿಸುತ್ತಿದೆ ಎಂದು ಸಿಪಿಐ(ಎಂಎಲ್) ಬಣ್ಣಿಸಿದೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ ಸೋತಿಲ್ಲ, ಇನ್ನಷ್ಟು ಬಲಿಷ್ಠವಾಗಿದೆ. ಚುನಾವಣಾ ಫಲಿತಾಂಶದಲ್ಲಿ ಯಾವುದೇ ಮೋದಿ ಫ್ಯಾಕ್ಟರ್ ಕಾಣಿಸುತ್ತಿಲ್ಲ. ಒಂದೊಮ್ಮೆ ಹಾಗಿದ್ದರೆ ಬಿಜೆಪಿ ಇನ್ನಷ್ಟು ಸೀಟುಗಳನ್ನು ಗೆಲ್ಲಬೇಕಿತ್ತು ಎಂದು ಸಿಪಿಎಂಎಲ್ ನಾಯಕ ದೀಪಾಂಕರ್ ಭಟ್ಟಾಚಾರ್ಯ ಹೇಳಿದ್ದಾರೆ.
ಬಿಹಾರದಲ್ಲಿ ಮತ್ತೆ ಅಧಿಕಾರಕ್ಕೆ ಎನ್ಡಿಎ
ಸಿಪಿಐ(ಎಂಎಲ್) ಇನ್ನಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕಿತ್ತು.ಆದಾಗ್ಯೂ ಸಿಪಿಐ(ಎಂಎಲ್), ಆರ್ಜೆಡಿ ಕಾಂಗ್ರೆಸ್ ಮೈತ್ರಿಗೆ ಉತ್ತಮ ಸ್ಪಂದನೆ ದೊರೆತಿದೆ.
ಸುದೀರ್ಘ ಸಮಯದವರೆಗೆ ನಡೆದ ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕೊನೆಗೂ ಮುಕ್ತಾಯವಾಗಿದ್ದು, ಜೆಡಿಯು-ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಮ್ಯಾಜಿಕ್ ಸಂಖ್ಯೆಯ ಗಡಿ ದಾಟುವ ಮೂಲಕ ಮತ್ತೊಮ್ಮೆ ಸರ್ಕಾರ ರಚಿಸುವ ಅವಕಾಶ ಪಡೆದಿದೆ.
ಆಡಳಿತಾರೂಢ ಎನ್ಡಿಎ ವಿರುದ್ಧದ ಅಲೆ, ನಿರುದ್ಯೋಗದ ಸಮಸ್ಯೆ ಮುಂತಾದವು ಜೆಡಿಯು-ಬಿಜೆಪಿ ಮೈತ್ರಿಕೂಟಕ್ಕೆ ಮುಳುವಾಗಲಿದೆ ಎಂದು ನಂಬಲಾಗಿತ್ತು. ಆದರೆ ಮತದಾರರು ಎನ್ಡಿಎಗೆ ಮತ್ತೊಂದು ಅವಕಾಶ ನೀಡಿದ್ದಾರೆ. ಈ ಮೂಲಕ ಬಿಹಾರದಲ್ಲಿ ಅಧಿಕಾರಕ್ಕೇರುವ ತೇಜಸ್ವಿ ಯಾದವ್ ನೇತೃತ್ವದ ಮಹಾ ಘಟಬಂಧನದ ಕನಸು ನುಚ್ಚುನೂರಾಗಿದೆ.
ಎನ್ಡಿಎ ಮೈತ್ರಿಕೂಟದಲ್ಲಿ ಬಿಜೆಪಿ 74, ಜೆಡಿಯು 43, ಎಚ್ಎಎಂ-ಎಸ್ 4, ವಿಐಪಿ 4 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ 125 ಸೀಟುಗಳಲ್ಲಿ ಗೆಲುವು ಸಾಧಿಸಿ ವಿಜಯದ ನಗೆ ಬೀರಿದೆ.
ಇನ್ನೊಂದೆಡೆ ಅದಕ್ಕೆ ತೀವ್ರ ಪೈಪೋಟಿ ನೀಡಿದ ಆರ್ಜೆಡಿ 75 ಸೀಟುಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ 19, ಸಿಪಿಐ ಎಂಎಲ್ಎಲ್ 12, ಸಿಪಿಐ 2, ಸಿಪಿಐ ಎಂ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಮಹಾಘಟಬಂಧನ ಮೈತ್ರಿಕೂಟವು 110 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.
Recommended Video