ರಾಮ್ ವಿಲಾಸ್ ಪಾಸ್ವಾನ್ ರನ್ನು ಅವಮಾನಿಸಿದರಾ ಸಿಎಂ ನಿತೀಶ್ ಕುಮಾರ್?
ಪಾಟ್ನಾ, ಅಕ್ಟೋಬರ್.10: ಕೇಂದ್ರ ಆಹಾರ ಪೂರೈಕೆ ಮತ್ತು ಸರಬರಾಜು ಸಚಿವರಾಗಿದ್ದ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ರನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವಮಾನಿಸಿದ್ದರು ಎಂದು ಪುತ್ರ ಚಿರಾಗ್ ಪಾಸ್ವಾನ್ ಗಂಭೀರ ಆರೋಪ ಮಾಡಿದ್ದಾರೆ.
ಕಳೆದ ಸಪ್ಟೆಂಬರ್.24ರಂದು ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾರಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದರು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಟಿಕೆಟ್ ರೇಸ್: ಮಾಜಿ ಕಾನ್ಸ್ ಟೇಬಲ್ ಮುಂದೆ ಸೋತ ಮಾಜಿ ಡಿಜಿಪಿ
ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ವಿರುದ್ಧ ಆಡಳಿತ ವಿರೋಧಿ ಅಲೆಯಿದೆ. ಉನ್ನತ ಎನ್ಡಿಎ ನಾಯಕರ ಸಾರ್ವಜನಿಕ ಆಶ್ವಾಸನೆಯ ಹೊರತಾಗಿಯೂ ಬಿಹಾರ ಸಿಎಂ ತಮ್ಮ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ರಾಜ್ಯಸಭಾ ಸ್ಥಾನಕ್ಕಾಗಿ ಅವಮಾನಿಸಿದ್ದಾರೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು, ಎಲ್ಜೆಪಿಯ ಸಂಸ್ಥಾಪಕರಾದ ರಾಮ್ ವಿಲಾಸ್ ಪಾಸ್ವಾನ್ ಆರೋಗ್ಯದ ಬಗ್ಗೆ ವಿಚಾರಿಸಲು ಆಗಾಗ್ಗೆ ಕರೆ ಮಾಡುತ್ತಿದ್ದರು. ಈ ವೇಳೆ ಜೆಡಿಯು ಅಧ್ಯಕ್ಷ ನಿತೀಶ್ ಕಮಾಮರ್ ತಮಗೇನೂ ಮಾಹಿತಿಯಿಲ್ಲ ಎನ್ನುವಂತೆ ಉತ್ತರಿಸಿದ್ದಾರೆ. ಆ ಮೂಲಕ ತಮ್ಮ ತಂದೆಗೆ ಅವಮಾನ ಮಾಡಿದ್ದಾರೆ ಎಂದು ಚಿರಾಗ್ ಪಾಸ್ವಾನ್ ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ.
ನಿತೀಶ್ ಕುಮಾರ್ ಬಗ್ಗೆ ಬಿಜೆಪಿ ಶಾಸಕರಿಗೆ ಅಸಮಾಧಾನ:
ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಡಳಿತ ಮತ್ತು ನಡೆದುಕೊಳ್ಳುವ ರೀತಿಯ ಬಗ್ಗೆ ಹಲವು ಬಿಜೆಪಿ ಶಾಸಕರಿಗೇ ಅಸಮಾಧಾನವಿದೆ. ಒಂದು ಕಡೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹೆಚ್ಚಾಗುತ್ತಿದ್ದರೆ, ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ಆಡಳಿತದಿಂದ ಅದಕ್ಕೆ ತದ್ವಿರುದ್ಧವಾದ ಬೆಳವಣಿಗೆಗಳು ನಡೆಯುತ್ತಿವೆ ಎಂದು ಚಿರಾಗ್ ಪಾಸ್ವಾನ್ ದೂಷಿಸಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆ ಘೋಷಣೆ ಬಳಿಕ ಸಿಎಂ ನಿತೀಶ್ ಕುಮಾರ್ ಆಡಳಿತದ ವಿರುದ್ಧ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಕಿಡಿ ಕಾರಿದ್ದರು. ತಮ್ಮ ಪಕ್ಷದ ಸಿದ್ಧಾಂತಗಳೇ ಬೇರೆ, ಸಿಎಂ ಆಡಳಿತದ ವೈಖರಿಯೇ ಬೇರೆ. ಹೀಗೆ ಇರುವಾಗ ಒಟ್ಟಾಗಿ ಚುನಾವಣೆ ಎದುರಿಸುವುದಕ್ಕೆ ಸಾಧ್ಯವಿಲ್ಲ. ನಾವು ಇನ್ನು ಮುಂದೆ ಮೈತ್ರಿಕೂಟದಲ್ಲಿ ಮುಂದುವರಿಯುವುದಕ್ಕೆ ಸಾಧ್ಯವಿಲ್ಲ ಎಂದ ಚಿರಾಗ್ ಪಾಸ್ವಾನ್ ದಶಕಗಳ ನಂತರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಿಂದ ಹೊರ ಬಂದಿದ್ದರು.