ದೀದಿಗೆ ಪ್ರಶಾಂತ್ ಕಿಶೋರ್ ನೆರವು: ಬಿಜೆಪಿ-ಜೆಡಿಯು ಮೈತ್ರಿಯಲ್ಲಿ ಹಿರಿದಾದ ಕಂದಕ
ಪಟ್ನಾ, ಜೂನ್ 10: ಪಶ್ಚಿಮ ಬಂಗಾಳದಲ್ಲಿ 2021ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ಗೆ ಗೆಲುವಿನ ತಂತ್ರಗಳನ್ನು ರೂಪಿಸಲು ಮಮತಾ ಬ್ಯಾನರ್ಜಿ ಅವರು ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಅವರನ್ನು ತಮ್ಮ ಪಾಳಯಕ್ಕೆ ಸೆಳೆದುಕೊಂಡಿದ್ದಾರೆ. ಈ ನಡೆ ಬಿಹಾರದಲ್ಲಿನ ಜೆಡಿಯು-ಬಿಜೆಪಿ ಮೈತ್ರಿ ನಡುವೆ ಕಿಡಿ ಹೆಚ್ಚಾಗಲು ಕಾರಣವಾಗುವ ಸಾಧ್ಯತೆ ಇದೆ.
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಿಂದಲೂ ಪ್ರಶಾಂತ್ ಕಿಶೋರ್ ಚುನಾವಣಾ ತಂತ್ರಗಳನ್ನು ಹೆಣೆಯುವುದರಲ್ಲಿ ನಿಸ್ಸೀಮ. ಬಿಜೆಪಿ ಮಾತ್ರವಲ್ಲದೆ, ಜೆಡಿಯು-ಕಾಂಗ್ರೆಸ್-ಆರ್ಜೆಡಿ ಪಕ್ಷಗಳು ಜತೆಗೂಡಿ ರಚಿಸಿದ್ದ ಮಹಾಘಟಬಂಧನಕ್ಕೂ ಅವರು ಕೆಲಸ ಮಾಡಿದ್ದರು. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ವೈಎಸ್ಆರ್ ಕಾಂಗ್ರೆಸ್ಗೆ ಚುನಾವಣಾ ತಂತ್ರಗಳನ್ನು ರೂಪಿಸಿದ್ದರು. ಆದರೆ, ಅವರು ಈಗ ಪಶ್ಚಿಮ ಬಂಗಾಳದಲ್ಲಿ ದೀದಿ ಅಂಗಳಕ್ಕೆ ಕಾಲಿಟ್ಟಿರುವುದು ಬಿಜೆಪಿಯ ಕಣ್ಣು ಕೆಂಪಗಾಗಿಸಿದೆ.
ಬಿಜೆಪಿಯ ವಿರುದ್ಧ ತಂತ್ರಗಾರಿಕೆ ರೂಪಿಸಲು ಮಮತಾ ಬ್ಯಾನರ್ಜಿ ಅವರಿಗೆ ನೆರವಾಗಲು ಒಪ್ಪಿಕೊಂಡಿರುವ ಪ್ರಶಾಂತ್ ಕಿಶೋರ್, ಇದಕ್ಕೆ ಜೆಡಿಯು ನಾಯಕ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಂದ ಅನುಮತಿ ಪಡೆದುಕೊಂಡಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
ಜೆಡಿಯು ಪಕ್ಷದ ಸದಸ್ಯರಾಗಿರುವ ಪ್ರಶಾಂತ್ ಕಿಶೋರ್, ಬಿಹಾರ ಮತ್ತು ಕೇಂದ್ರದಲ್ಲಿ ತಮ್ಮದೇ ಪಕ್ಷದ ಮಿತ್ರಪಕ್ಷದ ವಿರುದ್ಧವೇ ಕೆಲಸ ಮಾಡಲು ಮುಂದಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಜೆಡಿಯು ಮತ್ತು ಬಿಜೆಪಿ ನಡುವೆ ಮೊದಲೇ ಮೂಡಿದ್ದ ಒಡಕು ಈಗ ಪ್ರಶಾಂತ್ ಕಿಶೋರ್ ಅವರ ಘಟನೆಯಿಂದ ಇನ್ನಷ್ಟು ದೊಡ್ಡದಾಗುವ ಸುಳಿವು ನೀಡಿದೆ.

ನಿತೀಶ್ ನಡೆಯಿಂದ ಅನುಮಾನ
ಪ್ರಶಾಂತ್ ಕಿಶೋರ್ ಅವರು ಈ ಹಿಂದೆ ಸ್ವತಂತ್ರರಾಗಿದ್ದರು. ಹೀಗಾಗಿ ಯಾವುದೇ ಪಕ್ಷದ ಪರವಾಗಿ ಚುನಾವಣಾ ಪ್ರಚಾರ ಯೋಜನೆ ರೂಪಿಸಲು ಅವಕಾಶವಿತ್ತು. ಆದರೆ, ಈಗ ಒಂದು ಪಕ್ಷದೊಳಗಿದ್ದು ಹೀಗೆ ಮತ್ತೊಂದು ಪಕ್ಷದ ಗೆಲುವಿಗೆ ನೆರವು ನೀಡುವುದು ಎಷ್ಟು ಸರಿ ಎಂಬುದು ಚರ್ಚೆಗೊಳಗಾಗಿದೆ. ಈ ವಿಚಾರವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇನ್ನೂ ಮೌನವಹಿಸಿರುವುದು ಮತ್ತಷ್ಟು ಸಂದೇಹಗಳಿಗೆ ಆಸ್ಪದ ನೀಡಿದೆ.
'ಈ ವಿಚಾರವು ಪಕ್ಷಕ್ಕೆ ಯಾವುದೇ ರೀತಿ ಸಂಬಂಧಿಸಿದ್ದಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ' ಎಂದು ನಿತೀಶ್ ಕುಮಾರ್ ಈ ವಿಚಾರದ ಕುರಿತಾದ ಪ್ರಶ್ನೆಗೆ ಶನಿವಾರ ಪ್ರತಿಕ್ರಿಯೆ ನೀಡಿದ್ದರು. 'ನಾಳೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಿದೆ. ಅದರಲ್ಲಿ ಸ್ವತಃ ಪ್ರಶಾಂತ್ ಕಿಶೋರ್ ಮಾತನಾಡುತ್ತಾರೆ' ಎಂದು ಹೇಳಿದ್ದರು.

ರೆಡ್ಡಿ ಪರ ಕೆಲಸ ಮಾಡಿದ್ದಾಗ ಪ್ರಶ್ನೆ ಬಂದಿರಲಿಲ್ಲವೇಕೆ?
'ಐ-ಪ್ಯಾಕ್ಗೂ ಜೆಡಿಯುಗೂ ಸಂಬಂಧವಿಲ್ಲ. ಅದು ಜೆಡಿಯುದ ಭಾಗವೂ ಅಲ್ಲ. ಪ್ರಶಾಂತ್ ಕಿಶೋರ್ ಅವರು ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ಅವರ ಪರವಾಗಿ ಕೆಲಸ ಮಾಡಿದಾಗ ಈ ಪ್ರಶ್ನೆ ಏಕೆ ಉದ್ಭವಿಸಿರಲಿಲ್ಲ? ಎಂದು ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆಸಿ ತ್ಯಾಗಿ ಹೇಳಿದ್ದಾರೆ.
ಭಾನುವಾರ ರಾಷ್ಟ್ರೀಯ ಕಾರ್ಯಕಾರಿಣಿಗೂ ಮುನ್ನ ನಿತೀಶ್ ಕುಮಾರ್ ಹಾಗೂ ಪ್ರಶಾಂತ್ ಕಿಶೋರ್ ಒಂದು ಗಂಟೆಗೂ ಹೆಚ್ಚು ಸಮಯ ಸುದೀರ್ಘ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಅವರ ಮಾತುಕತೆಯ ವಿವರಗಳು ಲಭ್ಯವಾಗಿಲ್ಲ. ಮೂಲಗಳ ಪ್ರಕಾರ ನಿತೀಶ್ ಅವರು, ಮಮತಾ ಪರವಾಗಿ ಚುನಾವಣಾ ತಂತ್ರಗಾರಿಕೆ ರೂಪಿಸಲು ಪ್ರಶಾಂತ್ ಕಿಶೋರ್ ಅವರಿಗೆ ಅನುಮತಿ ನೀಡಲಿದ್ದಾರೆ.

ಮಮತಾಗೆ ನೆರವು ಅನಿವಾರ್ಯ
ಬಿಜೆಪಿಯ ಅಸ್ತಿತ್ವವೇ ಇಲ್ಲದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬೇರೂರುತ್ತಿರುವುದು ಆಡಳಿತಾರೂಢ ಟಿಎಂಸಿಯ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಲ್ಲಿ ಆತಂಕ ಮೂಡಿಸಿದೆ. 2014ರ ಲೋಕಸಭೆ ಚುನಾವಣೆಯಲ್ಲಿ 42 ಸ್ಥಾನಗಳ ಪೈಕಿ ಕೇವಲ 2 ಸ್ಥಾನದಲ್ಲಿ ಗೆದ್ದಿದ್ದ ಬಿಜೆಪಿ, 2019ರಲ್ಲಿ ಅದನ್ನು 18ಕ್ಕೆ ಏರಿಸಿಕೊಂಡಿರುವುದು ಬಿಜೆಪಿ ಪ್ರಭಾವಳಿ ದಟ್ಟವಾಗಿರುವುದಕ್ಕೆ ಸಾಕ್ಷಿ. ಹೀಗೆಯೇ ಮುಂದುವರಿದರೆ ಬಿಜೆಪಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದರಲ್ಲಿ ಅಚ್ಚರಿಯಿಲ್ಲ ಎಂದು ಅನಿಸಿರುವುದರಿಂದ ಅವರು, ಪ್ರಶಾಂತ್ ಮೊರೆ ಹೋಗಿದ್ದಾರೆ.

ಬಿಜೆಪಿ-ಜೆಡಿಯು ಮುಸುಕಿನ ಗುದ್ದಾಟ
ಎನ್ಡಿಎ ಸರ್ಕಾರದ ಸಂಪುಟದಲ್ಲಿ ಜೆಡಿಯುಗೆ ಕೇವಲ ಒಂದು ಸ್ಥಾನ ನೀಡಲು ಬಿಜೆಪಿ ಮುಂದಾಗಿದ್ದು ನಿತೀಶ್ ಕುಮಾರ್ ಅವರಲ್ಲಿ ತೀವ್ರ ಅಸಮಾಧಾನ ಮೂಡಿಸಿತ್ತು. ಈ ಕಾರಣದಿಂದ ಅವರು ತಮ್ಮ ಪಕ್ಷ ಸಂಪುಟದ ಭಾಗವಾಗಿರುವುದಿಲ್ಲ ಎಂದು ಸಚಿವ ಸ್ಥಾನವನ್ನು ನಿರಾಕರಿಸಿದ್ದರು. ಅಲ್ಲದೆ, ಬಿಹಾರದಲ್ಲಿ ಸಂಪುಟ ವಿಸ್ತರಣೆ ವೇಳೆ ಬಿಜೆಪಿ ಶಾಸಕರನ್ನು ಹೊರಗಿಟ್ಟು ಜೆಡಿಯು ಶಾಸಕರಿಗೆ ಆದ್ಯತೆ ನೀಡಿದ್ದರು.
ಬಿಹಾರದ ಆಚೆಗೆ ಎಲ್ಲಿಯೂ ಜೆಡಿಯು, ಎನ್ಡಿಎ ಭಾಗವಾಗಿರುವುದಿಲ್ಲ ಎಂದು ಪಕ್ಷ ಸ್ಪಷ್ಟನೆ ನೀಡಿದೆ. ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಹರಿಯಾಣ ಮತ್ತು ದೆಹಲಿಗಳಲ್ಲಿ ಮುಂಬರುವ ಚುನಾವಣೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧೆಗೆ ಇಳಿಯುವುದಾಗಿ ತಿಳಿಸಿದೆ.

ಬಿಜೆಪಿ ಬೇಡಿಕೆಗೆ ಸೊಪ್ಪು ಹಾಕದ ನಿತೀಶ್
ಪಟ್ನಾ ವಿಶ್ವವಿದ್ಯಾಲಯ ಚುನಾವಣೆ ಸಂದರ್ಭದಲ್ಲಿ ಸಂಘರ್ಷ ನಡೆದ ಬಳಿಕ ಪ್ರಶಾಂತ್ ಕಿಶೋರ್ ಅವರನ್ನು ಬಿಹಾರದ ಆಚೆಗೆ ಕಳುಹಿಸುವಂತೆ ಬಿಜೆಪಿ ನಿತೀಶ್ ಕುಮಾರ್ ಅವರಿಗೆ ಮನವಿ ಮಾಡಿತ್ತು. ಆದರೆ, ಕಿಶೋರ್ ವಿರುದ್ಧ ನಿತೀಶ್ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ.












Click it and Unblock the Notifications