ವಲಸಿಗರು ಸತ್ತಾಗಲೂ ಮೋದಿ ತಲೆಕೆಡಿಸಿಕೊಳ್ಳಲಿಲ್ಲ: ರಾಹುಲ್ ಗಾಂಧಿ ವಾಗ್ದಾಳಿ
ಪಟ್ನಾ, ಅಕ್ಟೋಬರ್ 23: ಲಾಕ್ಡೌನ್ ಅವಧಿಯಲ್ಲಿ ಉಂಟಾಗಿದ್ದ ವಲಸಿಗರ ಬಿಕ್ಕಟ್ಟು ಹಾಗೂ ಗಡಿ ಭಾಗದಲ್ಲಿ ಚೀನಾದ ಆಕ್ರಮಣದ ವಿಚಾರದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಹಾರ ವಿಧಾನಸಭೆ ಚುನಾವಣೆಗಾಗಿ ಮಹಾ ಮೈತ್ರಿಕೂಟದ ಅಭ್ಯರ್ಥಿಗಳ ಪರ ನಾವಡಾದಲ್ಲಿ ಮಿತ್ರಪಕ್ಷಗಳ ಮುಖಂಡರ ಜತೆಗೆ ಪ್ರಚಾರ ಸಮಾವೇಶ ನಡೆಸಿದ ರಾಹುಲ್ ಗಾಂಧಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡರು.
'ಗಾಲ್ವಾನ್ ಕಣಿವೆಯಲ್ಲಿ ಚೀನೀ ಸೈನಿಕರೊಂದಿಗಿನ ಹೋರಾಟದಲ್ಲಿ ಹುತಾತ್ಮರಾದ ಯುವ ಸೈನಿಕರಿಗೆ ನಮಿಸುತ್ತೇನೆ' ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಟೀಕಿಸಿದ ರಾಹುಲ್ ಗಾಂಧಿ, ಚೀನೀಯರ ನುಸುಳುವಿಕೆಯಿಂದ ಭಾರತದ ಪ್ರದೇಶವನ್ನು ಕಾಪಾಡುವಲ್ಲಿ ಮೋದಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

'ಬಿಹಾರದ ಸೈನಿಕರ ಮುಂದೆ ತಮ್ಮ ತಲೆ ಬಾಗಿಸುವುದಾಗಿ ಮೋದಿ ಅವರು ಹೇಳಿದ್ದಾರೆ. ಇಡೀ ದೇಶವೇ ಹುತಾತ್ಮರ ಮುಂದೆ ಮಂಡಿಯೂರುತ್ತದೆ. ಆದರೆ ಅದು ಇಲ್ಲಿ ಪ್ರಶ್ನೆಯೇ ಅಲ್ಲ. ಪ್ರಶ್ನೆ ಎಂದರೆ ಬಿಹಾರದ ಯುವ ಸೈನಿಕರು ಕಾರ್ಯಾಚರಣೆಯಲ್ಲಿ ಹತರಾದಾಗ ಪ್ರಧಾನಿ ಏನು ಹೇಳಿದ್ದರು ಮತ್ತು ಏನು ಮಾಡಿದ್ದರು?' ಎಂದು ಕೇಳಿದರು.
'ಚೀನಾವು ನಮ್ಮ ಭೂಭಾಗದೊಳಗೆ ಪ್ರವೇಶಿಸಿಲ್ಲ ಎಂದು ಮೋದಿ ಸುಳ್ಳು ಹೇಳಿದ್ದರು. ನಮ್ಮ ಸೈನಿಕರು ಸತ್ತಾಗ ಮೋದಿ ಎಲ್ಲಿದ್ದರು?' ಎಂದು ಕಿಡಿಕಾರಿದರು.
'ಕಾರ್ಮಿಕರ ಎದುರು ಮಂಡಿಯೂರುವುದಾಗಿ ಅವರು ಹೇಳುತ್ತಾರೆ. ಆದರೆ ಕಾರ್ಮಿಕರಿಗೆ ಮೋದಿ ಅವರ ಅಗತ್ಯ ಇದ್ದಾಗ ಅವರು ಏನೂ ಮಾಡಲಿಲ್ಲ. ನೀವು ನಡೆಯುತ್ತಲೇ ಹೋಗಿದ್ದಿರಿ, ಬಳಲಿಕೆ, ಹಸಿವಿನ ನಡುವೆ ಸಾವಿರ ಕಿ.ಮೀ. ನಡೆದುಕೊಂಡು ಹೋದಿರಿ. ಆದರೆ ಮೋದಿ ನಿಮಗೆ ರೈಲು ನೀಡಲಿಲ್ಲ. ನೀವು ಸತ್ತರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸರ್ಕಾರ ಹೇಳಿತು' ಎಂದರು.
ನಿತೀಶ್ ಕುಮಾರ್ ಮತ್ತು ನರೇಂದ್ರ ಮೋದಿ ಅವರಿಗೆ ಬಿಹಾರ ತೀಕ್ಷ್ಣ ಪ್ರತ್ಯುತ್ತರ ನೀಡಲಿದೆ. ಮೋದಿ ಅವರಿಗೆ ಸರಿಯಾದ ಉತ್ತರ ಸಿಗಲಿದೆ ಎಂದು ಹೇಳಿದರು.












Click it and Unblock the Notifications