ಲಾಲು ಪ್ರಸಾದ್ ಯಾದವ್, ತೇಜಸ್ವಿ ಯಾದವ್ ಭೇಟಿಯಾದ ನಟ ಮನೋಜ್ ಬಾಜಪೇಯಿ
ಪಾಟ್ನಾ, ಸೆ.18: ಬಾಲಿವುಡ್ ನಟ ಮನೋಜ್ ಬಾಜಪೇಯಿ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಅವರ ತಂದೆ, ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರನ್ನು ಪಾಟ್ನಾದ ನಿವಾಸದಲ್ಲಿ ಭೇಟಿಯಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿರುವ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಮಾಹಿತಿ ಪಡೆದರು ಎಂದು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಶನಿವಾರ ತಿಳಿಸಿದ್ದಾರೆ.
ವಿಡಿಯೋ: 'ಬಾಹುಬಲಿ' ಸಿನಿಮಾದಿಂದ ಸ್ಫೂರ್ತಿ ಪಡೆದು ಜೀಪ್ ಎಳೆದ ಆರ್ಜೆಡಿ ನಾಯಕ
ನಟ ಮನೋಜ್ ಬಾಜಪೇಯಿ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯವರಾಗಿದ್ದಾರೆ. ಬಾಜಪೇಯಿ ಅವರನ್ನು "ಬಿಹಾರದ ಮಣ್ಣಿನ ಮಗ" ಎಂದು ತೇಜಸ್ವಿ ಯಾದವ್ ಕರೆದಿದ್ದಾರೆ. ಬಾಜಪೇಯಿ ತಮ್ಮ ಪ್ರತಿಭೆ ಮತ್ತು ಕಠಿಣ ಪರಿಶ್ರಮದಿಂದ ಚಿತ್ರರಂಗದಲ್ಲಿ ಹೆಸರು ಮಾಡುವ ಮೂಲಕ ಬಿಹಾರಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಹೇಳಿದ್ದಾರೆ.
ಲಾಲು ಪ್ರಸಾದ್ ಯಾದವ್ ಆರೋಗ್ಯ ವಿಚಾರಿಸಿದ ಬಾಜಪೇಯಿ
ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಪಾಟ್ನಾ ನಿವಾಸದಲ್ಲಿ ನಡೆದ ಭೇಟಿಯ ಛಾಯಾಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ ಬಾಜಪೇಯಿ ಅವರನ್ನು "ಬಿಹಾರದ ಮಣ್ಣಿನ ಮಗ, ಹಿಂದಿ ಚಿತ್ರರಂಗದ ಖ್ಯಾತ ನಟ ಪದ್ಮಶ್ರೀ ಮನೋಜ್ ಬಾಜಪೇಯಿ ಅವರು ನಿವಾಸಕ್ಕೆ ಆಗಮಿಸಿ ತಂದೆ ಲಾಲು ಪ್ರಸಾದ್ ಯಾದವ್ ಜೀ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು" ಎಂದಿದ್ದಾರೆ.
ಆರ್ಜೆಡಿ ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಸಿಎಂಗೆ ನಟ ಕೈಮುಗಿದು ನಮಸ್ಕರಿಸಿದ್ದಾರೆ. ಚಿತ್ರಗಳಲ್ಲಿ ನಟ ಬಾಜಪೇಯಿ ತಂದೆ-ಮಗನ ಜೊತೆಗೆ ಮಾತನಾಡುತ್ತಿರುವುದನ್ನು ಕಾಣಬಹುದು.
ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ತೆರಳಲಿರುವ ಬಿಹಾರದ ಮಾಜಿ ಸಿಎಂ
ಮೇವು ಹಗರಣ ಪ್ರಕರಣಗಳಲ್ಲಿ ಅಪರಾಧಿಯಯಾಗಿ ಶಿಕ್ಷೆಗೆ ಗುರಿಯಾಗಿರುವ ಲಾಲು ಪ್ರಸಾದ್ ಯಾದವ್ ಅವರು ವಿವಿಧ ಕಾಯಿಲೆಗಳಿಂದಾಗಿ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿರುವ ನಾಯಕನ ಪಾಸ್ಪೋರ್ಟ್ ಬಿಡುಗಡೆ ಮಾಡಲು ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ ಅನುಮತಿ ನೀಡಿದೆ. ಈ ಹಿನ್ನೆಲೆ ಲಾಲು ಪ್ರಸಾದ್ ಚಿಕಿತ್ಸೆಗಾಗಿ ಮುಂದಿನ ವಾರ ಸಿಂಗಾಪುರಕ್ಕೆ ತೆರಳಲಿದ್ದಾರೆ.
ಪ್ರಸಾದ್ ಪರ ವಕೀಲ ಪ್ರಭಾತ್ ಕುಮಾರ್, ''ಚಿಕಿತ್ಸೆಯ ಬಳಿಕ ದೇಶಕ್ಕೆ ಮರಳಿ ಪಾಸ್ಪೋರ್ಟ್ ಅನ್ನು ನ್ಯಾಯಾಲಯಕ್ಕೆ ವಾಪಸ್ ಸಲ್ಲಿಸಲಾಗುವುದು ಎಂದು ಘೋಷಿಸುವ ಅಫಿಡವಿಟ್ ಸಲ್ಲಿಸುವಂತೆ ನಮಗೆ ತಿಳಿಸಲಾಗಿದೆ'' ಎಂದರು. ಸೋಮವಾರ ಅಫಿಡವಿಟ್ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಜಾಮೀನಿನ ಮೇಲೆ ಹೊರಗಿರುವ ಲಾಲು ಪ್ರಸಾದ್
ಲಾಲು ಪ್ರಸಾದ್ ಅವರು ಮೇವು ಹಗರಣದ ಹಲವು ಪ್ರಕರಣಗಳಲ್ಲಿ ದೋಷಿಯಾಗಿದ್ದಾರೆ. ಜೈಲು ಶಿಕ್ಷೆ ಅನುಭವಿಸಿದ ನಂತರ ಅನಾರೋಗ್ಯದ ಕಾರಣ ಜಾಮೀನಿನ ಮೇಲೆ ಹೊರಗಿದ್ದಾರೆ.
ನವದೆಹಲಿಯಲ್ಲಿ ಬಲ ಭುಜದ ಮೂಳೆ ಮುರಿತಕ್ಕೆ ಚಿಕಿತ್ಸೆ ಪಡೆದ ನಂತರ ಕಳೆದ ಕೆಲವು ವಾರಗಳಿಂದ ಪಾಟ್ನಾದಲ್ಲಿದ್ದಾರೆ. ಮುಂದಿನ ವಾರ ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ತೆರಳಲಿದ್ದಾರೆ. ಲಾಲು ಪ್ರಸಾದ್ ಅವರ ವಕೀಲರು ಸಿಬಿಐ ನ್ಯಾಯಾಲಯಕ್ಕೆ ಅವರನ್ನು ಬಿಡುಗಡೆ ಮಾಡುವಂತೆ ಕೋರಿದರು.
ಐದನೇ ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಐದು ವರ್ಷ ಜೈಲು ಶಿಕ್ಷೆ ಮತ್ತು 60 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಜಾರ್ಖಂಡ್ನ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ, ಡೊರಾಂಡಾ ಖಜಾನೆಯಿಂದ 139.35 ಕೋಟಿ ರೂಪಾಯಿ ಅಕ್ರಮ ಹಿಂಪಡೆದ ಪ್ರಕರಣದಲ್ಲಿ ಅವರು ತಪ್ಪಿತಸ್ಥರೆಂದು ಸಾಬೀತು ಪಡಿಸಿದೆ.
ಅಧಿಕಾರದಿಂದ ಹೊರಗಿದ್ದು ಬಿಹಾರವನ್ನು ನಿಯಂತ್ರಿಸುವ ಲಾಲು
ಜನವರಿ 1996 ರಲ್ಲಿ ಪಶುಸಂಗೋಪನಾ ಇಲಾಖೆಯಲ್ಲಿ ಚೈಬಾಸಾ ಉಪ ಆಯುಕ್ತ ಅಮಿತ್ ಖರೆ ಅವರು ನಡೆಸಿದ ದಾಳಿಯ ಸಂದರ್ಭದಲ್ಲಿ ಹಗರಣವು ಪತ್ತೆಯಾಗಿದೆ. ಪ್ರಕರಣದ ತನಿಖೆಗೆ ಹೆಚ್ಚಿನ ಒತ್ತಡದ ನಂತರ, ಮಾರ್ಚ್ 1996 ರಲ್ಲಿ ಪಾಟ್ನಾ ಹೈಕೋರ್ಟ್ ಸಿಬಿಐ ಅನ್ನು ನೇಮಿಸಿತು. ಬಿಹಾರ ಮತ್ತು ಜಾರ್ಖಂಡ್ ಎರಡೂ ಏಕೀಕೃತ ರಾಜ್ಯಗಳಾಗಿದ್ದಾಗ CBI ಈ ಪ್ರಕರಣದಲ್ಲಿ FIR ದಾಖಲಿತ್ತು.
ಜೂನ್ 1997 ರಲ್ಲಿ ಸಿಬಿಐ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಲಾಲು ಪ್ರಸಾದ್ ಯಾದವ್ ಅವರನ್ನು ಮೊದಲ ಬಾರಿಗೆ ಆರೋಪಿ ಎಂದು ಹೆಸರಿಸಲಾಯಿತು.
ಚಾರ್ಜ್ಶೀಟ್ ಮತ್ತು ಹೆಚ್ಚುತ್ತಿರುವ ವಿರೋಧದ ಒತ್ತಡದ ನಂತರ, ಲಾಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಅವರು ತಮ್ಮ ಪತ್ನಿ ರಾಬ್ರಿ ದೇವಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದ್ದರು. ಜುಲೈ 1997 ರಲ್ಲಿ ಬಿಹಾರ ರಾಜಕೀಯವನ್ನು ಮೌನವಾಗಿ ನಿಯಂತ್ರಿಸಿದರು.