ಮಂದಿರ, ಚರ್ಚ್, ಮಸೀದಿಗೆ ಟಿಎಂಸಿ ಬೆಂಬಲ: ಸರ್ವಧರ್ಮ ಮಂತ್ರ ಜಪಿಸಿ ಮೋದಿಗೆ ದೀದಿ ತಿರುಗೇಟು!
ಪಣಜಿ, ಡಿಸೆಂಬರ್ 14: ತೃಣಮೂಲ ಕಾಂಗ್ರೆಸ್ ಪಕ್ಷವು ಮಂದಿರ, ಮಸೀದಿ, ಚರ್ಚ್ ಎಲ್ಲದರ ಪರವಾಗಿ ನಿಲ್ಲುತ್ತದೆ ಎಂದು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಟಿಎಂಸಿ ಸರ್ವ ಧರ್ಮ ಹಾಗೂ ಸರ್ವ-ಸಂಸ್ಕೃತಿ ಪರವಾಗಿದೆ ಎಂದ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಗೋವಾ ವಿಧಾನಸಭೆ ಚುನಾವಣೆಗಾಗಿ ಮತದಾರರ ಮನಸು ಗೆಲ್ಲುವುದಕ್ಕೆ ಟಿಎಂಸಿ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಪಣಜಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. "ಬಿಜೆಪಿ ವಿರುದ್ಧ ನಾವು ಹೋರಾಡಿದರೆ, ನಾವು ಗೆಲ್ಲುವ ಅವಕಾಶವಿದೆ. ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ನಿಮಗಿದೆಯೇ, ಒಂದು ವೇಳೆ ನಿಮ್ಮಲ್ಲಿ ಆ ಭರವಸೆಯಿದ್ದರೆ ಯಾವುದೇ ಕಾರಣಕ್ಕೂ ಒಂದು ಹೆಜ್ಜೆಯನ್ನು ಹಿಂದೆ ಇಡದೇ ಮುನ್ನುಗ್ಗಬೇಕು," ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ನಾವು ಇಲ್ಲಿ ಮತಗಳನ್ನು ಒಡೆಯುವುದಕ್ಕೆ ಬಂದಿಲ್ಲ, ಬದಲಿಗೆ ಎಲ್ಲ ಮತಗಳನ್ನು ಒಗ್ಗೂಡಿಸಿ ಟಿಎಂಸಿ ಒಕ್ಕೂಟವು ಗೆಲುವು ಸಾಧಿಸುವುದಕ್ಕೆ ಬಂದಿದ್ದೇವೆ. ಇದು ಬಿಜೆಪಿಗೆ ಪರ್ಯಾಯವಾಗಿದೆ. ಒಂದು ವೇಳೆ ಯಾರಾದರೂ ಇದನ್ನು ಬೆಂಬಲಿಸಲು ಬಯಸಿದರೆ, ಮುಂದಿನ ನಿರ್ಧಾರವನ್ನು ಅವರೇ ತೆಗೆದುಕೊಳ್ಳಬೇಕು. ನಾನು ಈಗಾಗಲೇ ನಿರ್ಧಾರ ಮಾಡಿದ್ದೇವೆ. ನಾವು ಹೋರಾಡುತ್ತಾ ಮಡಿಯುತ್ತೇವೆಯೇ ಹೊರತು ಮುಂದಿಟ್ಟ ಹೆಜ್ಜೆಯನ್ನು ಹಿಂದೆ ಇಡುವುದಿಲ್ಲ," ಎಂದು ಅವರು ಹೇಳಿದ್ದಾರೆ.

ಕರಾವಳಿ ರಾಜ್ಯದಲ್ಲಿ ಸೋಲು-ಗೆಲುವಿನ ಲೆಕ್ಕ
ಕರಾವಳಿ ರಾಜ್ಯದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದು, ಪೋರ್ಚುಗೀಸರ ಆಡಳಿತದ ಹಿನ್ನೆಲೆಯನ್ನು ಹೊಂದಿರುವ ಗೋವಾದಲ್ಲಿ ಕ್ರಿಸ್ಚಿಯನ್ನರ ಸಂಖ್ಯೆಯೂ ಹೆಚ್ಚಾಗಿದೆ. ಕೆಲವು ವಲಯದಲ್ಲಿ ಮುಸ್ಲಿಂ ಸಮುದಾಯದ ಮತದಾರರು ಸಹ ಇದ್ದಾರೆ. ಕಳೆದ ದಶಕದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಗದ್ದುಗೆ ದಕ್ಕಿರುವುದು ರಾಜಕೀಯ ಲೆಕ್ಕಾಚಾರಗಳಿಗೆ ಸಾಕ್ಷಿಯಾಗಿದೆ.

ಲೋಕಸಭೆ ಚುನಾವಣೆಗಾಗಿ ಟಿಎಂಸಿ ವಿಸ್ತರಣಾವಾದ
2023ರ ಲೋಕಸಭೆ ಚುನಾವಣೆಯನ್ನು ಲಕ್ಷ್ಯದಲ್ಲಿ ಇಟ್ಟುಕೊಂಡು ತೃಣಮೂಲ ಕಾಂಗ್ರೆಸ್ ಪಕ್ಷವು ವಿಸ್ತರಣಾವಾದ ನೀತಿಯನ್ನು ಅನುಸರಿಸುತ್ತಿದೆ. ಆ ಕಾರಣಕ್ಕಾಗಿಯೇ ಕಾಂಗ್ರೆಸ್ ಅನ್ನು ದೂರವಿಟ್ಟಿರುವ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ತಮ್ಮ ಪಕ್ಷವನ್ನು ಬಿಜೆಪಿಗೆ ಪರ್ಯಾಯವಾಗಿ ಬಿಂಬಿಸುವುದಕ್ಕೆ ಹೊರಟಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಪ್ರಬಲ ನೆಲೆಯನ್ನು ಹೊಂದಿರುವ ಟಿಎಂಸಿ, ಗೋವಾದಲ್ಲಿ ಅಸ್ತಿತ್ವವನ್ನು ಸ್ಥಾಪಿಸುವುದಕ್ಕೆ ಶತಪ್ರಯತ್ನ ನಡೆಸುತ್ತಿದೆ. ವಿಧಾನಸಭೆ ಚುನಾವಣೆ ಮೂಲಕ ರಾಜ್ಯದಲ್ಲಿ ತಮ್ಮ ನೆಲೆ ಕಂಡುಕೊಳ್ಳುವುದಕ್ಕೆ ರಣತಂತ್ರ ರೂಪಿಸಲಾಗಿದೆ.

ಮೈತ್ರಿ ಮಂತ್ರದ ಮೂಲಕ ಗೋವಾದಲ್ಲಿ ಅಸ್ತಿತ್ವಕ್ಕೆ ತಂತ್ರ
ಗೋವಾದಲ್ಲಿ ಅಸ್ತಿತ್ವ ಕಂಡುಕೊಳ್ಳುವುದಕ್ಕೆ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮೈತ್ರಿಯ ಮಂತ್ರ ಜಪಿಸುತ್ತಿದ್ದಾರೆ. ಕಳೆದ 2017ರ ಚುನಾವಣೆ ನಂತರ ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ಸಿಗಲು ನೆರವಾಗಿದ್ದ ಸುಧೀನ್ ಧವ್ಲಿಕರ್ ನೇತೃತ್ವದ ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ ಜೊತೆಗೆ ಟಿಎಂಸಿ ಮೈತ್ರಿ ಮಾಡಿಕೊಂಡಿದೆ. ಇದರ ಜೊತೆ ಇನ್ನೂ ಅನೇಕ ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಹಾಗೂ ಸ್ಥಳೀಯ ನಾಯಕರನ್ನು ಸೆಳೆಯುವುದಕ್ಕೆ ಯತ್ನಿಸಲಾಗುತ್ತಿದೆ.

ಕರಾವಳಿ ರಾಜ್ಯದಲ್ಲಿ ಟಿಎಂಸಿ ಪ್ರಚಾರದ ಭರಾಟೆ
ಈ ಹಿಂದೆ ಕಾಂಗ್ರೆಸ್ನಲ್ಲಿದ್ದ ಗೋವಾದ ಮಾಜಿ ಮುಖ್ಯಮಂತ್ರಿ ಲುಜಿನ್ಹೋ ಫಲೈರೊ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಟಿಎಂಸಿ ಮತ್ತಷ್ಟು ಸಕ್ರಿಯವಾಗಿದೆ. ರಾಜ್ಯದಲ್ಲಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ನಡೆಸುತ್ತಿದೆ. ಮಾಜಿ ಟೆನಿಸ್ ತಾರೆ ಲಿಯಾಂಡರ್ ಪೇಸ್ ಕೂಡ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಮುಂದಿನ ರಾಜ್ಯ ಚುನಾವಣೆಯಲ್ಲಿ ಅವರೇ ಪಕ್ಷದ ಮುಖ್ಯಸ್ಥರಂತೆ ಬಿಂಬಿಸಲಾಗುತ್ತದೆ ಎಂಬ ಊಹಾಪೋಹಗಳೂ ಇವೆ. ತೃಣಮೂಲ ಕಾಂಗ್ರೆಸ್ ರಾಜ್ಯದ ವಿಧಾನಸಭೆಯ ಎಲ್ಲಾ 40 ಸ್ಥಾನಗಳಲ್ಲಿ ಸ್ಪರ್ಧಿಸಲು ಯೋಜನೆ ಹಾಕಿಕೊಂಡಿದೆ. ಬಂಗಾಳ ಮತ್ತು ಗೋವಾ ಎರಡೂ ಕರಾವಳಿ ರಾಜ್ಯಗಳಾಗಿದ್ದು, ಮೀನು ಮತ್ತು ಫುಟ್ಬಾಲ್ಗೆ ಸಮಾನ ಒಲವನ್ನು ಹೊಂದಿವೆ ಎಂಬುದನ್ನು ಈಗಾಗಲೇ ಟಿಎಂಸಿ ಕಂಡುಕೊಂಡಿದೆ.












Click it and Unblock the Notifications