ಗೋವಾ: ಟಿಎಂಸಿ ಸೇಡಿನ ರಾಜಕೀಯ, ಕಾಂಗ್ರೆಸ್, ಜಿಎಫ್‌ಪಿ ಟಾರ್ಗೆಟ್!

ಪಣಜಿ, ಜನವರಿ 24; ಗೋವಾ ವಿಧಾನಸಭಾ ಚುನಾವಣಾ ಅಖಾಡಕ್ಕೆ ತಡವಾಗಿ ಧುಮುಕಿರುವ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಘೋಷಣೆಯಾದ 11 ಹೆಸರುಗಳ ಪೈಕಿ ಹೊಸದಾಗಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಲುಜಿನ್ಹೋ ಫೆಲೈರೊ ಅವರ ಹೆಸರು ಕೂಡ ಪ್ರಕಟಗೊಂಡಿದೆ.

ಬೇರೆ ಪಕ್ಷದಲ್ಲಿದ್ದ ಲುಜಿನ್ಹೋ ಫೆಲೈರೊ ರಾಜೀನಾಮೆ ಕೊಟ್ಟು ಒಂದು ಗಂಟೆ ಆಗಿರಲಿಲ್ಲ, ಅಷ್ಟರಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಹೆಸರು ಘೋಷಣೆಯಾಗಿದೆ. ಫೆಬ್ರವರಿ 14ರಂದು ನಡೆಯಲಿರುವ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಟೋರ್ಡಾ ಕ್ಷೇತ್ರದಿಂದ ಗೋವಾ ಫಾರ್ವರ್ಡ್ ಪಾರ್ಟಿಯ (ಜಿಎಫ್ ಪಿ) ನಾಯಕ ವಿಜಯ್ ಸರ್ದೇಸಾಯಿ ವಿರುದ್ಧ ಫೆಲೈರೋ ಸ್ಪರ್ಧಿಸುತ್ತಿದ್ದಾರೆ.

ಜಿಎಫ್‌ಪಿ‌ ಪಕ್ಷವು 2017ರ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಗೆದ್ದಿತ್ತು. ವಿಲೀನ ಅಥವಾ ಚುನಾವಣಾ ಪೂರ್ವ ಮೈತ್ರಿಗಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೋವಾದಲ್ಲಿ ಮೊದಲು ಸಂಪರ್ಕಿಸಿದ ಪ್ರಾದೇಶಿಕ ಪಕ್ಷ ಜಿಎಫ್‌ಪಿ ಆಗಿತ್ತು. ಆದರೆ ಮೈತ್ರಿ ಆಟ ನಡೆಯಲಿಲ್ಲ. ವಿಜಯ್ ಸರ್ದೇಸಾಯಿ ಈ ಬಾರಿ ಕಾಂಗ್ರೆಸ್ ಜೊತೆ ಕೈ ಜೋಡಿಸಿ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಕಾಂಗ್ರೆಸ್ ಈಗಾಗಲೇ ಮೂರು ಕ್ಷೇತ್ರಗಳನ್ನು ಜಿಎಫ್‌ಪಿಗೆ ಬಿಟ್ಟು ಕೊಟ್ಟಿದೆ. 40 ಕ್ಷೇತ್ರಗಳ ಪೈಕಿ 37 ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಕಣಕ್ಕಿಳಿಯುತ್ತಿದೆ.

ಗೋವಾದಲ್ಲಿ 40 ವಿಧಾನಸಭಾ ಕ್ಷೇತ್ರಗಳಿದ್ದರೂ ಪ್ರತಿ ಕ್ಷೇತ್ರದಲ್ಲೂ 30 ಸಾವಿರಕ್ಕಿಂತ ಹೆಚ್ಚು ಮತದಾರರು ಇಲ್ಲ. ಹಾಗಾಗಿ ಬೇರೆ ಪಕ್ಷದವರು ಒಂದು ಸಾವಿರ ಮತ ಪಡೆದರೂ ಇನ್ನೊಬ್ಬ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಮಾರ್ಚ್ 10ರಂದು ಗೋವಾ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.

ಗೋವಾ ಚುನಾವಣೆ ಟಿಎಂಸಿ ತಂತ್ರ

ಗೋವಾ ಚುನಾವಣೆ ಟಿಎಂಸಿ ತಂತ್ರ

ಲುಜಿನ್ಹೋ ಫೆಲೈರೊ ಸಂಸದರಾದ ಮೇಲೆ ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ ಎಂಬ ವಿಚಾರವನ್ನು ಸ್ಥಳೀಯ ಪತ್ರಕರ್ತರ ಬಳಿ ಹಂಚಿಕೊಂಡಿದ್ದರು. ಆದರೆ ಇದೀಗ ಟಿಎಂಸಿಯಿಂದ ಸ್ಪರ್ಧಿಸುತ್ತಿದ್ದಾರೆ ಎಂಬ ಸಂಗತಿ ತಿಳಿಯುತ್ತಿದ್ದಂತೆ ಪತ್ರಕರ್ತರ ಯಾವ ಕರೆಗಳನ್ನು ಅವರು ಸ್ವೀಕರಿಸುತ್ತಿಲ್ಲ. ಪಕ್ಷದ ಗೋವಾ ಚುನಾವಣಾ ಉಸ್ತುವಾರಿ ಮಹುವಾ ಮೊಯಿತ್ರಾ ಕೂಡ ಇದಕ್ಕೆ ಪ್ರತಿಕ್ರಿಯಿಸಿಲ್ಲ.

ಇದರಿಂದ ಅವರ ಅಜೆಂಡಾ ಏನು? ಎಂಬುದು ಎಲ್ಲರಿಗೂ ಅರ್ಥ ಆಗುತ್ತಿದೆ ಎಂಬ ಅಂಶವನ್ನು ವಿಜಯ್ ಸರ್ದೇಸಾಯಿ ಜನರ ಮುಂದೆ ಇಡುತ್ತಿದ್ದಾರೆ. ಇದು ಮುಂದೆ ವಿಜಯ್ ಸರ್ದೇಸಾಯಿಗೆ ಸಹಕಾರಿ ಆಗುವ ಸಾಧ್ಯತೆಯಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಟಿಎಂಸಿ ಗೋವಾದಲ್ಲಿ ಸ್ಪರ್ಧೆ ಮಾಡುವ ಪ್ರಮುಖ ಉದ್ದೇಶ ಬಿಜೆಪಿಯೇತರ ಮತಗಳನ್ನು ವಿಭಜನೆ ಮಾಡುವುದೇ ಆಗಿದೆ ಎಂಬ ವಿಚಾರವೂ ಚರ್ಚೆಯ ವಸ್ತು.

ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಕೆ?

ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಕೆ?

ಲುಜಿನ್ಹೋ ಫೆಲೈರೊ ಹೆಸರು ಘೋಷಣೆಯಾದ ಕೆಲವೇ ಹೊತ್ತಲ್ಲಿ ಟಿಎಂಸಿಯ ಗೋವಾ ಚುನಾವಣೆ ಸಲಹೆಗಾರ ಪ್ರಶಾಂತ್ ಕಿಶೋರ್ ವಿಜಯ್ ಸರ್ದೇಸಾಯಿಗೆ ಕರೆ ಮಾಡುತ್ತಾರೆ. ಅಷ್ಟೇ ಅಲ್ಲದೇ ಎರಡು ಮೂರು ಬಾರಿ ಅವರ ಮನೆಗೂ ಭೇಟಿ ನೀಡಿ ಬಂದಿದ್ದಾರೆ. ಮಾತುಕತೆ ವೇಳೆ ಪ್ರಶಾಂತ್ ಕಿಶೋರ್, ಇಷ್ಟೆಲ್ಲಾ ನಡೆದ ಮೇಲೆ ಇನ್ನೂ ನೀವು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಕೆ? ಎಂದು ಪ್ರಶ್ನಿಸಿದ್ದಾರೆ. ದುಡ್ಡುಕೊಟ್ಟು ಕ್ಯಾಂಪೇನ್ ಮಾಡುವುದು, ಪೋಸ್ಟರ್ ಅಂಟಿಸುವುದು ಹಾಗೂ ಮಾಧ್ಯಮ ಪ್ರಚಾರ ಇಷ್ಟು ಮಾಡಿಕೊಂಡು ಗೋವಾದಲ್ಲಿ ಕಾಂಗ್ರೆಸ್ ಜೊತೆಗೂಡಿ ಚುನಾವಣೆ ಗೆಲ್ಲಲು ಆಗುವುದಿಲ್ಲ ಎಂದು ಹೇಳಿದ್ದಾರೆ.

ಪ್ರಶಾಂತ್ ಕಿಶೋರ್ ಹೇಳಿಕೆ

ಪ್ರಶಾಂತ್ ಕಿಶೋರ್ ಹೇಳಿಕೆ

"ಗೋವಾದಲ್ಲಿ ಕೇವಲ ಗೋವಾ ಮತದಾರರು ಮಾತ್ರ ಇಲ್ಲ. ಬೇರೆ ಬೇರೆ ಊರುಗಳಿಂದ ಬಂದು ಇಲ್ಲಿ ನೆಲೆ ನಿಂತವರು ಇದ್ದಾರೆ. ಹೀಗಾಗಿ ಬರೀ ಗೋವಾ ಜನರಿಗೆ ದುಡ್ಡು ಕೊಟ್ಟು ಒಲಿಸಿಕೊಳ್ಳುವುದರಿಂದ ಚುನಾವಣೆ ಗೆಲ್ಲಲು ಆಗುವುದಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಆಮ್ ಆದ್ಮಿ ಪಾರ್ಟಿ. 2017ರಲ್ಲಿ 40 ಕ್ಷೇತ್ರಗಳಲ್ಲಿ ಆಪ್ 39 ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಒಂದೇ ಒಂದು ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಇದೇ ರೀತಿ ಸರ್ದೇಸಾಯಿ ಅವರಿಗೂ ಆಗುತ್ತದೆ" ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಗೋವಾ ಚುನಾವಣೆ ಚಿತ್ರಣ

ಗೋವಾ ಚುನಾವಣೆ ಚಿತ್ರಣ

ಗೋವಾ ಚುನಾವಣೆಯಲ್ಲಿ ಕೆಲವು ಭರವಸೆಯ ಅಭ್ಯರ್ಥಿಗಳು ಇದ್ದರು. ಇವರಲ್ಲಿ ಮಾಜಿ ಕಾಂಗ್ರೆಸ್ ಶಾಸಕ ರೆಜಿನಾಲ್ಡೊ ಲೌರೆಂಕೊ, ಮಾಜಿ ಎಂಜಿಪಿ ಸದಸ್ಯ ಲಾವೂ ಮಾಮ್ಲೆದಾರ್, ಮಾಜಿ ಪಕ್ಷೇತರ ಶಾಸಕ ಪ್ರಸಾದ್ ಗಾಂವ್ಕರ್ ಟಿಎಂಸಿ ಪಕ್ಷಕ್ಕೆ ಸೇರ್ಪಡೆಗೊಂಡು ಇದೀಗ ಅಲ್ಲಿಂದಲೂ ಹೊರ ಬಂದಿದ್ದಾರೆ. ಇದಾಗಿ ತಿಂಗಳೊಳಗೆ ಲೊರೆಂಕೊ ಕಾಂಗ್ರೆಸ್ ಪಕ್ಷ ಸೇರಲು ಬಯಸಿದರೂ ಅದು ಸಾಧ್ಯವಾಗಲಿಲ್ಲ. ಅಲ್ಲೂ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಈಗ ಅವರು ಕರ್ಟೋರಿಮ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಟಿಎಂಸಿ ಗೋವಾದ ಎಲ್ಲಾ ಕಡೆ ಆಕ್ರಮಣಕಾರಿಯಾಗಿ ಪ್ರಚಾರ ನಡೆಸುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಖರ್ಚನ್ನು ಮಾಡುತ್ತಿದೆ. ಇದನ್ನು ಬಿಜೆಪಿ ಖಂಡಿಸಿದ್ದು, ಹಣದ ಹೊಳೆ‌ ಹರಿಸುವುದು ಟಿಎಂಸಿ ಅಜೆಂಡಾ ಆಗಿದೆ. ಗೆಲುವಿಗೆ ಇದು ರಾಜತಂತ್ರ ಎಂದು ಭಾವಿಸಿದೆ ಎಂದು ಆರೋಪಿಸಿದೆ. ಬಿಜೆಪಿ ಮುಖಂಡ ದೇವೇಂದ್ರ ಫಡ್ನವಿಸ್ ಜನವರಿ 20ರಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, "ಟಿಎಂಸಿ ನಾಯಕರು ಹಣ ಬಲದಿಂದ ಗೆಲ್ಲಲು ಹೊರಟಿದ್ದಾರೆ. ಸೂಟ್‌ಕೇಸ್‌ಗಳೊಂದಿಗೆ ಗೋವಾಗೆ ಬಂದರೆ ಗೋವಾ ನಾಯಕರನ್ನು ಖರೀದಿ ಮಾಡಬಹುದು ಎಂದು ಭಾವಿಸಿದ್ದಾರೆ. ಕೇವಲ ದುಡ್ಡಿನಿಂದ ಸ್ಥಳೀಯ ನಾಯಕರು ಹಾಗೂ ಜನರ ವಿಶ್ವಾಸವನ್ನು ಪಡೆಯಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

ಅತಂತ್ರ ಫಲಿತಾಂಶ ಬಂದರೆ?

ಅತಂತ್ರ ಫಲಿತಾಂಶ ಬಂದರೆ?

ಯಾವುದೇ ಪಕ್ಷಕ್ಕೆ ಸ್ಪಷ್ಟವಾದ ಬಹುಮತ ಸಿಗದಿದ್ದರೆ ಕಳೆದ ಬಾರಿ ಆಡಳಿತಾರೂಢ ಬಿಜೆಪಿ ಸರ್ಕಾರದ ಮಿತ್ರ ಪಕ್ಷವಾದ ಮಹಾರಾಷ್ಟ್ರವಾದಿ ಗೋಮಾಂತಕ್‌ ಪಕ್ಷ (ಎಂಜಿಪಿ) ಪ್ರಧಾನ ಪಾತ್ರ ವಹಿಸುವ ಸಾಧ್ಯತೆ ಇದೆ. ಇತ್ತೀಚಿಗೆ ಪಿಟಿಐಗೆ ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ. ಚಿದಂಬರಂ ನೀಡಿದ ಸಂದರ್ಶನದಲ್ಲಿ, "ಆಪ್ ಆಗಲಿ, ಟಿಎಂಸಿ ಆಗಲಿ ಗೋವಾದಲ್ಲಿ ಭದ್ರ ಬುನಾದಿ ಹೊಂದಿಲ್ಲ. ಕಾಂಗ್ರೆಸ್‌ನ ಸಣ್ಣ ನ್ಯೂನತೆಗಳನ್ನೇ ಮುಂದಿಟ್ಟುಕೊಂಡು ಗೋವಾ ಚುನಾವಣೆ ಗೆಲ್ಲಲು ಹೊರಟಿವೆ" ಎಂದು ತಿಳಿಸಿದ್ದಾರೆ.

ಟಿಎಂಸಿ ಪಕ್ಷ ಎಎಪಿಗೆ ಸಡ್ಡು ಹೊಡೆಯುವ ಜೊತೆಗೆ ಬಿಜೆಪಿಯನ್ನು ದುರ್ಬಲಗೊಳಿಸಲು ಹಾಗೂ ಮತ ವಿಭಜನೆ ಮಾಡಲು ಎಲ್ಲಾ 40 ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಿಸಿದೆ. ಇದರಿಂದ ಯಾವ ಪಕ್ಷಕ್ಕೂ ಬಹುಮತ ಸಿಗದಂತೆ ಮಾಡುವುದು ಟಿಎಂಸಿ ಲೆಕ್ಕಾಚಾರ ಆಗಿರಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+