Breaking; ಗೋವಾ ಚುನಾವಣೆ; ಸಿಎಂ ಅಭ್ಯರ್ಥಿ ಘೋಷಿಸಿದ ಎಎಪಿ
ಪಣಜಿ, ಜನವರಿ 19; ಗೋವಾ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿದೆ. ಫೆಬ್ರವರಿ 14ರಂದು ಚುನಾವಣೆ ನಡೆಯಲಿದ್ದು, ಮೊದಲ ಬಾರಿಗೆ ಎಎಪಿ ಪಕ್ಷ ಗೋವಾ ಚುನಾವಣಾ ಕಣಕ್ಕಿಳಿಯುತ್ತಿದೆ.
ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬುಧವಾರ ಗೋವಾ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿದರು. ವಕೀಲರಾಗಿರುವ ಅಮಿತ್ ಪಾಲೇಕರ್ ಪಕ್ಷದ ಸಿಎಂ ಅಭ್ಯರ್ಥಿ.
5 ರಾಜ್ಯಗಳ ವಿಧಾನಸಭೆ ಚುನಾವಣೆಗೆ ಎಎಪಿ ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದೆ. ಮಂಗಳವಾರ ಪಂಜಾಬ್ ರಾಜ್ಯದ ಸಿಎಂ ಅಭ್ಯರ್ಥಿ ಘೋಷಣೆ ಮಾಡಲಾಗಿತ್ತು.

ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿದ ಬಳಿಕ ಮಾತನಾಡಿದ ಅರವಿಂದ ಕೇಜ್ರಿವಾಲ್, "ಪಕ್ಷ ಗೋವಾ ರಾಜ್ಯದ ಎಲ್ಲಾ 40 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಮಾಡಲಿದೆ" ಎಂದರು.
"ಅಮಿತ್ ಪಾಲೇಕರ್ ವಕೀಲರಾಗಿದ್ದಾರೆ. ಅವರು ಭಂಡಾರಿ ಸಮುದಾಯಕ್ಕೆ ಸೇರಿದವರು" ಎಂದು ಅರವಿಂದ ಕೇಜ್ರಿವಾಲ್ ಹೇಳಿದರು.
ಆಮ್ ಆದ್ಮಿ ಪಕ್ಷ ಮೊದಲ ಬಾರಿಗೆ ಗೋವಾ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ. ಈಗಾಗಲೇ ಪಕ್ಷ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಯಾವುದೇ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳದೇ ರಾಜ್ಯದ 40 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ.
ಶನಿವಾರ ಮತ್ತು ಭಾನುವಾರ ಅರವಿಂದ ಕೇಜ್ರಿವಾಲ್ ಗೋವಾ ರಾಜ್ಯದ ಪ್ರವಾಸ ಕೈಗೊಂಡಿದ್ದರು. ಅಭ್ಯರ್ಥಿಗಳು ಘೋಷಣೆಯಾದ ಕ್ಷೇತ್ರದಲ್ಲಿ ಮನೆ-ಮನೆ ಪ್ರಚಾರವನ್ನು ನಡೆಸಿದ್ದರು. ಪತ್ರಿಕಾಗೋಷ್ಠಿ ನಡೆಸಿ ಗೋವಾದ ಅಭಿವೃದ್ಧಿಗಾಗಿ 13 ಅಂಶಗಳ ಕಾರ್ಯಕ್ರಮ ಘೋಷಣೆ ಮಾಡಿದ್ದರು.
ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷಗಳು ಸಹ ಇನ್ನೂ ಸಹ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಆದರೆ ಎಎಪಿ ಎಲ್ಲಾ ಪಕ್ಷಗಳಿಗಿಂತ ಮೊದಲು ಸಿಎಂ ಅಭ್ಯರ್ಥಿ ಘೋಷಣೆ ಮಾಡಿದ ಅಚ್ಚರಿ ಮೂಡಿಸಿದೆ.
ಪಣಜಿಯಲ್ಲಿ ಮಾತನಾಡಿದ ಅರವಿಂದ ಕೇಜ್ರಿವಾಲ್, "ಗೋವಾ ಮುಂಬರುವ ಚುನಾವಣೆಗಾಗಿ ಕಾಯುತ್ತಿದೆ. ರಾಜ್ಯದ ಜನರ ಮುಂದೆ ಆಮ್ ಆದ್ಮಿ ಪಕ್ಷ ಹೊಸ ಭರವಸೆಯಾಗಿದೆ. ಈ ಹಿಂದೆ ಕಾಂಗ್ರೆಸ್, ಬಿಜೆಪಿ ಬಿಟ್ಟು ಜನರಿಗೆ ಬೇರೆ ಆಯ್ಕೆ ಇರಲಿಲ್ಲ. ಜನರು ಬದಲಾವಣೆ ಬಯಸಿದ್ದಾರೆ" ಎಂದು ಹೇಳಿದ್ದರು.
ಯುವಕರಿಗೆ ಉದ್ಯೋಗ ನೀಡುವುದು, ಉದ್ಯೋಗ ಸಿಗದ ಯುವಕರಿಗೆ ಮಾಸಿಕ 3 ಸಾವಿರ ರೂ. ನೀಡುವುದು. ಎಎಪಿ ಅಧಿಕಾರಕ್ಕೆ ಬಂದ 6 ತಿಂಗಳಿನಲ್ಲಿ ಗಣಿಗಾರಿಕೆಗೆ ಭೂಮಿ ಹಂಚಿಕೆ, 18 ವರ್ಷ ಮೇಲ್ಪಟ್ಟ ಪ್ರತಿ ಮಹಿಳೆಗೆ ಮಾಸಿಕ 100 ರೂ. ನೀಡಿದೆ. 24*7 ವಿದ್ಯುತ್, ನೀರು ನೀಡುವ ಘೋಷಣೆಗಳನ್ನು ಮಾಡಿದ್ದರು.
ಎಎಪಿ ಜೊತೆಗೆ ಟಿಎಂಸಿ ಸಹ ಇದೇ ಮೊದಲ ಬಾರಿಗೆ ಗೋವಾ ಚುನಾವಣಾ ಕಣಕ್ಕೆ ಧುಮುಕುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಮತಗಳ ಪೈಕಿ ಯಾರ ಮತಗಳನ್ನು ಪಕ್ಷಗಳು ಸೆಳೆಯಲಿವೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಗೋವಾ ಚುನಾವಣೆ ಕುರಿತು Republic P-MARQ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟವಾಗಿದೆ. ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರುವುದಿಲ್ಲ ಎಂದು ಸಮೀಕ್ಷೆ ಹೇಳಿದ್ದು, ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಅಂದಾಜಿಸಿದೆ.
ಈ ಬಾರಿಯ ಗೋವಾ ಚುನಾವಣೆಯಲ್ಲಿ ಎಎಪಿ ಶೇ 17.4ರಷ್ಟು ಮತಗಳನ್ನು ಪಡೆಯಲಿದ್ದು, 4-8 ಸ್ಥಾನಗಳಲ್ಲಿ ಜಯಗಳಿಸಬಹುದು. ಟಿಎಂಸಿ ಮೈತ್ರಿಕೂಟ ಶೇ 12.2ರಷ್ಟು ಮತಗಳನ್ನು ಪಡೆಯಲಿದ್ದು,1-5 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆ ವರದಿ ಹೇಳಿದೆ.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಎಎಪಿಗೆ ತಿರುಗೇಟು ನೀಡಿದ್ದಾರೆ, "ದೆಹಲಿ ಮುಖ್ಯಮಂತ್ರಿಗಳು ಜನರ ಹಣವನ್ನು ತಮ್ಮ ಜಾಹೀರಾತಿಗಾಗಿ ಉಪಯೋಗ ಮಾಡುತ್ತಿದ್ದಾರೆ. ದೆಹಲಿಯ ಜನರ ತೆರಿಗೆ ಹಣ ಗೋವಾ ಚುನಾವಣೆ ಪ್ರಚಾರಕ್ಕೆ ಬಳಕೆ ಮಾಡುತ್ತಿದ್ದಾರೆ. ಅವರು ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವುದಿಲ್ಲ" ಎಂದು ಟೀಕಿಸಿದ್ದಾರೆ.












Click it and Unblock the Notifications