ಉತ್ತರ ಪ್ರದೇಶ ಚುನಾವಣೆ: ಪಶ್ಚಿಮ ಯುಪಿ ಜನರು, ರೈತರ ಮೇಲೆ ಮೋದಿ ಚಿತ್ತ
ನೋಯ್ಡಾ, ನವೆಂಬರ್ 25: ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯು ಇನ್ನು ಕೆಲವೇ ತಿಂಗಳಿನಲ್ಲಿ ನಡೆಯಲಿದೆ. ಈ ನಡುವೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ರೈತರ ಮೇಲೆ ಚಿತ್ತವನ್ನು ನೆಟ್ಟಿದ್ದಾರೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಮತದಾರರು ಹಾಗೂ ರೈತರ ಮೇಲೆ ಅಧಿಕ ಗುರಿ ಹೊಂದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರೈತರನ್ನು ಉದ್ಧೇಶಿಸಿ ಮಾತನಾಡಿದ್ದಾರೆ.
ಗೌತಮ್ ಬುದ್ಧ ನಗರದಲ್ಲಿ ಜೇವಾರ್ ಬಳಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡಿ ಬಳಿಕ ಪಶ್ಚಿಮ ಉತ್ತರ ಪ್ರದೇಶದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ, ಈ ವಿಮಾನ ನಿಲ್ದಾಣದಿಂದಾಗಿ ರೈತರಿಗೆ ಆಗುವ ಪ್ರಯೋಜನಗಳ ಬಗ್ಗೆ ಮಾತನಾಡಿದ್ದಾರೆ. ಹಾಗೆಯೇ ಆ ಪ್ರದೇಶಲ್ಲಿ ನಿರ್ಮಾಣ ಮಾಡಲಾಗುತ್ತಿರುವ ರಸ್ತೆಗಳು ಹಾಗೂ ಮೂಲ ಸೌಕರ್ಯ ಯೋಜನೆಗಳಿಂದ ರೈತರಿಗೆ ಆಗುವ ಪ್ರಯೋಜನಗಳ ಕುರಿತಾಗಿಯೂ ವಿವರಿಸಿದ್ದಾರೆ.
ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶೇಷತೆಗಳೇನು?
"ಈ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡುವ ಸಂದರ್ಬದಲ್ಲಿ ಸಾವಿರಾರು ಮಂದಿಗೆ ಉದ್ಯೋಗ ಸೃಷ್ಟಿ ಆಗಲಿದೆ. ನಿರ್ಮಾಣ ಆದ ಬಳಿಕವೂ ಸಾವಿರಾರು ಮಂದಿಗೆ ಉದ್ಯೋಗ ಸೃಷ್ಟಿ ಆಗಲಿದೆ. ಪಶ್ಚಿಮ ಉತ್ತರ ಪ್ರದೇಶದ ಜನರಿಗೆ ಈ ವಿಮಾನ ನಿಲ್ದಾಣದಿಂದಾಗಿ ಹೊಸ ಉದ್ಯೋಗವು ದೊರೆಯಲಿದೆ," ಎಂದು ಕೂಡಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ವಿಮಾನ ನಿಲ್ದಾಣವಾದರೆ ರೈತರಿಗೆ ಹೇಗೆ ಪ್ರಯೋಜನ?
ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಪ್ರಕಾರ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ರೈತರಿಗೆ ಸಹಾಯವನ್ನು ಮಾಡಲಿದೆ. "ಈ ಪ್ರದೇಶದ ರೈತರು ತರಕಾರಿ, ಹಣ್ಣು ಹಾಗೂ ತಾವು ಬೆಳೆದ ಉತ್ಪನ್ನವನ್ನು ನೇರವಾಗಿ ವಿಶ್ವಕ್ಕೆ ರಫ್ತು ಮಾಡಬಹುದಾಗಿದೆ," ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು. ಈ ಪ್ರದೇಶವು ಎಕರೆಗಟ್ಟಲೆ ಹಳ್ಳಿಗಳು, ಸಣ್ಣ ಪಟ್ಟಣಗಳು, ಹೊಲಗಳು ಇರುವ ಪ್ರದೇಶವಾಗಿದೆ.
"ಅಲಿಗಢ, ಮಥುರಾ, ಮೀರತ್, ಆಗ್ರಾ, ಬಿಜ್ನೋರ್, ಮೊರಾದಾಬಾದ್ ಮತ್ತು ಬರೇಲಿಯಲ್ಲಿ ಹಲವಾರು ಕಾರ್ಖಾನೆಗಳು ಇದೆ. ಆದರೆ ಪಶ್ಚಿಮ ಉತ್ತರ ಪ್ರದೇಶದಲ್ಲಿ ಪ್ರಮುಖವಾಗಿ ಕೃಷಿ ವಿಭಾಗವು ಇದೆ. ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗುವ ಕಾರಣದಿಂದಾಗಿ ಇಲ್ಲಿಯ ಶಕ್ತಿಯೂ ಕೂಡಾ ಅಧಿಕ ಆಗಲಿದೆ," ಎಂದು ಉಲ್ಲೇಖ ಮಾಡಿದ್ದಾರೆ.
ಮಾತು ಕೊಟ್ಟ ಸರ್ಕಾರ ಮಂಗಮಾಯ: ಜೇವರ್ ಏರ್ಪೋರ್ಟ್ಗೆ ಭೂಮಿ ಕೊಟ್ಟವರಿಗೆ ನೆಲೆಯಿಲ್ಲ!
ಇದಕ್ಕೂ ಮುನ್ನ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, "ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ನಿರ್ಮಾಣ ಮಾಡಿದ ಬಳಿಕ ಸುಮಾರು 35,000 ಕೋಟಿ ಹೂಡಿಕೆ ಆಗುವ ಹಾಗೂ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗ ಸೃಷ್ಟಿ ಆಗುವ ನಿರೀಕ್ಷೆ ಇದೆ," ಎಂದು ತಿಳಿಸಿದರು.
ಈ ಹಿಂದಿನ ಸರ್ಕಾರಗಳ ವಿರುದ್ಧ ಪ್ರಧಾನಿ ವಾಗ್ದಾಳಿ
ಇನ್ನು ಈ ಸಂದರ್ಭದಲ್ಲೇ ಈ ಹಿಂದಿನ ಸರ್ಕಾಗಳ ವಿರುದ್ಧ ವಾಗ್ಧಾಳಿ ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ಈ ಹಿಂದಿನ ಸರ್ಕಾರಗಳು ಪಶ್ಚಿಮ ಉತ್ತರ ಪ್ರದೇಶದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳನ್ನು ಮಾಡಿಲ್ಲ. ಈ ಹಿಂದಿನ ಸರ್ಕಾರವು ಎಲ್ಲಾ ವಿಭಾಗವನ್ನು ನಿರ್ಲಕ್ಷ್ಯ ಮಾಡಿದೆ," ಎಂದು ಆರೋಪ ಮಾಡಿದ್ದಾರೆ. "ಪ್ರಸ್ತುತ ಪಶ್ಚಿಮ ಯುಪಿಯಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳ ಯೋಜನೆಗಳು ನಡೆಯುತ್ತಿದೆ. ಕ್ಷಿಪ್ರ ರೈಲು ಕಾರಿಡಾರ್ಗಳು, ಎಕ್ಸ್ಪ್ರೆಸ್ವೇಗಳು, ಮೆಟ್ರೋಗಳು, ಪೂರ್ವ ಮತ್ತು ಪಶ್ಚಿಮ ಸಮುದ್ರಗಳಿಗೆ ಸಂಪರ್ಕ ಕಲ್ಪಿಸುವ ಸರಕು ಸಾಗಣೆ ಕಾರಿಡಾರ್ಗಳು ನಿರ್ಮಾಣ ಆಗುತ್ತಿದೆ. ಇದು ಉತ್ತರ ಪ್ರದೇಶ ಆಧುನಿಕತೆಯ ಹೊಸ ಗುರುತು ಆಗಲಿದೆ," ಎಂದು ಹೇಳಿಕೊಂಡಿದ್ದಾರೆ.
ಕಳೆದ ಒಂದು ವರ್ಷದಿಂದ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧ ಮಾಡಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಕೃಷಿ ಕಾಯ್ದೆಯನ್ನು ಹಿಂಪಡೆಯುವುದಾಗಿ ಘೋಷಣೆ ಮಾಡಿದ್ದಾರೆ. ಮುಂದಿನ ವರ್ಷ ಚುನಾವಣೆ ನಡೆಯಲಿರುವ ಹಿನ್ನೆಲೆಯಿಂದಾಗಿ ಕೇಂದ್ರ ಸರ್ಕಾರ ಈಗ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದೆ.
(ಒನ್ಇಂಡಿಯಾ ಸುದ್ದಿ)