ಮೌನ ಮುರಿದ ಸೋನಿಯಾ, ನಟ್ವರ್ ಗೆ ತಿರುಗೇಟು
ನವದೆಹಲಿ, ಜು. 31: 'ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮನಸ್ಸು ಮಾಡಿದಿದ್ದರೆ ಪ್ರಧಾನಿಯಾಗಬಹುದಿತ್ತು. ಆದರೆ, ಅದಕ್ಕೆ ರಾಹುಲ್ ಗಾಂಧಿ ವಿರೋಧಿಸಿದ್ದರು' ಎಂದು ಮಾಜಿ ಕೇಂದ್ರ ಸಚಿವ ನಟ್ವರ್ ಸಿಂಗ್ ನೀಡಿದ ಹೇಳಿಕೆಗೆ ಸೋನಿಯಾ ಗಾಂಧಿ ಗುರುವಾರ ತಿರುಗೇಟು ನೀಡಿದ್ದಾರೆ.
ಮಾಜಿ ಕೇಂದ್ರ ಸಚಿವ ನಟ್ವರ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಎಐಸಿಐ ಅಧ್ಯಕ್ಷೆ ಸೋನಿಯಾ ಗಾಂಧಿ ಶೀಘ್ರದಲ್ಲೇ ಪುಸ್ತಕವನ್ನು ಪ್ರಕಟಿಸಿ ಅದರಲ್ಲಿ ಎಲ್ಲಾ ಸತ್ಯವನ್ನು ಹೊರಹಾಕುವುದಾಗಿ ಹೇಳಿದ್ದಾರೆ.
'ನಾನು ನನ್ನ ಸ್ವಂತ ಕೃತಿ ರಚಿಸುತ್ತೇನೆ. ಆಗ ಎಲ್ಲರಿಗೂ ಸತ್ಯ ಏನೆಂಬುದು ತಿಳಿಯಲಿದೆ. ನಾನು ಈ ಬಗ್ಗೆ ಗಂಭೀರ ನಿರ್ಧಾರ ಕೈಗೊಂಡಿದ್ದೇನೆ. ಈ ರೀತಿ ಪರಿಸ್ಥಿತಿ ಇದೇ ಮೊದಲಲ್ಲ, ಈ ರೀತಿ ದಾಳಿಗಳು ಹೊಸದೇನಲ್ಲ ನಾನು ಎಲ್ಲಕ್ಕೂ ಸಿದ್ಧವಾಗಿದ್ದೇನೆ. ನನ್ನ ಪತಿ ಹಾಗೂ ಅತ್ತೆ ಹತ್ಯೆಯಾಗಿದ್ದನ್ನು ನೋಡಿದ್ದೇನೆ' ಎಂದು ಎನ್ಡಿಟಿವಿ ಜೊತೆ ಮಾತನಾಡುತ್ತಾ ಸೋನಿಯಾ ಹೇಳಿದರು.

ಅಜ್ಜಿ ಇಂದಿರಾ ಗಾಂಧಿ ಮತ್ತು ಅಪ್ಪ ರಾಜೀವ್ ಗಾಂಧಿಯನ್ನ ಕೊಂದಂತೆ ಅಮ್ಮನನ್ನೂ ಹತ್ಯೆ ಮಾಡಿಬಿಡುತ್ತಾರೆ ಎಂಬ ಭಯ ರಾಹುಲ್ ಗಾಂಧಿಗೆ ಕಾಡುತ್ತಿತ್ತು. ಹೀಗಾಗಿ, ಸೋನಿಯಾ ಗಾಂಧಿ ಪ್ರಧಾನಿಯಾಗುವುದು ಬೇಡ ಎಂದು ಮಗ ರಾಹುಲ್ ಗಾಂಧಿ ಹಠ ಹಿಡಿದು ಕೂತಿದ್ದರಂತೆ. ಹೀಗಾಗಿ, ಸೋನಿಯಾ ಗಾಂಧಿ ಕೊನೇ ಕ್ಷಣದಲ್ಲಿ ಪ್ರಧಾನಿ ಪಟ್ಟದಿಂದ ಹಿಂದೆ ಸರಿಯಬೇಕಾಯಿತು ಎಂದು ಮಾಜಿ ಕೇಂದ್ರ ಸಚಿವ ಕೆ.ನಟ್ವರ್ ಸಿಂಗ್ ಹೇಳಿದ್ದರು.['ಇಂದಿರಾ ಗಾಂಧಿಗೆ ಮಾರಕ ಕ್ಯಾನ್ಸರ್ ಇತ್ತು']
ನಟ್ವರ್ ಸಿಂಗ್ ಅವರ "One Life is Not Enough: An Autobiography" ಪುಸ್ತಕ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ನಟ್ವರ್ ಸಿಂಗ್ ತಮ್ಮ ಹೊಸ ಆತ್ಮಕಥನದಲ್ಲಿ ಈ ಘಟನೆಯನ್ನ ಮೆಲುಕು ಹಾಕಿದ್ದಾರೆ. 2004ರ ಮೇ 18ರಂದು ನೆಹರೂ ಕುಟುಂಬದ ಆಪ್ತ ಸುಮನ್ ದುಬೇ, ನಟ್ವರ್ ಸಿಂಗ್, ಮನಮೋಹನ್ ಸಿಂಗ್ ಮತ್ತು ಪ್ರಿಯಾಂಕಾ ಗಾಂಧಿ ಒಟ್ಟಿಗೆ ಸಭೆ ನಡೆಸುವಾಗ ಈ ವಿಷಯ ಪ್ರಸ್ತಾಪವಾಗಿತ್ತಂತೆ. ರಾಹುಲ್ ಗಾಂಧಿ ಹಠ ಮಾಡುತ್ತಿರುವ ವಿಷಯವನ್ನ ಪ್ರಿಯಾಂಕಾ ಗಾಂಧಿಯೇ ತಿಳಿಸಿದರು ಎಂದು ನಟ್ವರ್ ಸಿಂಗ್ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. [ರಾಹುಲ್ ಸುಖಾಸುಮ್ಮನೆ ಸ್ಮೈಲ್ ಮಾಡಿದ್ದೇಕೆ?]
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಜನರಿಗೆ ತಿಳಿಯಬೇಕಾದ ಸತ್ಯವನ್ನೆಲ್ಲ ಸಂಜಯ್ ಬರು ಅವರು ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ. ಸೋನಿಯಾ ಅವರ ಪುಸ್ತಕದಿಂದ ತಿಳಿಯಬೇಕಾದ್ದೇನಿಲ್ಲ ಎಂದಿದೆ.












Click it and Unblock the Notifications