"ಭಾರತ ಪಿಪಿಇ ಕಿಟ್ ತಯಾರಿಸುತ್ತಿದ್ದರೆ, ಕೆಲವರು ಭಾರತದ ವಿರುದ್ಧವೇ ಟೂಲ್ ಕಿಟ್ ತಯಾರಿಸುತ್ತಿದ್ದರು"
ನವದೆಹಲಿ, ಫೆಬ್ರುವರಿ 16: ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಭಾರತ ಇಡೀ ವಿಶ್ವಕ್ಕೆ ಪಿಪಿಇ ಕಿಟ್ ತಯಾರಿಸುತ್ತಿದ್ದರೆ, ಕೆಲವರು ಭಾರತದ ವಿರುದ್ಧವೇ ಟೂಲ್ ಕಿಟ್ ತಯಾರಿಸುವುದರಲ್ಲಿ ಬ್ಯುಸಿಯಾಗಿದ್ದರು ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರೆಟಾ ಥನ್ಬರ್ಗ್ ಟ್ವೀಟ್ ಟೂಲ್ ಕಿಟ್ ಪ್ರಕರಣ ಸಂಬಂಧ ಪೊಲೀಸರು ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರನ್ನು ಬಂಧಿಸಿದ್ದಾರೆ. ವಕೀಲೆ ನಿಖಿತಾ ಜೇಕಬ್ ಹಾಗೂ ಶಂತನು ವಿರುದ್ಧ ವಾರೆಂಟ್ ಹೊರಡಿಸಿದ್ದಾರೆ. ರೈತರ ಪ್ರತಿಭಟನೆ ಸಂಬಂಧ ಗ್ರೆಟಾ ಥನ್ಬರ್ಗ್ಗೆ ಟೂಲ್ ಕಿಟ್ ರಚಿಸಿಕೊಟ್ಟಿದ್ದಾರೆ ಹಾಗೂ ಈ ಟೂಲ್ ಕಿಟ್ ನಲ್ಲಿ ಭಾರತದ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡುವ ಹುನ್ನಾರವಿತ್ತು ಎಂದು ಪೊಲೀಸರು ದೂರಿದ್ದಾರೆ. ಖಲಿಸ್ತಾನಿ ಪರ ನಂಟು ಹೊಂದಿದ್ದರು ಎಂದು ಆರೋಪಿಸಲಾಗಿದೆ.
ಟೂಲ್ ಕಿಟ್ ಟ್ವೀಟ್ ಅಳಿಸಿ ಹಾಕಲು ಗ್ರೆಟಾಗೆ ಹೇಳಿದ್ದೇ ದಿಶಾ ರವಿ; ದೆಹಲಿ ಪೊಲೀಸರು
ಈ ಬೆಳವಣಿಗೆ ನಂತರ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಪ್ರತಿಕ್ರಿಯಿಸಿದ್ದು, "ವಿಶ್ವವೇ ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಸಂದರ್ಭ ಭಾರತ ಪಿಪಿಇ ಕಿಟ್ ತಯಾರಿಕೆಯಲ್ಲಿ ತೊಡಗಿದ್ದರೆ, ಈ ಕೆಲವು ಜನ ಟೂಲ್ ಕಿಟ್ ತಯಾರಿಕೆಯಲ್ಲಿ ತೊಡಗಿದ್ದರು! ನಾಚಿಕೆಯಾಗಬೇಕು" ಎಂದು ಟ್ವೀಟ್ ಮಾಡಿದ್ದಾರೆ.
ದಿಶಾ ರವಿ ವಯಸ್ಸನ್ನಿಟ್ಟುಕೊಂಡು, ಪೊಲೀಸರು ತೆಗೆದುಕೊಂಡಿರುವ ಕ್ರಮದ ವಿರುದ್ಧ ಮಾತನಾಡುತ್ತಿರುವವರ ಕುರಿತು ಟ್ವೀಟ್ ಮಾಡಿರುವ ಸಚಿವ "ವಯಸ್ಸನ್ನೇ ನೀವು ಮಾನದಂಡವಾಗಿಟ್ಟುಕೊಳ್ಳುವುದಾದರೆ, ಪರಮವೀರ ಚಕ್ರ ತೆಗೆದುಕೊಂಡ ಲೆ.ಅರುಣ್ ಖೇತರ್ ಪಾಲ್ 21 ವಯಸ್ಸಿಗೇ ಹುತಾತ್ಮರಾದರು. ಅವರ ಬಗ್ಗೆ ನನಗೆ ಹೆಮ್ಮೆಯಿದೆ. ಆದರೆ ಟೂಲ್ ಕಿಟ್ ಮಾಡಿದ ಪ್ರಚಾರಕರ ಬಗ್ಗೆಯಲ್ಲ ಎಂದು ಹೇಳಿದ್ದಾರೆ.