ಕೊರೊನಾ ವೈರಸ್ ಬಗ್ಗೆ ಚಿಂತೆ ಬೇಡ, ಲಾಕ್ಡೌನ್ ಶಾಶ್ವತವಲ್ಲ: ಅರವಿಂದ್ ಕೇಜ್ರಿವಾಲ್
ದೆಹಲಿ, ಮೇ 31: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ದ್ವಿಗುಣವಾಗಿದೆ. 17 ಸಾವಿರಕ್ಕಿಂತ ಹೆಚ್ಚು ಜನರಿಗೆ ಸೋಂಕು ಅಂಟಿಕೊಂಡಿದೆ. ಕಳೆದ ಎರಡು ದಿನ ಸತತವಾಗಿ ಸಾವಿರ ಜನರಿಗೆ ಕೊವಿಡ್ ಸೋಂಕು ತಗುಲಿದೆ. 390ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.
ಹೊಸ ಕೇಸ್ಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಬೆನ್ನಲ್ಲೆ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸುದ್ದಿಗೋಷ್ಠಿ ನಡೆಸಿದರು. 'ದೆಹಲಿಯಲ್ಲಿ ಸೋಂಕು ಹೆಚ್ಚುತ್ತಿದೆ ಎನ್ನುವುದು ನಾವು ಒಪ್ಪುತ್ತೇವೆ. ಆದರೆ, ನಾವು ಎಲ್ಲದಕ್ಕೂ ಸಜ್ಜಾಗಿದ್ದೇವೆ. ಲಾಕ್ಡೌನ್ ಎನ್ನುವುದು ಶಾಶ್ವತವಲ್ಲ' ಎಂದು ದೆಹಲಿ ಜನರಿಗೆ ಸಂದೇಶ ರವಾನಿಸಿದ್ದಾರೆ.
ಮತ್ತೊಂದೆಡೆ ಮೇ 31ಕ್ಕೆ ಲಾಕ್ಡೌನ್ 4.0 ಅಂತ್ಯವಾಗಲಿದೆ. ಜೂನ್ 1ರ ನಂತರ ಲಾಕ್ಡೌನ್ 5.0 ಜಾರಿಯಾಗುವ ಸಾಧ್ಯತೆ ಇದೆ. ಈ ನಡುವೆ ದೆಹಲಿ ಸಿಎಂ ಮಾತುಗಳು ಚರ್ಚೆಗೆ ಕಾರಣವಾಗಿದೆ. ಮುಂದೆ ಓದಿ....

ನಾವು ಎಲ್ಲದಕ್ಕೂ ಸಜ್ಜಾಗಿದ್ದೇವೆ
''ದೆಹಲಿಯಲ್ಲಿ ಕೊರೊನಾ ವೈರಸ್ ಕೇಸ್ಗಳ ಸಂಖ್ಯೆ ಅಧಿಕವಾಗುತ್ತಿದೆ ಎನ್ನುವುದನ್ನು ನಾವು ಒಪ್ಪುತ್ತೇವೆ. ಆದರೆ, ಆ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ನಾವು ಸಂಪೂರ್ಣವಾಗಿ ಸಿದ್ಧವಾಗಿದ್ದೇವೆ. ನಾವು ಶಾಶ್ವತವಾಗಿ ಲಾಕ್ಡೌನ್ನಲ್ಲಿ ಉಳಿಯಲು ಸಾಧ್ಯವಿಲ್ಲ'' ಎಂದು ದೆಹಲಿ ಸಿಎಂ ಕೇಜ್ರಿವಾಲ್ ಹೇಳಿದ್ದಾರೆ.

ಕೊರೊನಾಗಿಂತ ನಾವು ನಾಲ್ಕು ಹೆಜ್ಜೆ ಮುಂದಿದ್ದೇವೆ
ಇತರೆ ರಾಜ್ಯಗಳಿಗೆ ಹೋಲಿಸಿಕೊಂಡರೆ ದೆಹಲಿಯಲ್ಲಿ ಪರಿಸ್ಥಿತಿ ಸ್ವಲ್ಪ ಗಂಭೀರವಾಗಿದೆ ಎಂದು ಅಂಕಿ ಅಂಶ ಹೇಳುತ್ತಿದೆ. ಆದರೆ ದೆಹಲಿ ಸಿಎಂ ಮಾತ್ರ ಆತಂಕಕ್ಕೆ ಒಳಗಾಗದೆ ಜನರಿಗೆ ಧೈರ್ಯ ತುಂಬುತ್ತಿದ್ದಾರೆ. ''ಇದು ಕಳವಳಕಾರಿ ವಿಷಯ ಹೌದು, ಆದರೆ ಹೆದರುವ ಅಗತ್ಯವಿಲ್ಲ. ನಿಮ್ಮ ಸರ್ಕಾರವು ಕೊರೊನಾ ವೈರಸ್ಗಿಂತ ನಾಲ್ಕು ಹೆಜ್ಜೆ ಮುಂದಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ'' ದೆಹಲಿ ಮುಖ್ಯಮಂತ್ರಿ ಜನರಿಗೆ ಸಮಾಧಾನಪಡಿಸಿದ್ದಾರೆ.

ಬೆಡ್ಗಳ ವ್ಯವಸ್ಥೆ ಆಗಿದೆ
''ಒಟ್ಟು ರೋಗಿಗಳಲ್ಲಿ, ಕೇವಲ 2100 ಮಂದಿ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ತಮ್ಮ ಮನೆಗಳಲ್ಲಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ 6500 ಹಾಸಿಗೆಗಳು ಸಿದ್ಧವಾಗಿವೆ. ಇನ್ನೊಂದು ವಾರದಲ್ಲಿ 9500 ಹಾಸಿಗೆಗಳು ಸಿದ್ಧವಾಗುತ್ತವೆ'' ಎಂದು ಅರವಿಂದ್ ಕೇಜ್ರಿವಾಲ್ ಸರ್ಕಾರದ ಸಿದ್ಧತೆ ಬಗ್ಗೆ ಮನವರಿಕೆ ಮಾಡಿದ್ದಾರೆ.

ಮನೆಯಲ್ಲಿಯೇ ಚೇತರಿಕೆ ಕಾಣುತ್ತಿದ್ದಾರೆ
'ಸೋಂಕಿಗೆ ಒಳಗಾಗಿರುವ ಜನರಲ್ಲಿ ಬಹುತೇಕರು ಮನೆಯಲ್ಲಿಯೇ ಚೇತರಿಸಿಕೊಂಡಿದ್ದಾರೆ. ಹಾಗಾಗಿ, ಆತಂಕ ಪಡುವ ಅಗತ್ಯ ಇಲ್ಲ' ಎಂದು ಹೇಳಿದ್ದಾರೆ. ಇನ್ನು ಸೋಂಕಿತರ ಚಿಕಿತ್ಸೆಗಾಗಿ ನಗರದಲ್ಲಿ ಐದು ಹೋಟೆಲ್ಗಳನ್ನು ಪಡೆಯಲಾಗಿದೆ. ಇದು ಸಂಫೂರ್ಣವಾಗಿ ಕೊವಿಡ್ ಹೋಟೆಲ್ ಆಗಿದೆ ಎಂದು ಮಾಹಿತಿ ನೀಡಿದರು.

ಮಹಾರಾಷ್ಟ್ರ, ತಮಿಳುನಾಡು ಹಾಟ್ಸ್ಪಾಟ್
ದೆಹಲಿಯಲ್ಲಿ ಒಟ್ಟು 17,386 ಮಂದಿಗೆ ಸೋಂಕು ದೃಢಪಟ್ಟಿದೆ. ಇದುವರೆಗೂ 7,846 ಜನರು ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ. 9,142 ಮಂದಿ ಆಸ್ಪತ್ರೆಯಲ್ಲಿದ್ದಾರೆ. ದೆಹಲಿ ಬಿಟ್ಟರೆ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸೋಂಕು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ 62,228 ಜನರಿಗೆ ಕೊರೊನಾ ಅಂಟಿಕೊಂಡಿದೆ. ತಮಿಳುನಾಡಿನಲ್ಲಿ 20,246 ಮಂದಿಗೆ ಕೊವಿಡ್ ತಗುಲಿದೆ.












Click it and Unblock the Notifications