ಉಪ್ರ ಸಿಎಂ ರೇಸ್ ನಲ್ಲಿರುವ ಕೇಶವ್ ಪ್ರಸಾದ್ ಮೌರ್ಯಗೆ ಐಸಿಯುನಲ್ಲಿ ಚಿಕಿತ್ಸೆ
ನವದೆಹಲಿ, ಮಾರ್ಚ್ 16: ಉತ್ತರಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಕೇಶವ್ ಪ್ರಸಾದ್ ಮೌರ್ಯ ಗುರುವಾರ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಕ್ತದೊತ್ತಡದ ಕುಸಿತ ಹಾಗೂ ಎದೆ ನೋವಿನ ಕಾರಣಕ್ಕೆ ಅವರು ಆಸ್ಪತೆಗೆ ದಾಖಲಾಗಿದ್ದಾರೆ.
ಕೇಶವ್ ಪ್ರಸಾದ್ ಮೌರ್ಯ ಅವರು ಉತ್ತರಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿಗಳ ರೇಸ್ ನಲ್ಲಿ ಇರುವವರು. ಮೌರ್ಯ ಜತೆಗೆ ಕೇಂದ್ರ ಸಚಿವರಾದ ರಾಜ್ ನಾಥ್ ಸಿಂಗ್, ಮನೋಜ್ ಸಿನ್ಹಾ ಹಾಗೂ ಯೋಗಿ ಆದಿತ್ಯನಾಥ್ ಹೆಸರು ಕೂಡ ಕೇಳಿಬರುತ್ತಿದೆ. ಸಂಸದರಾಗಿರುವ ಮೌರ್ಯ, ಬಿಜೆಪಿ ಮತ್ತು ಮಿತ್ರಪಕ್ಷಗಳು ಉತ್ತರಪ್ರದೇಶದಲ್ಲಿ 324 ಸ್ಥಾನಗಳಾನ್ನು ಗಳಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ.[ಯುಪಿಯಲ್ಲಿ ಯಾರಿಗೆ ಒಲಿಯಲಿದೆ ಮುಖ್ಯಮಂತ್ರಿ ಪಟ್ಟ?]
ಸದ್ಯ ಅನಾರೋಗ್ಯದ ಕಾರಣಕ್ಕೆ ಕೇಶವ್ ಪ್ರಸಾದ್ ಮೌರ್ಯ ಅವರು ದೆಹಲಿಯ ರಾಮ್ ಮನೋಹರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರೆ ಮೌರ್ಯ ಅವರು ತುರ್ತು ಚಿಕಿತ್ಸಾ ಘಟಕದಲ್ಲಿ ಇರುವುದರಿಂದ ಅವರ ಅನಾರೋಗ್ಯದ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿವೆ.[ಉತ್ತರಪ್ರದೇಶ ಮುಖ್ಯಮಂತ್ರಿ ಆಯ್ಕೆ, ಮುಂದುವರಿದ ಕುತೂಹಲ]
ಸದ್ಯಕ್ಕೆ ಉತ್ತರಪ್ರದೇಶದಲ್ಲಿ ಪ್ರಮಾಣ ವಚನ ಸ್ವೀಕಾರ ಮಾರ್ಚ್ 17ಕ್ಕೆ ಎಂದು ಈಗಾಗಲೇ ಬಿಜೆಪಿ ಘೋಷಿಸಿಯಾಗಿದೆ. ಆದರೆ ಮಣಿಪುರ ಹಾಗೂ ಗೋವಾದಲ್ಲಿ ವಿಶ್ವಾಸಮತ ಸಾಬೀತುಪಡಿಸಿದ ನಂತರವಷ್ಟೇ ಬಿಜೆಪಿ ವರಿಷ್ಠರು ಉತ್ತರಪ್ರದೇಶದ ಕಡೆಗೆ ನೋಡುತ್ತಾರೆ.