ಕೇಂದ್ರದ ಕೃಷಿ ಕಾಯ್ದೆಗೆ ವಿರೋಧ: ಪ್ರತಿಭಟನಾ ಸ್ಥಳದಲ್ಲಿ ರೈತ ಆತ್ಮಹತ್ಯೆ!
ನವದೆಹಲಿ, ಜನವರಿ 03: ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆ ಜೋರಾಗಿಯೇ ಮುಂದುವರಿದಿದ್ದು, ದೆಹಲಿ-ಗಾಜಿಯಾಬಾದ್ ಗಡಿಯಲ್ಲಿ 70 ವರ್ಷದ ರೈತ ಮೃತಪಟ್ಟಿದ್ದಾನೆ.
ದೆಹಲಿಯ ಗಡಿಯಲ್ಲಿ ಕೇಂದ್ರದ ಹೊಸ ಕೃಷಿ ಕಾನೂನು ವಿರುದ್ಧ ಹಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ಇದರ ನಡುವೆ ಶನಿವಾರ (ಜನವರಿ 2) 70 ವರ್ಷದ ರೈತ ಸಾವನ್ನಪ್ಪಿದ್ದಾನೆ. ಇದು ಆತ್ಮಹತ್ಯೆ ಎಂದು ರೈತ ಸಂಘಟನೆಗಳು ಸರ್ಕಾರವನ್ನು ದೂಷಿಸಿವೆ.
ಘಾಜಿಯಾಬಾದ್ ಪೊಲೀಸರ ಪ್ರಕಾರ, ಮೃತ ರೈತನನ್ನು ಉತ್ತರಪ್ರದೇಶ ರಾಂಪುರದ ಪಶಿಯಾಪುರ ಗ್ರಾಮದ ಕಾಶ್ಮೀರ ಸಿಂಗ್ ದಾಸ್ ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಬಿಲಾಸ್ಪುರಕ್ಕೆ ಸೇರಿದವರು. ಘಾಜಿಪುರದ ಶೌಚಾಲಯದೊಳಗೆ ಚಾವಣಿಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಕಾಶ್ಮೀರ ಸಿಂಗ್ ಅವರ ದೇಹದಿಂದ ಆತ್ಮಹತ್ಯೆ ಪತ್ರವನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ರೈತ ಸಂಘದ ಮುಖಂಡರು ಹೇಳಿಕೊಂಡಿದ್ದಾರೆ

ಎನ್ಡಿಟಿವಿಯಲ್ಲಿ ಪ್ರಕಟವಾದ ವರದಿಯ ಪ್ರಕಾರ, "ಚಳಿಗಾಲದಲ್ಲಿ ನಾವು ಎಷ್ಟು ದಿನ ಇಲ್ಲಿ ಕುಳಿತುಕೊಳ್ಳಲು ಸಾಧ್ಯ'' ಎಂದು ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾರೆ ಎಂದು ರೈತ ಸಂಘದ ಮುಖಂಡರು ಹೇಳಿದ್ದಾರೆ. ಈ ಸರ್ಕಾರವು ನಮ್ಮನ್ನು ಆಲಿಸುತ್ತಿಲ್ಲ ಮತ್ತು ಆದ್ದರಿಂದ ಪರಿಹಾರವನ್ನು ಕಂಡುಕೊಳ್ಳಲು ನಾನು ನನ್ನ ಜೀವವನ್ನು ನೀಡಲಿದ್ದೇನೆ ಎಂದು ಕಾಶ್ಮೀರ ಸಿಂಗ್ ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾರೆ ಎನ್ನಲಾಗಿದೆ.
ಈಗಾಗಲೇ ಘಾಜಿಯಾಬಾದ್ ಪೊಲೀಸರು ಇದು ಆತ್ಮಹತ್ಯೆ ಪ್ರಕರಣವೋ ಅಥವಾ ಇಲ್ಲವೋ ಎಂದು ತನಿಖೆ ನಡೆಸುತ್ತಿದ್ದು, ಮೃತ ರೈತನಿಂದ ವಶಪಡಿಸಿಕೊಂಡ ಆತ್ಮಹತ್ಯೆ ಪತ್ರ ಕೂಡ ಈಗ ಪೊಲೀಸರ ವಶದಲ್ಲಿದೆ.












Click it and Unblock the Notifications