ಪಾಕಿಸ್ತಾನದ ಸೊಕ್ಕಿಗೆ ಖಡಕ್ ಎಚ್ಚರಿಕೆ ನೀಡಿದ ಸುಷ್ಮಾ ಸ್ವರಾಜ್
ನವದೆಹಲಿ, ಮೇ 28: "ಭಯೋತ್ಪಾದನೆ ಮತ್ತು ಮಾತುಕತೆ ಎರಡನ್ನೂ ಒಟ್ಟಿಗೇ ಮಾಡುವುದಕ್ಕೆ ಸಾಧ್ಯವಿಲ್ಲ" ಎನ್ನುವ ಮೂಲಕ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೆರೆ ರಾಷ್ಟ್ರ ಪಾಕಿಸ್ತಾನಕ್ಕೆ ಸರಿಯಾದ ಟಾಂಗ್ ನೀಡಿದ್ದಾರೆ.
ಬಿಜೆಪಿ ನೇತ್ರತ್ವದ ಎನ್ ಡಿಎ ಮೈತ್ರಿಕೂಟ ಕೇಂದ್ರದಲ್ಲಿ ನಾಲ್ಕು ವರ್ಷವನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, "ನಾವು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಸಿದ್ಧವಿಲ್ಲ ಎಂದು ಎಂದಿಗೂ ಹೇಳಿಲ್ಲ. ಆದರೆ ಅವರೇ ಮಾತುಕತೆಗೆ ತಡೆ ಒಡ್ಡುತ್ತಿದ್ದಾರೆ. ಭಯೋತ್ಪಾದನೆ ಮತ್ತು ಮಾತುಕತೆ ಎರಡೂ ಒಟ್ಟಿಗೇ ಹೋಗುವುದಕ್ಕೆ ಎಂದಿಗೂ ಸಾಧ್ಯವಿಲ್ಲ" ಎಂದು ಅವರು ಖಾರವಾಗಿ ಹೇಳಿದ್ದಾರೆ.
ವಿಡಿಯೋ: ಅರಳು ಹುರಿದಂತೆ ಕನ್ನಡ ಮಾತನಾಡುವ ಸುಷ್ಮಾ ಸ್ವರಾಜ್
"ಗಡಿಯಲ್ಲಿ ನಮ್ಮ ಸೈನಿಕರು ಸಾಯುತ್ತಿದ್ದರೆ, ಮಾತುಕತೆಗೆ ಯಾವ ಅರ್ಥವಿರುತ್ತದೆ?" ಎಂದು ಸ್ವರಾಜ್ ಪ್ರಶ್ನಿಸಿದ್ದಾರೆ.
ಭಾರತದೊಂದಿಗೆ ದ್ವಿಪಕ್ಷಿಯ ಮಾತುಕತೆಗೆ ಪಾಕಿಸ್ತಾನ ಸಿದ್ಧವಿದೆ ಎಂದು ಪಾಕಿಸ್ತಾನ ನೀಡಿದ ಹೇಳಿಕೆಗೆ ಪ್ರತಿಯಾಗಿ ಸುಷ್ಮಾ ಸ್ವರಾಜ್ ನೀಡಿದ ಖಡಕ್ ಪ್ರತಿಕ್ರಿಯೆ ಇದು.