ಮೋದಿ ದಾರ್ಶನಿಕ, ಬಹುಮುಖ ಪ್ರತಿಭೆ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಶ್ಲಾಘನೆ
ನವದೆಹಲಿ, ಫೆಬ್ರವರಿ 22: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರಾ ಕೊಂಡಾಡಿದ್ದಾರೆ. ಪ್ರಧಾನಿ ಮೋದಿ ಅವರು ಅಂತಾರಾಷ್ಟ್ರೀಯವಾಗಿ ಮೆಚ್ಚುಗೆ ಪಡೆದ ದಾರ್ಶನಿಕ ಎಂದು ಶ್ಲಾಘಿಸಿರುವ ಮಿಶ್ರಾ, ಜಾಗತಿಕವಾಗಿ ಚಿಂತಿಸಿ ಸ್ಥಳೀಯವಾಗಿ ಕಾರ್ಯ ನಿರ್ವಹಿಸುವ ಬಹುಮುಖ ಪ್ರತಿಭೆ ಎಂದು ಬಣ್ಣಿಸಿದ್ದಾರೆ.
ಸುಪ್ರೀಂಕೋರ್ಟ್ನ ಐವರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳಲ್ಲಿ ಒಬ್ಬರಾದ ಅರುಣ್ ಮಿಶ್ರಾ, ಶನಿವಾರ ನಡೆದ ಅಂತಾರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನ 2020- 'ನ್ಯಾಯಾಂಗ ಮತ್ತು ಬದಲಾಗುತ್ತಿರುವ ಜಗತ್ತು' ಉದ್ಘಾಟನಾ ಸಮಾರಂಭದಲ್ಲಿ ವಂದನಾರ್ಪಣೆ ಭಾಷಣ ಮಾಡಿದರು.
ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯ ನ್ಯಾಯಮೂರ್ತಿ ಶರದ್ ಎ. ಬೊಬ್ಡೆ, ನ್ಯಾಯಮೂರ್ತಿ ಎನ್ವಿ ರಮಣ, ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಮತ್ತು ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳು, 24 ದೇಶಗಳ ನ್ಯಾಯಮೂರ್ತಿಗಳು, ನಿವೃತ್ತ ನ್ಯಾಯಮೂರ್ತಿಗಳು ಮತ್ತು ವಕೀಲರು ಭಾಗವಹಿಸಿದ್ದರು.

ಜವಾಬ್ದಾರಿಯುತ ದೇಶವಾಗಿ ಬೆಳೆದಿದೆ
ಬಳಕೆಯಲ್ಲಿಲ್ಲದ ಸುಮಾರು 1,500 ಅನುಪಯುಕ್ತ ಕಾನೂನುಗಳನ್ನು ತೆಗೆದುಹಾಕಿದ ಪ್ರಧಾನಿ ಮೋದಿ ಮತ್ತು ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಅವರನ್ನು ಅಭಿನಂದಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಉಸ್ತುವಾರಿಯಲ್ಲಿ ಭಾರತವು ಅಂತಾರಾಷ್ಟ್ರೀಯ ಸಮುದಾಯದ ಅತ್ಯಂತ ಸ್ನೇಹಿ ಸದಸ್ಯ ಮತ್ತು ಜವಾಬ್ದಾರಿಯುತವಾಗಿ ಬೆಳೆದಿದೆ ಎಂದು ಹೊಗಳಿದರು.

ಮೋದಿ ಅವರಿಗೆ ಧನ್ಯವಾದ
'ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನ್ಯಾಯಾಂಗ ಎದುರಿಸುತ್ತಿರುವ ಸವಾಲುಗಳು ಸಾಮಾನ್ಯವಾಗಿವೆ. ನಿರಂತರ ಬದಲಾಗುತ್ತಿರುವ ಜಗತ್ತಿನಲ್ಲಿ ನ್ಯಾಯಾಂಗ ಮಹತ್ವದ ಪಾತ್ರ ವಹಿಸುತ್ತಿದೆ. ಗೌರವಾನ್ವಿತ ಮಾನವ ಅಸ್ತಿತ್ವದ ಸಮಸ್ಯೆ ನಮ್ಮ ಪ್ರಮುಖ ಕಳವಳವಾಗಿದೆ. ತಮ್ಮ ಸ್ಫೂರ್ತಿದಾಯಕ ಉದ್ಘಾಟನಾ ಭಾಷಣ ಮಾಡಿದ ಜಾಗತಿಕವಾಗಿ ಆಲೋಚಿಸಿ ಸ್ಥಳೀಯವಾಗಿ ಕೆಲಸ ಮಾಡುವ ಬಹುಮುಖ ಪ್ರತಿಭೆ ಶ್ರೀ ನರೇಂದ್ರ ಮೋದಿ ಅವರಿಗೆ ನಾವು ಧನ್ಯವಾದ ಹೇಳುತ್ತೇವೆ' ಎಂದರು.

ಜಗತ್ತಿಗೇ ಭಾರತ ಅಚ್ಚರಿ
ಭಾರತವು ಜಗತ್ತಿನಲ್ಲಿ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು, ಇಷ್ಟು ಯಶಸ್ವಿಯಾಗಿ ಹೇಗೆ ಪ್ರಜಾಪ್ರಭುತ್ವ ಕಾರ್ಯನಿರ್ವಹಿಸುತ್ತಿದೆ ಎಂದು ಜನರು ಅಚ್ಚರಿಪಟ್ಟುಕೊಳ್ಳುತ್ತಾರೆ. ಶಾಮತಿಯುತ ಮತ್ತು ಸುಭದ್ರ, ಭಯೋತ್ಪಾದನೆಯಿಂದ ಮುಕ್ತ ಜಗತ್ತಿಗಾಗಿ ಇರುವ ಸಾಂವಿಧಾನಿಕ ಕಟ್ಟುಪಾಡುಗಳಿಗೆ ಭಾರತ ಬದ್ಧವಾಗಿದೆ. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪರಿಸರ ಸಂರಕ್ಷಣೆಯನ್ನು ಮುಖ್ಯವಾಗಿ ಪರಿಗಣಿಸಲಾಗಿದೆ ಎಂದು ಹೇಳಿದರು.

ತೀರ್ಪುಗಳನ್ನು ಒಪ್ಪಿಕೊಂಡಿದ್ದಾರೆ
ಉದ್ಘಾಟನಾ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ನ್ಯಾಯಾಲಯದ ಇತ್ತೀಚಿನ ಅತ್ಯಂತ ನಿರ್ಣಾಯಕ ತೀರ್ಪುಗಳನ್ನು ದೇಶದ 130 ಕೋಟಿ ಭಾರತೀಯರು ತುಂಬು ಹೃದಯದಿಂದ ಒಪ್ಪಿಕೊಂಡಿದ್ದಾರೆ. ಈ ತೀರ್ಪುಗಳು ಜಾಗತಿಕ ಚರ್ಚೆಯ ವಸ್ತುಗಳಾಗಿವೆ ಎಂದರು. ಅಯೋಧ್ಯಾ ಭೂ ವಿವಾದದ ತೀರ್ಪಿನ ಕುರಿತು ಉಲ್ಲೇಖಿಸಿದ ಅವರು, ಈ ತೀರ್ಪುಗಳ ಪರಿಣಾಮಗಳ ಬಗ್ಗೆ ಅನೇಕ ಕಳವಳಗಳು ವ್ಯಕ್ತವಾಗಿದ್ದವು. ಆದರೆ ನೋಡಿ ಏನಾಯಿತು, 130 ಕೋಟಿ ಭಾರತೀಯರು ಅದನ್ನು ಹೃದಯಪೂರ್ವಕವಾಗಿ ಸ್ವೀಕರಿಸಿದರು ಎಂದು ಹೇಳಿದರು.












Click it and Unblock the Notifications