ರೈತರ ಹಿತಾಸಕ್ತಿಗಾಗಿ ಎಂಥಾ ತ್ಯಾಗಕ್ಕೂ ಸಿದ್ಧ ಎಂದ ಶಿರೋಮಣಿ ಅಕಾಲಿ ದಳ
ನವದೆಹಲಿ, ಸಪ್ಟೆಂಬರ್.16: ಲೋಕಸಭಾ ಮುಂಗಾರು ಅಧಿವೇಶನದಲ್ಲಿ ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಬಾದಲ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರೈತರ ಹಿತಾಸಕ್ತಿ ವಿಚಾರದಲ್ಲಿ ಪಕ್ಷವು ಎಂಥಾ ತ್ಯಾಗಕ್ಕಾದರೂ ಸಿದ್ಧ ಎಂದು ಹೇಳಿದ್ದಾರೆ.
ಮುಂಬರುವ ದಿನಗಳಲ್ಲಿ ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಮಂಡಿಸಲು ಹೊರಟಿರುವ ಮಸೂದೆಗಳಿಗೆ ಶಿರೋಮಣಿ ಆಕಾಲಿ ದಳ ವಿರೋಧ ವ್ಯಕ್ತಪಡಿಸಿದೆ. ರೈತ ಸಂಘಟನೆ, ರೈತರು ಮತ್ತು ಕೃಷಿ ಕಾರ್ಮಿಕರು ವ್ಯಕ್ತಪಡಿಸುವ ಎಲ್ಲ ಮೀಸಲಾತಿ ಬೇಡಿಕೆಗಳನ್ನು ಪರಿಹರಿಸಬೇಕಿದೆ. ಅಲ್ಲಿವರೆಗೆ ಸಂಸತ್ತಿನಲ್ಲಿ ಕೃಷಿ ಸಂಬಂಧಿತ ಮೂರು ಮಸೂದೆಗಳನ್ನು ಅನುಮೋದನೆಗಾಗಿ ಪರಿಚಯಿಸದಂತೆ ಶಿರೋಮಣಿ ಅಕಾಲಿ ದಳ ಕೇಂದ್ರಕ್ಕೆ ಮನವಿ ಮಾಡಿದೆ.
ಲೋಕಸಭೆಯಲ್ಲಿ ಮಂಗಳವಾರ ಪಂಜಾಬ್ನ ಫಿರೋಜ್ಪುರದ ಸಂಸದ ಸುಖ್ಬೀರ್ ಬಾದಲ್ ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ ವಿರುದ್ಧ ಮತ ಚಲಾಯಿಸಿದರು. ಈ ಉದ್ದೇಶಿತ ಶಾಸನವು ರೈತರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಪರಿಚಯಿಸಲು ಹೊರಟ ಮಸೂದೆಗಳು:
ಕೇಂದ್ರ ಸರ್ಕಾರವು ರೈತರ ಉತ್ಪಾದನೆಯ ವ್ಯಾಪಾರ ಮತ್ತು ವಾಣಿಜ್ಯ(ಪ್ರಚಾರ ಮತ್ತು ಸೌಲಭ್ಯ) ಮಸೂದೆ, ಕೃಷಿ ಸೇವೆ ಮತ್ತು ಬೆಲೆ ನಿಗದಿ ಬಗ್ಗೆ ಒಪ್ಪಂದ (ಸಬಲೀಕರಣ ಮತ್ತು ಸಂರಕ್ಷಣೆ) ಮಸೂದೆ, ಅಗತ್ಯ ವಸ್ತುಗಳ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಮುಂದಾಗಿತ್ತು. ಆದರೆ, ರೈತರು ಮತ್ತು ರೈತ ಸಂಘಟನೆಗಳ ಬೇಡಿಕೆಗೆ ತಕ್ಕಂತೆ ಮೀಸಲಾತಿ ಭರವಸೆ ನೀಡದ ಹೊರತು ಮಸೂದೆಗೆ ಅನುಮೋದನೆ ನೀಡುವುದಕ್ಕೆ ಬೆಂಬಲಿಸುವುದಿಲ್ಲ ಎಂದು ಬಾದಲ್ ತಿಳಿಸಿದ್ದಾರೆ.
"ಈ ಮಸೂದೆಗಳನ್ನು ಪರಿಚಯಿಸುವ ಮೊದಲು, ಕೇಂದ್ರ ಸರ್ಕಾರವು ಕನಿಷ್ಠ ರೈತರ ಪಕ್ಷಗಳು, ಮಿತ್ರಪಕ್ಷಗಳನ್ನು ಸಂಪರ್ಕಿಸಬೇಕು. ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಕೈಗೆತ್ತಿಕೊಂಡಾಗ ನಮ್ಮ ಸಚಿವ ಹರ್ಸಿಮ್ರತ್ ಕೌರ್ ಬಾದಲ್ ಮೀಸಲಾತಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ" ಎಂದು ಬಾದಲ್ ಹೇಳಿದ್ದಾರೆ.
ರಾಜ್ಯದಲ್ಲಿ ಪಕ್ಷದ ಪರಂಪರೆ ಕಾಪಾಡಿಕೊಂಡು ಹೋಗುವುದಕ್ಕಾಗಿ ಯಾವುದೇ ಬೆಲೆಯನ್ನು ತೆರುವುದಕ್ಕೂ ಪಕ್ಷ ಸಿದ್ಧವಾಗಿದೆ. ಅದನ್ನು ರಾಜಿ ಮಾಡಿಕೊಳ್ಳಲು ಅಥವಾ ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ಸುಖ್ಬೀರ್ ಬಾದಲ್ ಪಂಜಾಬಿಯಲ್ಲಿ ಹೇಳಿದ್ದಾರೆ.












Click it and Unblock the Notifications