ಕಿರಣ್ ಬೇಡಿಗೆ ಆಪ್ ಮುಖಂಡ ಶಾಂತಿ ಭೂಷಣ್ ಬೆಂಬಲ
ನವದೆಹಲಿ, ಜ. 22: ಮಾಜಿ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ನವದೆಹಲಿಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದು ಸ್ವತಃ ಅಣ್ಣಾ ಹಜಾರೆಗೆ ರುಚಿಸಿಲ್ಲ. ಆದರೆ, ಬಿಜೆಪಿಯ ಪ್ರಮುಖ ಎದುರಾಳಿಯಾಗಿರುವ ಅರವಿಂದ ಕೇಜ್ರಿವಾಲ್ ಅವರ ನಿಕಟವರ್ತಿ ಪ್ರಶಾಂತ್ ಭೂಷಣ್ ತಂದೆಯಾದ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ಕಿರಣ್ ಬೇಡಿಗೆ ಪೂರ್ಣ ಅಂಕ ನೀಡಿದ್ದಾರೆ.
ಎಎನ್ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಶಾಂತಿ ಭೂಷಣ್ "ಕಿರಣ್ ಬೇಡಿ ಅವರು ಅತ್ಯುತ್ತಮ ಆಡಳಿತ ನೀಡಬಲ್ಲರು. ಅವರನ್ನು ಮುಖ್ಯಮಂತ್ರಿಯನ್ನಾಗಿ ಆರಿಸಿ ಬಿಜೆಪಿ ಅತ್ಯುತ್ತಮ ಕೆಲಸ ಮಾಡಿದೆ. ಕಿರಣ್ ಬೇಡಿ ಅವರು 'ಭ್ರಷ್ಟಾಚಾರದ ವಿರುದ್ಧ ಭಾರತ' ಆಂದೋಲನಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಅತ್ಯಂತ ದಕ್ಷ ಹಾಗೂ ಸ್ವಚ್ಛ ಆಡಳಿತ ನೀಡಬಲ್ಲರು" ಎಂದು ಹೊಗಳಿದ್ದಾರೆ. [ದೆಹಲಿ ಚುನಾವಣೆಯ ರಂಗೀನ್ ಚಿತ್ರಗಳು]

ಆಮ್ ಆದ್ಮಿ ಪಕ್ಷ ಸ್ಥಾಪನೆಗೊಂಡಾಗ ಪಕ್ಷದ ನಿಧಿಗೆ ಪ್ರಶಾಂತ್ ಭೂಷಣ್ '1 ಕೋಟಿ ರು.' ದೇಣಿಗೆ ನೀಡಿ ಗಮನ ಸೆಳೆದಿದ್ದರು. ಆದರೆ, ಚುನಾವಣೆಯಲ್ಲಿ ಗೆದ್ದ ನಂತರ ಅರವಿಂದ ಕೇಜ್ರಿವಾಲ್ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಶಾಂತಿ ಭೂಷಣ್ ಅಸಮಾಧಾನ ವ್ಯಕ್ತಪಡಿಸಿದ್ದರು. ಕೇಜ್ರಿವಾಲ್ ಅವರಲ್ಲಿ ಸಂಘಟನಾ ನೈಪುಣ್ಯತೆಯಿಲ್ಲ ಎಂದು ಟೀಕಿಸಿದ್ದರು. [ಸಮೀಕ್ಷೆ, ಸಿಎಂ ಹುದ್ದೆಗೆ ಯಾರು ಬೆಸ್ಟ್?]
ಕೇಜ್ರಿವಾಲ್ಗೆ ಸಂಘಟನಾ ಚಾತುರ್ಯ ಇಲ್ಲ : "ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಿರಣ್ ಬೇಡಿ ಮುಖ್ಯಮಂತ್ರಿಯಾದರೆ ಆಮ್ ಆದ್ಮಿ ಕೂಡ ಸಂತಸಪಡಬೇಕು. ಆಮ್ ಆದ್ಮಿಯಲ್ಲಿ ಎಲ್ಲವೂ ಸರಿ ಇಲ್ಲ ಎಂದು ನನ್ನ ಅನಿಸಿಕೆ. ಜನರ ನಿರೀಕ್ಷೆಗೆ ತಕ್ಕಂತೆ ಪಕ್ಷ ಮುಂದುವರಿಯುತ್ತಿಲ್ಲ. ಪಕ್ಷ ಸ್ಥಾಪಿಸಿದ ಉದ್ದೇಶವೂ ಈಡೇರಿಲ್ಲ. ಅರವಿಂದ ಕೇಜ್ರಿವಾಲ್ ಓರ್ವ ಮಹಾನ್ ಚಳವಳಿಕಾರ. ಆದರೆ, ಅವರಲ್ಲಿ ಸಂಘಟನಾ ಚಾತುರ್ಯ ಇಲ್ಲ" ಎಂದು ಟೀಕಿಸಿದ್ದಾರೆ. [ಕಿರಣ್ ಬೇಡಿ : ಕುತೂಹಲಕಾರಿ ವಿಷಯಗಳು]
ಆದರೆ, ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಶಾಂತ್ ಭೂಷಣ್ "ನನ್ನ ತಂದೆ ಶಾಂತಿ ಭೂಷಣ್ ನೀಡಿರುವ ಹೇಳಿಕೆ ಅವರ ವೈಯಕ್ತಿಕವಾದುದು. ಈ ಕುರಿತು ಪಕ್ಷದೊಳಗೆ ಚರ್ಚೆ ನಡೆಯಬೇಕಿದೆ" ಎಂದು ತಿಳಿಸಿದ್ದಾರೆ.












Click it and Unblock the Notifications