ಟಿಕೆಟ್ ಬುಕ್ ಮಾಡಿದ್ದರೂ ಸೀಟು ಖಾಲಿ ಇಲ್ಲ ಎಂದ ಏರ್ ಇಂಡಿಯಾ
ನವದೆಹಲಿ, ಜೂನ್ 5: ದೆಹಲಿಯಿಂದ ಗುವಾಹಟಿಗೆ ತೆರಳುವ ಏರ್ ಇಂಡಿಯಾ ವಿಮಾನದ ಸುಮಾರು 20 ಮಂದಿ ಪ್ರಯಾಣಿಕರು ಕಂಗಾಲಾಗಿದ್ದರು. ಬಳಿಕ ಅವರ ಗೊಂದಲ ಕೋಪಕ್ಕೆ ತಿರುಗಿತು. ಆಕ್ರೋಶದಿಂದ ಘೋಷಣೆಗಳನ್ನು ಕೂಗಿದರು. ಇದಕ್ಕೆ ಕಾರಣವಾಗಿದ್ದು ಏರ್ ಇಂಡಿಯಾ ವಿಮಾನ ಸಂಸ್ಥೆಯ ಯಡವಟ್ಟು.
ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನದ ಮಿತಿಗಿಂತಲೂ ಮೀರಿದ ಸಂಖ್ಯೆಯಲ್ಲಿ ಟಿಕೆಟ್ ಬುಕ್ ಆಗಿತ್ತು. ಬರೋಬ್ಬರಿ 20 ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ವಿತರಿಸಲು ಸಂಸ್ಥೆ ನಿರಾಕರಿಸಿತು. ಇದರಿಂದ ಉದ್ರಿಕ್ತರಾದ ಪ್ರಯಾಣಿಕರು ಸಂಸ್ಥೆಯ ವಿರುದ್ಧ ರೊಚ್ಚಿಗೆದ್ದು ಘೋಷಣೆಗಳನ್ನು ಕೂಗಿದರು.

ಎಐ 889 ವಿಮಾನ ಅಸ್ಸಾಂನ ಗುವಾಹಟಿಗೆ ಬೆಳಿಗ್ಗೆ 9.30ಕ್ಕೆ ತೆರಳಬೇಕಿತ್ತು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಬುಕ್ ಆಗಿದ್ದು ಗೊಂದಲಕ್ಕೆ ಕಾರಣವಾಯಿತು.
ಪ್ರಯಾಣಿಕರಲ್ಲಿ ಒಬ್ಬರಾದ ಮನೋಜ್ ಕುಮಾರ್ ದಾಸ್, ಅವರು ತಮ್ಮ ಪ್ರಯಾಣ ರದ್ದುಗೊಂಡಿದ್ದರಿಂದ ಪರಿಹಾರ ನೀಡುವಂತೆ ಪಟ್ಟುಹಿಡಿದರು. ತಮಗೆ ಏರ್ ಇಂಡಿಯಾ ಬೋರ್ಡಿಂಗ್ ಪಾಸ್ ನೀಡಲು ನಿರಾಕರಿಸಿದೆ. ತಾವು ಗುವಾಹಟಿಯಿಂದ ಮರಳಲು ವಿಸ್ತಾರಾ ವಿಮಾನವನ್ನು ಬುಕ್ ಮಾಡಲಾಗಿತ್ತು. ಈಗ ಅದನ್ನೂ ರದ್ದುಗೊಳಿಸಬೇಕಿದೆ. ಅದನ್ನು ರದ್ದು ಮಾಡಲು ವೆಚ್ಚವಾಗುವ ಹಣವನ್ನು ಪರಿಹಾರವಾಗಿ ನೀಡಿ ಎಂದು ಅವರು ಕೇಳಿದಾಗ ಏರ್ ಇಂಡಿಯಾ ತಮಗೆ ಪ್ರತಿಕ್ರಿಯೆ ನೀಡುವುದನ್ನೇ ನಿಲ್ಲಿಸಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications