ದೆಹಲಿ; ಜಾರಿಗೆ ಬಂತು ಸಮ-ಬೆಸ ವಾಹನ ಸಂಚಾರ ವ್ಯವಸ್ಥೆ
ನವದೆಹಲಿ, ನವೆಂಬರ್ 04 : ವಾಯು ಮಾಲಿನ್ಯದ ಪ್ರಮಾಣ ಗಂಭೀರ ಸ್ಥಿತಿಗೆ ತಲುಪಿರುವ ನವದೆಹಲಿಯಲ್ಲಿ ಸಮ-ಬೆಸ ವಾಹನ ಸಂಚಾರ ವ್ಯವಸ್ಥೆ ಜಾರಿಗೆ ಬಂದಿದೆ. ವಾಯು ಮಾಲಿನ್ಯದ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ನವೆಂಬರ್ 4ರಂದು ಸಮ-ಬೆಸ ವಾಹನ ಸಂಚಾರ ವ್ಯವಸ್ಥೆ ಜಾರಿಗೆ ಬಂದಿದೆ. ನವೆಂಬರ್ 14ರ ತನಕ ಇದು ಜಾರಿಯಲ್ಲಿರುತ್ತದೆ. ನಿಯಮ ಉಲ್ಲಂಘನೆ ಮಾಡಿದರೆ 4 ಸಾವಿರ ರೂ. ದಂಡ ವಿಧಿಸುವುದಾಗಿ ದೆಹಲಿ ಸರ್ಕಾರ ಎಚ್ಚರಿಕೆ ನೀಡಿದೆ.

ಅಕ್ಟೋಬರ್ 17ರಂದು ಪತ್ರಿಕಾಗೋಷ್ಠಿ ನಡೆಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನವೆಂಬರ್ 4ರಿಂದ ಸಮ-ಬೆಸ ವಾಹನ ಸಂಚಾರ ವ್ಯವಸ್ಥೆ ಜಾರಿಗೊಳಿಸುವುದಾಗಿ ಘೋಷಣೆ ಮಾಡಿದ್ದರು. ಭಾನುವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳು ಈ ನಿಯಮ ಜಾರಿಯಲ್ಲಿರುತ್ತದೆ.
ದೆಹಲಿ ಮತ್ತು ಉಪ ನಗರಗಳಲ್ಲಿ ಭಾನುವಾರ ವಾಯು ಮಾಲಿನ್ಯದ ಪ್ರಮಾಣ ಗಂಭೀರ ಸ್ಥಿತಿಗೆ ತಲುಪಿತ್ತು. ಪ್ರತಿ ಘನಮೀಟರ್ ಗಾಳಿಯಲ್ಲಿರುವ 2.5 ಮೈಕ್ರಾನ್ ಗಾತ್ರದ (ಪಿಎಂ 2.5) ಮಾಲಿನ್ಯಕಾರಕ ಕಣಗಳ ಸಂಖ್ಯೆ 483ರಷ್ಟಿತ್ತು.
ಶನಿವಾರ ತುಂತುರು ಮಳೆ ಸುರಿದ ಕಾರಣಕ್ಕೆ ಮಾಲಿನ್ಯ ಸ್ವಲ್ಪ ತಗ್ಗಿತ್ತು. ಪಿಎಂ ಕಣಗಳ ಸಂಖ್ಯೆ ಶನಿವಾರ ಸಂಜೆ 399ರಷ್ಟಿತ್ತು. ಆದರೆ, ರಾತ್ರಿಯ ಬಳಿಕ ಮಾಲಿನ್ಯದ ಪ್ರಮಾಣ ಮತ್ತೆ ಏರಿಕೆಯಾಗಿತ್ತು.
ಸೋಮವಾರ ಸಂಜೆಯಿಂದ ಮಂಗಳವಾರದ ತನಕ ಗಂಟೆಗೆ 20 ರಿಂದ 25 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ನವದೆಹಲಿಯಲ್ಲಿ ನವೆಂಬರ್ 7 ಮತ್ತು 8ರಂದು ಚಂಡಮಾರುತದ ಪ್ರಭಾವದಿಂದ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.












Click it and Unblock the Notifications