ದೆಹಲಿಯಲ್ಲಿ ಕಾರು-ಬೈಕ್ ರಸ್ತೆಗೆ ಇಳಿಸುವ ಮುನ್ನ ಎಚ್ಚರ.. ಎಚ್ಚರ
ನವದೆಹಲಿ, ನವೆಂಬರ್.07: ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು ಅಂತಾರಲ್ವಾ. ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರದ ನಡೆಯೂ ಸೇಮ್ ಟು ಸೇಮ್ ಹಾಗೆ ಆಗಿದೆ. ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಸರ್ಕಾರ ಜಾರಿಗೊಳಿಸಿದ ಸಮ-ಬೆಸ ಯೋಜನೆ ಸಂಪೂರ್ಣ ಅಸಾಂವಿಧಾನಿಕವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ ನವೆಂಬರ್.4 ರಿಂದ ನವೆಂಬರ್.15ರವರೆಗೂ ದೆಹಲಿಯಲ್ಲಿ ವಾಹನಗಳಿಗೆ ಸಮ-ಬೆಸ ಯೋಜನೆ ಜಾರಿಗೊಳಿಸಲಾಗಿದೆ. ಸರ್ಕಾರದ ಈ ಕ್ರಮ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಇದರ ಮಧ್ಯೆ ರಾಜ್ಯ ಸರ್ಕಾರದ ನಡೆ ವಿರೋಧಿಸಿ ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಧಿಕಾರಿವನ್ನ ಸಂಪೂರ್ಣ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರದ ಸಮ-ಬೆಸ ಯೋಜನೆ ಅಸಾಂವಿಧಾನಿಕ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಸೃಷ್ಟಿಯಾಗಿರುವ ವಾಯುಮಾಲಿನ್ಯಕ್ಕೆ ಸಂಬಂಧಿಸಿದಂತೆ ಕಳೆದ ಸೋಮವಾರವಷ್ಟೇ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಛಾಟಿ ಬೀಸಿತ್ತು. ವಾಯುಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರದ ಕ್ರಮಗಳ ಬಗ್ಗೆಯೂ ಕೋರ್ಟ್ ಪ್ರಶ್ನೆ ಮಾಡಿತ್ತು. ಜೊತೆಗೆ ಸಮ-ಬೆಸ ಯೋಜನೆ ಜಾರಿಗೊಳಿಸುವುದರ ಹಿಂದಿನ ಸರ್ಕಾರದ ತರ್ಕವೇನು ಎಂದು ಕೋರ್ಟ್ ಪ್ರಶ್ನಿಸಿತ್ತು.

ಸರ್ಕಾರಕ್ಕೆ ನ್ಯಾಯಾಧೀಶರ ಛಾಟಿ:
ದೆಹಲಿಯಲ್ಲಿ ಈಗಾಗಲೇ ಡೀಸೆಲ್ ಬಳಕೆಯ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಇದರ ಹಿಂದಿನ ಮರ್ಮವನ್ನು ತಿಳಿದುಕೊಳ್ಳಬಹುದು. ಆದರೆ, ಯಾವ ಅಂಶವನ್ನು ಇಟ್ಟುಕೊಂಡು ಸರ್ಕಾರ ಸಮ-ಬೆಸ ಯೋಜನೆ ಜಾರಿಗೊಳಿಸಿದೆ. ಈ ಯೋಜನೆ ಖಾಸಗಿ ಕಾರುಗಳಿಗೆ ಅಷ್ಟೇ ಅನ್ವಯಿಸುತ್ತದೆಯೋ ಅಥವಾ ಸರ್ಕಾರಿ ಬಸ್ ಹಾಗೂ ಆಟೋಗಳಿಗೆ ಅನ್ವಯಿಸುತ್ತಾ. ಒಂದು ವೇಳೆ ಖಾಸಗಿ ಕಾರುಗಳಿಗಷ್ಟೇ ಆದರೆ, ಉಳಿದ ವಾಹನಗಳಿಗೇಕೆ ಈ ನಿಯಮ ಅನ್ವಯ ಆಗುವುದಿಲ್ಲ. ಖಾಸಗಿ ಕಾರುಗಳಿಗಿಂತ ಬಸ್ ಹಾಗೂ ಆಟೋಗಳು, ಟ್ಯಾಕ್ಸಿಗಳು ನಗರದಲ್ಲಿ ಹೆಚ್ಚು ವಾಯುಮಾಲಿನ್ಯ ಸೃಷ್ಟಿಸುತ್ತಿವೆ ಎಂದು ನ್ಯಾಯಾಧೀಶ ಅರುಣ್ ಮಿಶ್ರಾ ಸರ್ಕಾರವನ್ನು ತರಾಟೆ ತೆಗದುಕೊಂಡಿದ್ದಾರೆ.
ಇದರ ಮಧ್ಯೆ ಹರಿಯಾಣ ಮತ್ತು ಗುಜರಾತ್ ನಲ್ಲಿ ಬೆಳೆಯನ್ನು ಸುಡುವಿಕೆಗೆ ಕಡಿವಾಣ ಹಾಕುವಂತೆ ಈ ಹಿಂದೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಅದರಂತೆ ಸದ್ಯಕ್ಕೆ ಎರಡು ರಾಜ್ಯಗಳಲ್ಲಿ ಬೆಳೆಗಳನ್ನು ಸುಡುವ ಪ್ರಯಾಣ ಸ್ವಲ್ಪ ಮಟ್ಟಿಗೆ ತಗ್ಗಿದೆ. ಇದರಿಂದ ವಾಯುಮಾಲಿನ್ಯ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಆದರೂ ಕೂಡಾ ದೆಹಲಿಯಲ್ಲಿ ವಾತಾವರಣ ಇಂದಿಗೂ ಸುಧಾರಣೆ ಕಂಡಿಲ್ಲ. ನೋಯ್ಡಾದಲ್ಲಂತೂ ಪರಿಸ್ಥಿತಿ ತೀರಾ ಕಳಪೆಯಾಗಿದೆ ಎಂದು ಕೋರ್ಟ್ ತಿಳಿಸಿದೆ.












Click it and Unblock the Notifications