ಮೋದಿಯನ್ನು ರಾವಣನಂತೆ ಪ್ರತಿಕೃತಿ ಮಾಡಿ ಸುಟ್ಟ ವಿದ್ಯಾರ್ಥಿಗಳು
ನವದೆಹಲಿ, ಅಕ್ಟೋಬರ್ 13: ದೆಹಲಿಯ ಜವಾಹರಲಾಲ್ ನೆಹರು ವಿವಿಯಲ್ಲಿ (ಜೆಎನ್ಯು) ಕಾಂಗ್ರೆಸ್ ಬೆಂಬಲಿತ ಎನ್ಎಸ್ಯುಐ ಸಂಘಟನೆಯ ವಿದ್ಯಾರ್ಥಿಗಳು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರತಿಕೃತಿ ದಹಿಸಿ ವಿಜಯ ದಶಮಿ ಆಚರಿಸಿದೆ. ಮೋದಿ ಅವರನ್ನು ರಾವಣನಂತೆ ಬಿಂಬಿಸಿ ಪ್ರತಿಕೃತಿಯಲ್ಲಿ ರಾವಣನ ತಲೆಗೆ ಮೋದಿ ಆಪ್ತರ ಚಿತ್ರಗಳನ್ನು ಅಂಟಿಸಲಾಗಿದೆ.
ದೇಶದಾದ್ಯಂತ ನವರಾತ್ರಿ ಅಂಗವಾಗಿ ವಿಜಯದಶಮಿ ದಿನದಂದು ರಾವಣನ ಪ್ರತಿಕೃತಿ ದಹಿಸುವುದು ವಾಡಿಕೆ. ಆದರೆ, ಈ ಬಾರಿ ಪಾಕ್ ಪ್ರಧಾನಿ ನವಾಜ್ ಷರೀಫ್ ಹಾಗೂ ಉಗ್ರರನ್ನು ಆಧುನಿಕ ರಾವಣರೆಂದು ಕರೆದು ಹಲವೆಡೆ ದಹಿಸಲಾಗಿದೆ. [ಜೆಎನ್ ಯು ರೇಪ್ ಕೇಸ್: ವಿದ್ಯಾರ್ಥಿ ಮುಖಂಡ ಅಂದರ್]

ಇದಕ್ಕೆ ಪ್ರತಿಯಾಗಿ ಜವಾಹರಲಾಲ್ ನೆಹರು ವಿವಿಯಲ್ಲಿ (ಜೆಎನ್ಯು) ವಿದ್ಯಾರ್ಥಿ ಸಂಘಟನೆಯವರು ಮೋದಿಯನ್ನು ರಾವಣನಂತೆ ಕಂಡು ಪ್ರತಿಕೃತಿ ದಹಿಸಿರುವುದು ಈಗ ಚರ್ಚೆಯ ವಿಷಯವಾಗಿದೆ.[ದೆಹಲಿ ವಿವಿ ವಿದ್ಯಾರ್ಥಿ ಸಂಘದ ಚುನಾವಣೆ: ಎಬಿವಿಪಿ ಜಯಭೇರಿ]
ಮೋದಿ ಅವರ ಚಿತ್ರ ರಾವಣನ ಮುಖ್ಯ ತಲೆಯಾಗಿದ್ದರೆ, ಯೋಗ ಗುರು ರಾಮ್ದೇವ್, ಸಾಧ್ವಿ ಪ್ರಜ್ಞಾ, ನಾಥೂರಾಮ್ ಗೋಡ್ಸೆ, ಅಸಾರಾಮ್ ಬಾಪು ಮತ್ತು ಜೆಎನ್ಯು ಉಪಕುಲಪತಿ ಜಗದೀಶ್ ಕುಮಾರ್ ಅವರ ಭಾವಚಿತ್ರಗಳು ರಾವಣನ ಇತರೆ ತಲೆಗಳಂತೆ ಬಿಂಬಿಸಿಸಲಾಗಿತ್ತು.

ಘೋಷಣೆಗಳನ್ನು ಕೂಗುತ್ತಾ ಪ್ರತಿಕೃತಿಯನ್ನು ದಹಿಸುವ ದೃಶ್ಯಾವಳಿ ಇರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಆದರೆ, ಈ ವಿಡಿಯೋ ಸತ್ಯಾಸತ್ಯತೆ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.
ಮೋದಿ ಸರ್ಕಾರದ ಜನವಿರೋಧಿ ನೀತಿ, ದಬ್ಟಾಳಿಕೆ ಮತ್ತು ದಲಿತ, ಅಲ್ಪಸಂಖ್ಯಾತರ ವಿರೋಧಿ ಧೋರಣೆಗಳನ್ನು ಖಂಡಿಸಿ ಈ ಪ್ರತಿಕೃತಿಯನ್ನು ದಹಿಸಲಾಗಿದೆ ಎಂದು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ. ಜೆಎನ್ಯು ಕ್ಯಾಂಪಸ್ ನಲ್ಲೇ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಮಾಹಿತಿ ಇನ್ನೂ ಲಭ್ಯವಾಗಿಲ್ಲ.












Click it and Unblock the Notifications