ಲೋಕಸಭೆ ಉಪಚುನಾವಣೆಗೆ ಅಭ್ಯರ್ಥಿಗಳು ಸ್ವಂತ ಹಣ ಖರ್ಚುಮಾಡಲಿ: ಖರ್ಗೆ
ನವದೆಹಲಿ, ಅಕ್ಟೋಬರ್ 08: "ಲೋಕಸಭಾ ಉಪಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣೆಯ ವೆಚ್ಚವನ್ನು ಸ್ವಂತ ಖರ್ಚಿನಲ್ಲೇ ಭರಿಸಲಿ" ಎಂದು ಲೋಕಸಭೆ ಪ್ರತಿಪಕ್ಷ ನಾಯಕ, ಮತ್ತು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ಮೂರ್ನಾಲ್ಕು ತಿಂಗಳಿನಲ್ಲಿಯೇ ಲೋಕಸಭಾ ಚುನಾವಣೆ ನಡೆಯಲಿದ್ದರೂ ಮತ್ತೆ ಉಪಚುನಾವನೆಗಳನ್ನು ಘೋಷಿಸಿರುವ ಚುನಾವಣಾ ಆಯೋಗದ ನಿರ್ಧಾರವನ್ನು ಖರ್ಗೆ ಖಂಡಿಸಿದರು.
ಕರ್ನಾಟಕದ ಶಿವಮೊಗ್ಗ, ಬಳ್ಳಾರಿ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳಲ್ಲಿ ನವೆಂಬರ್ 3 ರಂದು ಉಪಚುನಾವಣೆಗಳನ್ನು ನಡೆಸಲು ಅ.6 ರಂದು ಚುನಾವಣಾ ಆಯೋಗ ಘೋಷಿಸಿದೆ. ಡಿಸೆಂಬರ್ 11 ರಂದು ಇವುಗಳ ಫಲಿತಾಂಶ ಹೊರಬೀಳಲಿದೆ.

ಅಭ್ಯರ್ಥಿಗಳೇ ವೆಚ್ಚ ಭರಿಸಲಿ!
"ವಿಧಾನಸಭೆ ಉಪಚುನಾವಣೆ ಅನಿವಾರ್ಯ ನಿಜ. ಆದರೆ ಲೋಕಸಭೆಗೂ ಉಪಚುನಾವಣೆ ಘೋಷಿಸುವ ಮೊದಲು ರಾಜ್ಯದ ವಿಶ್ವಾಸ ತೆಗೆದುಕೊಳ್ಳಬೇಕಿತ್ತು" ಎಂದು ಅವರು ಅಭಿಪ್ರಾಯಪಟ್ಟರು. ಯಾರ್ಯಾರು ಲೋಕಸಭಾ ಉಪಚುನಾವಣೆಗೆ ಸ್ಪರ್ಧಿಸುತ್ತಾರೋ ಅವರೆಲ್ಲ ತಮ್ಮದೇ ಸ್ವಂತ ಖರ್ಚಿನಲ್ಲಿ ಚುನಾವಣೆ ವೆಚ್ಚ ಭರಿಸಲಿ ಎಂದು ಸಹ ಇದೇ ಸಂದರ್ಭದಲ್ಲಿ ಅವರು ಹೇಳಿದರು.

ಕೇಂದ್ರ ಸರ್ಕಾರ ಚುನಾವಣೆಯನ್ನು ತಪ್ಪಿಸಬಹುದಿತ್ತು!
"ಕೇಂದ್ರ ಸರ್ಕಾರ ಉಪಚುನಾವಣೆಯನ್ನು ತಪ್ಪಿಸಬಹುದಿತ್ತು. ಆದರೆ ಅವರಿಗೆ ಅದು ಬೇಕಿರಲಿಲ್ಲ. ಇದಕ್ಕೂ ಮೊದಲೂ ಅವರು ಅದನ್ನೇ ಮಾಡಿದ್ದರು. ತಮಗೆ ಬೇಕಾದಂತೆ ಚುನಾವಣೆಗಳನ್ನು ಮುಂದೂಡುವುದು, ಮುಂಚಿತವಾಗಿಯೇ ಮಾಡುವುದು ಎವರಿಗೆ ಕರಗತವಾಗಿದೆ. ಕರ್ನಾಟಕದ ಹಲವು ಪ್ರದೇಶಗಳು ಬರದಿಂದ ತತ್ತರಿಸಿದೆ, ಕೆಲವೆಡೆ ಪ್ರವಾಹದಿಂದ ಸಮಸ್ಯೆ ತಲೆದೂರಿದೆ. ಆದರೆ ನೀತಿ ಸಂಹಿತೆಯಿಂದಾಗಿ ಈ ಪ್ರದೇಶಗಳಲ್ಲಿ ಏನೂ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ" ಎಂದು ಅವರು ವಿಷಾದ ವ್ಯಕ್ತಪಡಿಸಿದರು.

2019 ರ ಲೋಕಸಭಾ ಚುನಾವಣೆಗೆ ದಿಕ್ಸೂಚಿ
ಈ ಉಪಚುನಾವಣೆ ಅಗತ್ಯವಿರಲಿಲ್ಲ ಎಂಬುದು ಹಲವರ ಅಭಿಪ್ರಾಯ. ಮಾತ್ರವಲ್ಲ, ಈ ಉಪಚುನಾವಣೆ 2019 ರ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಕರೆಸಿಕೊಳ್ಳುತ್ತಿದೆ. ಆದ್ದರಿಂದ ನಿರ್ಲಕ್ಷ್ಯಿಸುವುದಕ್ಕೂ ಸಾಧ್ಯವಿಲ್ಲ. ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳ ಬಹುತೇಕ ನಾಯಕರೂ ಲೋಕಸಭೆ ಉಪಚುನಾವಣೆಯ ಅಗತ್ಯವಿರಲಿಲ್ಲ ಎಂಬ ಅಭಿಪ್ರಾಯವನ್ನೇ ಹೊರಹಾಕಿರುವುದು ವಿಶೇಷ.

ಉಪಚುನಾವಣೆ ಏಕೆ?
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದ ಬಿ ಎಸ್ ಯಡಿಯೂರಪ್ಪ ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರಿಂದ ತೆರವಾದ ಸ್ಥಾನ, ಬಳ್ಳಾರಿಯಲ್ಲಿ ಸಂಸದರಾಗಿದ್ದ ಶ್ರೀರಾಮುಲು ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರಿಂದ ರಾಜೀನಾಮೆ ನೀಡಿದ ಸ್ಥಾನ ಮತ್ತು ಮಂಡ್ಯದಲ್ಲಿ ಜೆಡಿಎಸ್ ನ ಸಿಎಸ್ ಪುಟ್ಟರಾಜು ಅವರು ವಿಧಾನಸಭೆಗೆ ಆಯ್ಕೆಯಾಗಿದ್ದರಿಂದ ತೆರವಾದ ಸ್ಥಾನಕ್ಕೆ ನ.3 ರಂದು ಉಪಚುನಾವಣೆ ನಡೆಯಲಿದ್ದು, ಡಿ.11 ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications