ವಿಮಾನದಲ್ಲಿ ರಾಹುಲ್ ಗಾಂಧಿ ಎದುರು ದುಃಖ ತೋಡಿಕೊಂಡ ಕಾಶ್ಮೀರಿ ಮಹಿಳೆ
ನವದೆಹಲಿ, ಆಗಸ್ಟ್ 25: ಜಮ್ಮು- ಕಾಶ್ಮೀರದ ಶ್ರೀನಗರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪ್ರವೇಶ ನಿರಾಕರಿಸಿದ ಮೇಲೆ ಅಲ್ಲಿಂದ ದೆಹಲಿಗೆ ಹಿಂತಿರುಗುವಾಗ ವಿಮಾನದಲ್ಲಿ ಕಾಶ್ಮೀರಿ ಮಹಿಳೆಯೊಬ್ಬರು ತಮ್ಮ ದುಃಖವನ್ನು ಹೇಳಿಕೊಂಡಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ಅವರ ಜತೆಯಲ್ಲಿ ವಿರೋಧ ಪಕ್ಷದ ಇತರ ನಾಯಕರೂ ಇದ್ದರು.
ಮಹಿಳೆಯು ರಾಹುಲ್ ಗಾಂಧಿ ಜತೆಗೆ ದುಃಖ ಹಂಚಿಕೊಳ್ಳುತ್ತಿರುವ ವಿಡಿಯೋವನ್ನು ಕಾಂಗ್ರೆಸ್ ವಕ್ತಾರೆ ರಾಧಿಕಾ ಖೇರಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಜಮ್ಮು- ಕಾಶ್ಮೀರದಲ್ಲಿ ಪರಿಚ್ಛೇದ 370 ರದ್ದು ಮಾಡಿದ ಮೇಲೆ ಅಲ್ಲಿನ ಜನಜೀವನ ಹೇಗೆ ತೊಂದರೆಗೆ ಸಿಲುಕಿದೆ ಎಂದು ಆಕೆ ವಿವರಿಸಿದ್ದಾರೆ.
ವಿಡಿಯೋದಲ್ಲಿ ಕಂಡುಬರುವಂತೆ, ರಾಹುಲ್ ಗಾಂಧಿ ಅವರು ವಿಮಾನದಲ್ಲಿ ಕಿಟಕಿ ಪಕ್ಕ ಕೂತಿದ್ದಾರೆ. "ನಮ್ಮ ಮಕ್ಕಳು ಮನೆಯಿಂದ ಆಚೆ ಬರುವುದಕ್ಕೆ ಆಗುತ್ತಿಲ್ಲ. ನನ್ನ ಸೋದರನಿಗೆ ಹೃದಯ ಸಂಬಂಧಿ ಕಾಯಿಲೆ ಇದೆ. ಕಳೆದ 10 ದಿನದಿಂದ ವೈದ್ಯರನ್ನು ಕಾಣುವುದಕ್ಕೆ ಆಗಿಲ್ಲ. ನಾವು ಸಮಸ್ಯೆಯಲ್ಲಿ ಇದ್ದೇವೆ" ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ಆ ವೇಳೆ ರಾಹುಲ್ ಗಾಂಧಿ ಎದ್ದು ಬಂದು, ಮಹಿಳೆಯನ್ನು ಸಮಾಧಾನ ಮಾಡಿದ್ದಾರೆ. ಗುಲಾಮ್ ನಬಿ ಅಜಾದ್, ಆನಂದ್ ಶರ್ಮಾ, ಕೆ. ಸಿ. ವೇಣುಗೋಪಾಲ್ ಮತ್ತಿತರ ನಾಯಕರು ಆ ಮಹಿಳೆಯು ಭಾವನಾತ್ಮಕವಾಗಿ ಉದ್ವೇಗಕ್ಕೆ ಒಳಗಾಗಿ ಮಾತನಾಡಿದ್ದನ್ನು ಕೇಳಿಸಿಕೊಂಡಿದ್ದಾರೆ.
ಕಣಿವೆ ರಾಜ್ಯದಲ್ಲಿ ವಾಸ್ತವ ಸ್ಥಿತಿ ಅರಿಯುವ ಸಲುವಾಗಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಹನ್ನೆರಡು ಮಂದಿ ವಿಪಕ್ಷ ನಾಯಕರು ತೆರಳಿದ್ದರು. ಅವರನ್ನು ಶ್ರೀನಗರ್ ವಿಮಾನ ನಿಲ್ದಾಣದಲ್ಲಿ ತಡೆದು, ದೆಹಲಿಗೆ ವಾಪಸ್ ಕಳುಹಿಸಲಾಗಿದೆ.
ದೆಹಲಿಗೆ ಹಿಂತಿರುಗಿದ ಮೇಲೆ ಮಾತನಾಡಿರುವ ರಾಹುಲ್ ಗಾಂಧಿ, ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಸಹಜವಾಗಿಲ್ಲ. ಜನರು ಏನಂದುಕೊಳ್ಳುತ್ತಿದ್ದಾರೆ ಎಂದು ತಿಳಿದುಕೊಳ್ಳುವುದಕ್ಕೆ ತೆರಳಿದ್ದೆವು. ಆದರೆ ವಿಮಾನ ನಿಲ್ದಾಣದಿಂದ ಆಚೆಗೆ ಕೂಡ ನಮ್ಮನ್ನು ಬಿಡಲಿಲ್ಲ ಎಂದಿದ್ದಾರೆ.
ನಮ್ಮ ಜತೆಗೆ ಇದ್ದ ಮಾಧ್ಯಮದವರ ಮೇಲೆ ಕೈ ಮಾಡಲಾಯಿತು. ಜಮ್ಮು- ಕಾಶ್ಮೀರ ಸಹಜವಾಗಿಲ್ಲ ಎಂಬುದು ಇದರಿಂದಲೇ ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications