ಅನರ್ಹ ಶಾಸಕರ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ
ನವದೆಹಲಿ, ಅಕ್ಟೋಬರ್ 21: ಮಂಗಳವಾರ (ಅಕ್ಟೋಬರ್ 22) ಸುಪ್ರೀಂಕೋರ್ಟ್ನಲ್ಲಿ ನಡೆಯಬೇಕಿದ್ದ ಕರ್ನಾಟಕದ 17 ಅನರ್ಹ ಶಾಸಕರ ಅರ್ಜಿ ವಿಚಾರಣೆ ಮುಂದೂಡಲ್ಪಟ್ಟಿದೆ.
ಅನರ್ಹ ಶಾಸಕರ ವಿರುದ್ಧ ವಾದ ಮಂಡಿಸುತ್ತಿರುವ ವಕೀಲ ಕಪಿಲ್ ಸಿಬಲ್ ಮನವಿಯಂತೆ ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ (ಅಕ್ಟೋಬರ್ 23) ಕ್ಕೆ ಮುಂದೂಡಲಾಗಿದೆ. ಸೋಮವಾರ ಬೆಳಿಗ್ಗೆ ಸುಪ್ರೀಂಗೆ ಮನವಿ ಮಾಡಿದ್ದ ಕಪಿಲ್ ಸಿಬಲ್ ಒಂದು ವಾರ ವಿಚಾರಣೆಯನ್ನು ಮುಂದೂಡುವಂತೆ ಕೋರಿದ್ದರು. ಇದಕ್ಕೆ ಒಪ್ಪದ ಸುಪ್ರೀಂ ಒಂದು ದಿನವಷ್ಟೆ ಮುಂದೂಡಿದೆ.
ಸೆಪ್ಟೆಂಬರ್ 27 ರಂದು ಅನರ್ಹ ಶಾಸಕರ ಪ್ರಕರಣ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಘೋಷಣೆಯಾಗಿದ್ದ ಉಪಚುನಾವಣೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಆದೇಶ ನೀಡಲಾಗಿತ್ತು. ಅಂದೇ ಹೆಚ್ಚಿನ ವಿಚಾರಣೆಯನ್ನು ಅಕ್ಟೋಬರ್ 22 ಕ್ಕೆ ಮುಂದೂಡಲಾಗಿತ್ತು. ಆದರೆ ಈಗ ಮತ್ತೆ ಒಂದು ದಿನ ವಿಚಾರಣೆ ಮುಂದೂಡಲಾಗಿದೆ.

ಪಕ್ಷಾಂತರ ತಡೆ ಕಾಯ್ದೆ ಅನ್ವಯ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು 17 ಶಾಸಕರನ್ನು ಅನರ್ಹಗೊಳಿಸಿದ್ದರು. ತಮ್ಮ ಅನರ್ಹತೆ ಪ್ರಶ್ನಿಸಿ ಇಷ್ಟೂ ಮಂದಿ ಶಾಸಕರು ಸುಪ್ರೀ ಮೊರೆ ಹೋಗಿದ್ದರು. ವಿಚಾರಣೆ ಮುಂದೂಡುತ್ತಲೇ ಬಂದಿದ್ದ ಸುಪ್ರೀಂ ಕೊನೆಗೆ ಸೆಪ್ಟೆಂಬರ್ 17 ರಂದು ವಿಚಾರಣೆ ನಡೆಸಿ ಉಪಚುನಾವಣೆಗೆ ತಡೆ ನೀಡಿ, ಅಕ್ಟೋಬರ್ 22 ಕ್ಕೆ ಮುಂದಿನ ವಿಚಾರಣೆ ಮಾಡುವುದಾಗಿ ಹೇಳಿತ್ತು.
ಚುನಾವಣೆ ಆಯೋಗವು ಮತ್ತೆ ಉಪಚುನಾವಣೆ ಅವಧಿ ನಿಗದಿಪಡಿಸಿದ್ದು, ಡಿಸೆಂಬರ್ 5 ಕ್ಕೆ 17 ಕ್ಷೇತ್ರಗಳ ಉಪಚುನಾವಣೆ ನಡೆಯಲಿದ್ದು, ಡಿಸೆಂಬರ್ 9 ಕ್ಕೆ ಉಪಚುನಾವಣೆ ಫಲಿತಾಂಶ ಪ್ರಕಟಗೊಳ್ಳಲಿದೆ.












Click it and Unblock the Notifications