ದೀಪಕ್ ಮಿಶ್ರಾ ವಿರುದ್ಧ ಕುರಿಯನ್ ಜೋಸೆಫ್ ಶಾಕಿಂಗ್ ಹೇಳಿಕೆ!
ನವದೆಹಲಿ, ಡಿಸೆಂಬರ್ 03: ಇತ್ತೀಚೆಗಷ್ಟೇ ನಿವೃತ್ತರಾದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ಕುರಿಯನ್ ಜೋಸೆಫ್ ಅವರು ನೀಡಿರುವ ಹೇಳಿಕೆ ವಿವಾದದ ಕೇಂದ್ರಬಿಂದುವಾಗಿದೆ.
ಆಗಿನ ಮುಖ್ಯನ್ಯಾಯಮೂರ್ತಿಯಾಗಿದ್ದ ದೀಪಕ್ ಮಿಶ್ರಾ ಅವರು ರಿಮೋಟ್ ಕಂಟ್ರೋಲ್ ಸಿಜೆಐ ಆಗಿದ್ದರು. ಪ್ರಕರಣಗಳ ಹಂಚಿಕೆಯ ವಿಷಯದಲ್ಲಿ ಅವರ ಮೇಲೆ ಕೆಲವು ರಾಜಕೀಯ ಒತ್ತಡಗಳಿದ್ದವು. ಕೆಲವು ಶಕ್ತಿಗಳ ಪ್ರಭಾವದಿಂದ ಅವರು ಪ್ರಕರಣಗಳನ್ನು ತಮಗಿಷ್ಟಬಂದವರಿಗೆ ಹಂಚುತ್ತಿದ್ದರು. ರಾಜಕೀಯ ಅಭಿಪ್ರಾಯದ ಆಧಾರದ ಮೇಲೆ ಅವರು ತಾರತಮ್ಯ ಮಾಡಿ ಪ್ರಕರಣ ಹಂಚುತ್ತಿದ್ದರು ಎಂದು ಜೋಸೆಫ್ ದೂರಿದ್ದಾರೆ.
ಕಳೆದ ಜನವರಿ 12 ರಂದು ಸುಪ್ರೀಂ ಕೋರ್ಟ್ ನ ನಾಲ್ವರು ಹಿರಿಯ ನ್ಯಾಯಾಧೀಶರು ಸೇರಿ, ಸಿಜೆಐ ವಿರುದ್ಧವೇ ಬಹಿರಂಗವಾಗಿ ಆರೋಪ ಮಾಡಿದ್ದರು, ಪತ್ರಿಕಾಗೋಷ್ಠಿ ಕರೆದು ನ್ಯಾಯಾಂಗ ವ್ಯವಸ್ಥೆಯಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸೂಚನೆ ನೀಡಿದ್ದರು.

ನ್ಯಾ.ಜೋಸೆಫ್ ಅವರೊಂದಿಗೆ, ನ್ಯಾ ಜಸ್ಟಿ ಚಲಮೇಶ್ವರ್, ಹಾಲಿ ಸಿಜೆಐ ನ್ಯಾ.ರಂಜನ್ ಗೊಗೊಯ್, ನ್ಯಾ.ಮದನ್ ಬಿ ಲಾಕೂರ್ ಅವರು ಕರೆದಿದ್ದ ಈ ಪತ್ರಿಕಾ ಗೋಷ್ಠಿ ಸಾಕಷ್ಟು ವಿವಾದ ಸೃಷ್ಟಿಸಿತ್ತು.
ಇದೀಗ ನಿವೃತ್ತ ನ್ಯಾಯಾಧೀಶ ಜೊಸೆಫ್ ಅವರು ಮತ್ತೆ ದೀಪಕ್ ಮಿಶ್ರಾ ಅವರ ವಿರುದ್ಧ ತಿರುಗಿಬಿದ್ದಿದ್ದಾರೆ. ದೀಪಕ್ ಮಿಶ್ರಾ ಅವರನ್ನು ಯಾವುದೋ ಬಾಹ್ಯ ಶಕ್ತಿ ನಿಯಂತ್ರಿಸುತ್ತಿತ್ತು. ಅದು ನಮ್ಮ ಅನುಭವಕ್ಕೆ ಬರುತ್ತಿದ್ದಂತೆಯೇ ನಾವು ಅವರನ್ನು ಭೇಟಿ ಮಾಡಿ ಮಾತನಾಡಿದೆವು, ಪತ್ರ ಬರೆದೆವು. ಸುಪ್ರೀಂ ಕೋರ್ಟ್ ನ ಸ್ವಾತಂತ್ರ್ಯ ಮತ್ತು ಘನತೆಯನ್ನು ಎತ್ತಿಹಿಡಿಯುವಂತೆ ಮನವಿ ಮಾಡಿದೆವು. ಆದರೆ ಇದ್ಯಾವುದೂ ಫಲನೀಡದಿದ್ದಾಗ, ಬೇರೆ ದಾರಿ ಕಾಣದೆ ಪತ್ರಿಕಾ ಗೋಷ್ಠಿ ಕರೆದೆವು ಎಂದು ಕುರಿಯನ್ ಜೋಸೆಫ್ ಹೇಳಿದರು.












Click it and Unblock the Notifications