ಕೇಂದ್ರ ಸರ್ಕಾರದಿಂದ ಜಡ್ಜ್ ಗಳ ದೂರವಾಣಿ ಕದ್ದಾಲಿಕೆ: ಕೇಜ್ರಿವಾಲ್
ದೆಹಲಿ ಹೈಕೋರ್ಟಿನ 50ನೇ ವರ್ಷಾಚರಣೆ ಸಂದರ್ಭದಲ್ಲಿ ಪಾಲ್ಗೊಂಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ನ್ಯಾಯಾಧೀಶರ ದೂರವಾಣಿಗಳನ್ನು ಕದ್ದಾಲಿಸಲಾಗುತ್ತಿದೆ ಎಂಬುದಾಗಿ ಗಂಭೀರ ಆರೋಪ ಮಾಡಿದ್ದಾರೆ
ನವದೆಹಲಿ, ಅಕ್ಟೋಬರ್ 31: ದೆಹಲಿ ಹೈಕೋರ್ಟಿನ 50ನೇ ವರ್ಷಾಚರಣೆ ಸಂದರ್ಭದಲ್ಲಿ ಪಾಲ್ಗೊಂಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ನ್ಯಾಯಾಧೀಶರ ದೂರವಾಣಿಗಳನ್ನು ಕದ್ದಾಲಿಸಲಾಗುತ್ತಿದೆ ಎಂಬುದಾಗಿ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಅದೇ ವೇದಿಕೆಯಲ್ಲಿ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಆರೋಪವನ್ನು ಅಲ್ಲಗೆಳೆದರು.
ಸಮಾರಂಭದಲ್ಲಿ ಮಾತನಾಡಿದ ಕೇಜ್ರಿವಾಲ್ ಅವರು ನ್ಯಾಯಾಧೀಶರ ನೇಮಕಾತಿಗಳ ವಿಚಾರ ಮಾತನಾಡುತ್ತಾ 'ನ್ಯಾಯಾಧೀಶರ ಕೆಲಸದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ. ನ್ಯಾಯಾಧೀಶರ ದೂರವಾಣಿಗಳನ್ನು ಕದ್ದಾಲಿಸಲಾಗುತ್ತಿದೆ ಮತ್ತು ಅವರು ಮಾತನಾಡಲು ಹೆದರುತ್ತಿದ್ದಾರೆ ಎಂದು ನಾನು ಕೇಳಿದ್ದೇನೆ. ಇದು ತಪ್ಪು ಹೀಗಾಗಲು ಬಿಡಬಾರದು' ಎಂದು ಹೇಳಿದರು.

ಇದಕ್ಕೆ ಉತ್ತರವಾಗಿ ಕೇಂದ್ರ ಕಾನೂನು ಸಚಿವ ರವಿ ಶಂಕರ ಪ್ರಸಾದ್ ಅವರು, ಕೇಜ್ರಿವಾಲ್ ಮಾತುಗಳನ್ನು ನಿರಾಕರಿಸಿ, 'ನಾನು ಎರಡು ವರ್ಷಗಳಿಂದ ಸಂಪರ್ಕ ಸಚಿವನಾಗಿದ್ದೇನೆ. ನ್ಯಾಯಾಧೀಶರ ದೂರವಾಣಿಗಳನ್ನು ಕದ್ದಾಲಿಸಲಾಗುತ್ತಿದೆ ಎಂಬುದನ್ನು ನಾನು ನಿರಾಕರಿಸುತ್ತೇನೆ' ಎಂದು ಅವರು ಹೇಳಿದರು.
ನ್ಯಾಯಾಧೀಶರ ನೇಮಕಾತಿ ವಿಳಂಬಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಇದಕ್ಕೆ ಪೂರಕವಾಗಿ ಕೇಜ್ರಿವಾಲ್ ಈ ರೀತಿ ಆರೋಪ ಮಾಡಿದರು.(ಒನ್ಇಂಡಿಯಾ ಸುದ್ದಿ)












Click it and Unblock the Notifications