ಮೋದಿ ಬೆಂಬಲಿಸಿ ಬಿಜೆಪಿ ಕೈಹಿಡಿದ ಹಿರಿಯ ಪತ್ರಕರ್ತ
ನವದೆಹಲಿ, ಮಾರ್ಚ್ 22- ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಇಂದೊಂದು ಹಿತಕರ ಸುದ್ದಿ ಕೇಳಿಬಂದಿದೆ. ಎಂಜೆ ಅಕ್ಬರ್ ಎಂಬ ಹಿರಿಯ ಪತ್ರಕರ್ತ, ರಾಜಕೀಯ ಪಂಡಿತ ಇಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
63 ವರ್ಷದ ಮೊಬಾಶರ್ ಜಾವೆದ್ ಅಕ್ಬರ್ ಅವರನ್ನು ಪಕ್ಷದ ವಕ್ತಾರರನ್ನಾಗಿ ನೇಮಿಸಲಾಗುವುದು ಎಂದು ಬಿಜೆಪಿ ಮೂಲಗಳು ಹೇಳಿವೆ. ತನ್ನ ಪೂರ್ವಿಕರು ಹಿಂದೂಗಳಾಗಿದ್ದರು ಎಂದು ಹೇಳಿದ್ದ ಎಂಜೆ ಅಕ್ಬರ್ ಪಶ್ಚಿಮ ಬಂಗಾಳದ ಕೋಲ್ಕತಾದವರು.

ರಾಜೀವ್ ಗಾಂಧಿ ಅವರು ಪ್ರಧಾನಿ ಆಗಿದ್ದಾಗ ಕಾಂಗ್ರೆಸ್ ಪಕ್ಷದ ಜತೆ ಗುರುತಿಸಿಕೊಂಡಿದ್ದ ಎಂಜೆ ಅಕ್ಬರ್, ಹೊಸ ಬೆಳವಣಿಗೆಯ ಹಿನ್ನೆಲೆಯಲ್ಲಿ ಇನ್ನು ಮುಂದೆ ಮಾಧ್ಯಮಗಳಲ್ಲಿ ಬಿಜೆಪಿ ಪಕ್ಷವನ್ನು ಪ್ರತಿನಿಧಿಸಲಿದ್ದಾರೆ.
ಎಂಜೆ ಅಕ್ಬರ್ ಸಾರಥ್ಯದಲ್ಲಿ India Today, Sunday Guardian ಮತ್ತು The Asian Age ಆಂಗ್ಲ ಪತ್ರಿಕೆಗಳು ಮೂಡಿಬಂದಿದ್ದವು. ರಾಜೀವ್ ಗಾಂಧಿ ಕಾಲದಲ್ಲಿ 1989ರಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಬಿಹಾರದ ಕಿಶನ್ ಗಂಜ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅಕ್ಬರ್, 1991ರಲ್ಲಿ ಕ್ಷೇತ್ರದಲ್ಲಿ ಸೋಲುಂಡಿದ್ದರು.
ಜಸ್ವಂತ್ ಸಿಂಗ್ ಪಕ್ಷದಿಂದ ವಿಮುಖ:
ಮತ್ತೊಂದು ಗಮನಾರ್ಹ ಬೆಳವಣಿಗೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರು ರಾಜಸ್ಥಾನದ ಬಾರ್ಮರ್ ಕ್ಷೇತ್ರದಿಂದ ಸ್ಪರ್ಧಿಸಲು ತಮಗೆ ಟಿಕೆಟ್ ನೀಡಲಿಲ್ಲವೆಂದು ಮುನಿಸಿಕೊಂಡು ಪಕ್ಷಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಚುನಾವಣೆ ಸಮ್ಮುಖದಲ್ಲಿ ಜಸ್ವಂತ್ ಸಿಂಗ್ ಅವರಂತಹ ಹಿರಿಯರು ಪಕ್ಷದಿಂದ ವಿಮುಖವಾಗುತ್ತಿರುವುದು ಬಿಜೆಪಿಗೆ ಹಿನ್ನಡೆಯಾಗಿದೆ.
ಅಟಲ್ ಬಿಹಾರಿ ವಾಜಪೇಯಿ ಅವರ ಸರಕಾರದಲ್ಲಿ ಜಸ್ವಂತ್ ಸಿಂಗ್ ಅವರು ವಿದೇಶಾಂಗ ಸಚಿವರಾಗಿದ್ದರು. ಹಿಂದಿನ ಲೋಕಸಭೆಯಲ್ಲಿ ಡಾರ್ಜಿಲಿಂಗ್ ಕ್ಷೇತ್ರದಿಂದ ಜಯಶಾಲಿಯಾಗಿದ್ದರು. ಬಿಜೆಪಿ ಪಕ್ಷವು ಡಾರ್ಜಿಲಿಂಗ್ ಕ್ಷೇತ್ರದಿಂದ ಮಾಜಿ ಕಾಂಗ್ರೆಸ್ ನಾಯಕ ನಿವೃತ್ತ ಕರ್ನಲ್ ಸೋನರಾಂ ಚೌಧರಿ ಅವರಿಗೆ ಟಿಕೆಟ್ ನೀಡಿದೆ.
ಗಮನಾರ್ಹವೆಂದರೆ ಜಸ್ವಂತ್ ಅವರ ಪುತ್ರ ಮನ್ವೇಂದ್ರ ಸಿಂಗ್ ಅವರು ಬಾರ್ಮರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಶಿಯೋ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ. ಜಸ್ವಂತ್ ಸಿಂಗ್ ಅವರು ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರ ಕಟ್ಟಾ ಅನುಯಾಯಿ.












Click it and Unblock the Notifications